ಚಿತ್ರಮಂದಿರಗಳಲ್ಲಿ ನಾಡಗೀತೆ ಕಡ್ಡಾಯಗೊಳಿಸಿ: ಸಿಎಂಗೆ ನಟ ಝೈದ್ ಖಾನ್ ಮನವಿ
ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ 'ಬನರಾಸ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಬೆಲ್ ಬಾಟಮ್ ಚಿತ್ರದ ನಿರ್ದೇಶಕ ಜಯತೀರ್ಥ ನಿರ್ದೇಶಿಸಿರುವ 'ಬನರಾಸ್' ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲು ಸಜ್ಜಾಗಿದೆ.
ಸೆಪ್ಟೆಂಬರ್ 26 ರಂದು 'ಬನರಾಸ್' ಚಿತ್ರದ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಝೈದ್ ಖಾನ್ಗೆ ಜೋಡಿಯಾಗಿ ರಾಬರ್ಟ್ ಚಿತ್ರ ಖ್ಯಾತಿಯ ಸೋನಲ್ ಮಾಂಥೆರೋ ನಟಿಸಿದ್ದಾರೆ. ಬನರಾಸ್ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಜನರ ಮೆಚ್ಚುಗೆ ಪಡೆದುಕೊಂಡಿದೆ.
ತಮ್ಮ ಮೊದಲ ಚಿತ್ರ ಬಿಡುಗಡೆಗೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ನಟ ಝೈದ್ ಖಾನ್ ಇಂದು(ಅಕ್ಟೋಬರ್ 1) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಝೈದ್ ಖಾನ್ ಇಂದು(ಅಕ್ಟೋಬರ್ 1) ಬೆಳ್ಳಂಬೆಳಗ್ಗೆ ದಿಢೀರ್ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿವಿಧ ಸಂಘಟನೆಗಳೊಂದಿಗೆ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿರುವ ಝೈದ್ ಖಾನ್ ಹೊಸ ಬೇಡಿಕೆಯೊಂದನ್ನು ಸಿಎಂ ಮುಂದಿರಿಸಿದ್ದಾರೆ.
ಕನ್ನಡ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿರುವ ಝೈದ್ ಖಾನ್ ಕರ್ನಾಟಕದ ಚಿತ್ರಮಂದಿರಗಳಲ್ಲಿ ರಾಷ್ಟ್ರ ಗೀತೆ ಜೊತೆಗೆ ನಾಡ ಗೀತೆಯನ್ನು ಕಡ್ಡಾಯಗೊಳಿಸುವಂತೆ ಮನವಿ ಮಾಡಿದ್ದಾರೆ. ತಮ್ಮ ಸಿಎಂ ಭೇಟಿಯ ಉದ್ದೇಶವನ್ನು ಸ್ವತಃ ಝೈದ್ ಖಾನ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಸುಮಾರು ಒಂದು ವರ್ಷಗಳಿಂದ ಒಂದು ವಿಚಾರ ನನನ್ನು ಕಾಡುತಿತ್ತು. ಈ ಬಗ್ಗೆ ನಮ್ಮ ಕರ್ನಾಟಕದ ಒಂದಿಷ್ಟು ಸಂಘಟನೆಗಳೊಂದಿಗೆ ಚರ್ಚೆ ನಡೆಸಿ ಮುಖ್ಯಮಂತ್ರಿ ಬಸವರಾಜ್ ಅವರ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದೇವೆ. ನಾನು ಒಬ್ಬ ಸಾಮಾನ್ಯ ಕಲಾವಿದನಾಗಿ ಕರ್ನಾಟಕ ಚಿತ್ರಮಂದಿರಗಳಲ್ಲಿ ಕರ್ನಾಟಕದ ನಾಡ ಗೀತೆ ಕೇಳಬೇಕು ಎನ್ನುವುದು ನಮ್ಮ ಆಸೆ. ಹಾಗಾಗಿ ಆ ಪರವಾಗಿ ಬೇಡಿಕೆ ಇಡಲು ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದೇನೆ ಎಂದರು.
ಮಾತು ಮುಂದುವರಿಸಿದ ಝೈದ್ ಖಾನ್, ಸಿಎಂ ನಮ್ಮ ಬೇಡಿಕೆಯನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಫಿಲ್ಮ ಛೇಂಬರ್ ಅವರ ಬಳಿ ಮಾತನಾಡುತ್ತೇನೆ ಎಂದಿದ್ದಾರೆ. ಒಬ್ಬ ಕನ್ನಡಿಗನಾಗಿ ನಾವು ನಮ್ಮ ನಾಡಗೀತೆಗೂ ಮರ್ಯಾದೆ ಕೊಡಬೇಕು. ಈಗ ಚಿತ್ರಮಂದಿರಗಳಿಗೆ ಹೋದರೆ ರಾಷ್ಟ್ರ ಗೀತೆಯನ್ನು ಪ್ಲೇ ಮಾಡುತ್ತಾರೆ. ಆಗ ನಾವು ಎದ್ದು ನಿಂತು ಗೌರವ ಕೊಡುತ್ತೇವೆ. ಅದೇ ರೀತಿ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ನಾಡಗೀತೆ ಹಾಕಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು ಝೈದ್ ಖಾನ್.
ನವೆಂಬರ್ 4ರಂದು ಬಿಡುಗಡೆಯಾಗಲಿರುವ ಝೈದ್ ಖಾನ್ ನಟನೆಯ 'ಬನಾರಸ್' ಚಿತ್ರಕ್ಕೆ ಅನೇಕ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ 'ಬನರಾಸ್' ಚಿತ್ರ ಹಿಂದೂ ವಿರೋಧಿ ಎಂದು ಬಾಯ್ಕಾಟ್ 'ಬನಾರಸ್' ಅಭಿಯಾನ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಝೈದ್ ಖಾನ್ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲ್ಲ. ಇದರಲ್ಲಿ ನನ್ನ ತಪ್ಪು ಏನಿದೆ..? ನನ್ನ ತಪ್ಪಿದ್ದರೆ ನಾನು ಈ ಅಭಿಯಾನವನ್ನು ಒಪ್ಪಿಕೊಳ್ಳುತ್ತಿದೆ. ಆದರೆ ಈ ವಿಚಾರದಲ್ಲಿ ನನ್ನ ತಪ್ಪಿಲ್ಲ. ಸಿನಿಮಾದಲ್ಲಿ ಬಾಯ್ಕಟ್ ಏನಿಲ್ಲ. ಇರುವುದು ಸೋಲು ಗೆಲುವು ಎರಡೇ, ಸೋತರೆ ನಮ್ಮ ಸಮಾಧಾನಕ್ಕೆ ಬಾಯ್ಕಟ್ನಿಂದ ಸೋತಿದೆ ಎಂದು ಹೇಳುತ್ತೇವೆ ಅಷ್ಟೆ. ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತವಾಗಿಯೂ ಬಂದು ನೋಡುತ್ತಾರೆ. ನಾನೊಬ್ಬ ನಟ, ನಾನು ನನ್ನ ಸಿನಿಮಾ ಬಗ್ಗೆ ಮಾತ್ರ ಯೋಜನೆ ಮಾಡುತ್ತೇನೆ. ಉಳಿದ ವಿಚಾರ ಗೊತ್ತಿಲ್ಲ ಎಂದರು.


Click it and Unblock the Notifications











