ರಮ್ಯಾ ಹೆಸರಿನ ಮೂಲಕ ಪಬ್ಲಿಸಿಟಿಯ ತಂತ್ರವೇಕೆ?
ಚಂದ್ರ ಚಿತ್ರದಿಂದ ರಮ್ಯಾ ಔಟ್ ಆದ ನಂತರ ಬಿಡುಗಡೆಯಾದ ಚಿತ್ರ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಜೋಡಿಯ 'ಕಠಾರಿವೀರ ಸುರಸುಂದರಾಂಗಿ'. ಈ ಚಿತ್ರವೀಗ ಹಾಕಿದ ದುಡ್ಡು ವಾಪಸ್ ಪಡೆದುಕೊಂಡಿದ್ದಲ್ಲದೇ ಇನ್ನು ಯಶಸ್ವಿಯಾಗಿ ಮುಂದುರಿಯುತ್ತಿದೆ. ಅಷ್ಟೇ ಅಲ್ಲ, ಅದರಲ್ಲಿ ರಮ್ಯಾ ಪಾತ್ರ ಹಾಗೂ ಅಭಿನಯ ಪ್ರೇಕ್ಷಕರ ಪ್ರಶಂಸೆ ಗಳಿಸಿದೆ. ಆದರೂ ಚಂದ್ರದಿಂದ ರಮ್ಯಾ ಹೊರಬಂದ ವಿಷಯವೇ ಅದಕ್ಕಿಂತಲೂ ದೊಡ್ಡದಾಗಿ ಪ್ರಚಾರ ಪಡೆಯುತ್ತಿದೆ.
ಅದ್ಯಾಕೋ ಏನೋ, ರಮ್ಯಾ ಏನೇ ಮಾಡಿದರೂ, ಮಾಡದಿದ್ದರೂ ದೊಡ್ಡ ಸುದ್ದಿಯಾಗುತ್ತದೆ. ಏನಾದರೂ ಅಂದರೂ, ಅನ್ನದಿದ್ದರೂ ರಮ್ಯಾ ಸುದ್ದಿ ಮಾತ್ರ ಗಾಳಿಯಲ್ಲಿ ತೇಲುತ್ತಲೇ ಇರುತ್ತದೆ. ಕೆಲವೊಮ್ಮೆ ಸುದ್ದಿ ಮಾತ್ರವಲ್ಲ, ಅದು ವಿವಾದದ ರೂಪವನ್ನೂ ಪಡೆದು ಆಮೇಲೆ ಸುಖಾಂತ್ಯ ಕಾಣುತ್ತದೆ. ಚಂದ್ರ ಚಿತ್ರದ ಮುಹೂರ್ತಕ್ಕೂ ಮೊದಲಾದ ಈ ಬೆಳವಣಿಗೆಗೆ ಈಗಾಲಾದರೂ ಕಡಿವಾಣ ಬೀಳಬೇಕಿತ್ತು. ಆದರೆ ಹಾಗಾಗುತ್ತಿಲ್ಲ.
ಈ ಕುರಿತು ರಮ್ಯಾ ವಕ್ತಾರರು ಹೇಳುವುದಿಷ್ಟು. "ರಮ್ಯಾ ಆ ಚಿತ್ರದಿಂದ ಹೊರಬಂದಾಗಿದೆ. ಅವರು ಯಾವತ್ತೂ ತಮ್ಮ ಪಾತ್ರ ಹಾಗೂ ಕಥೆಯ ಬಗ್ಗೆ ತೀರಾ ಮಹತ್ವ ಕೊಡುತ್ತಾರೆ. ಮೊದಲು ಒಪ್ಪಿ ನಂತರ ರಮ್ಯಾ ಹೊರಬರಲು ಬಲವಾದ ಕಾರಣಗಳಿವೆ. ಚಿತ್ರತಂಡದೊಂದಿಗೆ ಕುಳಿತು, ಚರ್ಚಿಸಿ ನಂತರವೇ ಹೊರಗೆ ಬಂದಿದ್ದಾರೆ. ಅದರಲ್ಲಿ ಯಾವುದೇ ಅನುಮಾನಕ್ಕೂ ಜಾಗವಿಲ್ಲ. ಅದನ್ನು ರಮ್ಯಾ ಹೇಳಿಕೊಂಡು ಓಡಾಡುತ್ತಿಲ್ಲ ಅಷ್ಟೇ.
ಅಷ್ಟಕ್ಕೂ ಚಿತ್ರರಂಗದಲ್ಲಿ ಅದೆಲ್ಲಾ ಸಹಜ. ಅದರಲ್ಲೂ ರಮ್ಯಾರಂತ ದೊಡ್ಡ ನಟಿಗೆ ಪಾತ್ರದ ಆಯ್ಕೆ, ಚಿತ್ರತಂಡದ ಬಗ್ಗೆ ಸರಿಯಾದ ಜ್ಞಾನ ಇದ್ದೇ ಇರುತ್ತದೆ. ರೂಪಾ ಅಯ್ಯರ್ ಅವರಂತೂ ರಮ್ಯಾರ ಆಪ್ತ ಗೆಳತಿ ಬೇರೆ. ಹೀಗಾಗಿ ಚಂದ್ರ ಚಿತ್ರದಿಂದ ಹೊರಬಂದ ವಿಷಯ ದೊಡ್ಡ ರಾದ್ಧಾಂತವಾಗುವ ಯಾವ ಅಗತ್ಯವೂ ಇಲ್ಲ. ಶ್ರೀಯಾ ಬಂದಾಗಿದೆ, ಮುಹೂರ್ತ ನಡೆದಾಗಿದೆ.
ನಟ ಪ್ರೇಮ್ ಜೊತೆ ರಮ್ಯಾ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಪ್ರೇಮ್, ರಮ್ಯಾಗೆ ಹೊಸಬರಂತೂ ಅಲ್ಲ. ಇನ್ನು ಈ ಕುರಿತು ನಟ ಪ್ರೇಮ್ ಕೂಡ ಎಲ್ಲೂ ರಮ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ರಮ್ಯಾ ಕೂಡ ಅಷ್ಟೇ, ತಾವು ಹೊರಬರಲು ಪ್ರೇಮ್ ಅವರೇ ಕಾರಣ ಎಂದು ಎಲ್ಲೂ ಪ್ರೇಮ್ ಮೇಲೆ ಆರೋಪ ಮಾಡಿಲ್ಲ. ಅಂದಮೇಲೆ ಸುಮ್ಮನೆ ಪ್ರೇಮ್ ಮತ್ತು ರಮ್ಯಾ ನಡುವೆ ಜಟಾಪಟಿ ನಡೆದಿದೆ ಎನ್ನುವ ಸುದ್ದಿಗೆ ಯಾವ ಅರ್ಥವೂ ಇಲ್ಲ.
ಇನ್ನು ಮುಂದಾದರೂ ಚಂದ್ರ ಚಿತ್ರದ ಹೆಸರಿನೊಡನೆ ರಮ್ಯಾ ಹೆಸರು ಕೇಳಿಬರುವುದು, ಸುಮ್ಮನೆ ರಮ್ಯಾರನ್ನು ಎಲ್ಲದಕ್ಕೂ ಎಳೆದುತರುವ ಸಂಪ್ರದಾಯ ನಿಲ್ಲಬೇಕು. ಅವರಿಗಿಟಷ್ಟವಾದರೆ ಮಾಡುತ್ತಾರೆ, ಇಲ್ಲದಿದ್ದರೆ ಮಾತನಾಡಿಕೊಂಡು ಹೊರಬರುತ್ತಾರೆ ಅಷ್ಟೇ. ಚಂದ್ರ ಚಿತ್ರತಂಡ ಕೂಡ ರಮ್ಯಾರ ಹೆಸರನ್ನು ತಮ್ಮ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರಕ್ಕೆ ಬಲಿಯಾಗಬಾರದು" ಎಂದು ರಮ್ಯಾ ವಕ್ತಾರರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












