'ಸಿನಿಮಾ ಉದ್ಯಮ-ಮಾಧ್ಯಮ' ವಿಚಾರ ಸಂಕಿರಣ
ಅಂತರಾಷ್ಟ್ರೀಯ ಚಲನಚಿತ್ರೋತ್ಸದ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ "ಸಿನಿಮಾ ಉದ್ಯಮ - ಮಾಧ್ಯಮ" ಎನ್ನುವ ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜಿಸಿದೆ. ಬೆಂಗಳೂರಿನ ಭಗವಾನ್ ಮಹಾವೀರ್ ರಸ್ತೆಯಲ್ಲಿರುವ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಮಂಗಳವಾರ ಡಿಸೆಂಬರ್ 17ರಂದು ಬೆಳಿಗ್ಗೆ 10.30ರಿಂದ ಈ ಸಂಕಿರಣ ಆರಂಭವಾಗಲಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿಯು ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಹಾಗೂ ವಾರ್ತಾ ಇಲಾಖೆ ಸಹಯೋಗದೊಂದಿಗೆ ಈ ಸಂಕಿರಣವನ್ನು ಆಯೋಜಿಸಿದೆ. ವಸತಿ ಸಚಿವ ಅಂಬರೀಶ್ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ['ಬಂಗಾರದ ಮನುಷ್ಯ'ನ ಬಂಗಾರದಂತಹ ಚಿತ್ರಗಳು]

ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅವರು ಪ್ರಾಸ್ತಾವಿಕ ನುಡಿ ಮತ್ತು ಹಿರಿಯ ಸಿನಿಮಾ ಪತ್ರಕರ್ತ ಜೋಗಿ ಆಶಯ ನುಡಿ ನಡೆಸಿ ಕೊಡಲಿದ್ದಾರೆ. ಜಾಗತಿಕ ಸಿನಿಮಾ ವಿಷಯದ ಮೇಲೆ 12 ಗಂಟೆಗೆ ನಡೆಯುವ ಈ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರೊ. ಬರಗೂರು ರಾಮಚಂದ್ರಪ್ಪ ವಹಿಸಿಕೊಳ್ಳಲಿದ್ದಾರೆ.
ಗೋಷ್ಠಿಯಲ್ಲಿ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಬಿ ಎಂ ಹನೀಫ್, ಚಲನಚಿತ್ರ ನಿರ್ದೇಶಕ ಬಿ ಎಂ ಗಿರಿರಾಜ್, ನಿವೃತ್ತ ಐಪಿಎಸ್ ಅಧಿಕಾರಿ ಕೆ ವಿ ಆರ್ ಟ್ಯಾಗೂರ್ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ಸತ್ಯಮೂರ್ತಿ ಆನಂದೂರು ಅವರು ಕಾರ್ಯಕ್ರಮದ ನಿರ್ವಹಣೆ ವಹಿಸಿ ಕೊಳ್ಳಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ನಡೆಯುವ "ಸಿನಿಮಾ ಉದ್ಯಮ - ಮಾಧ್ಯಮ" ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ರಂಗಶಂಕರ್ ಆರ್ಟಿಸ್ಟಿಕ್ ಡೈರೆಕ್ಟರ್ ಎಸ್ ಸುರೇಂದ್ರನಾಥ್ ವಹಿಸಿಕೊಳ್ಳಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಹಿರಿಯ ಚಲನಚಿತ್ರ ನಟಿ ಡಾ. ಜಯಮಾಲ, ಪತ್ರಕರ್ತರಾದ ಸದಾಶಿವ ಶೆಣೈ, ರವಿ ಹೆಗಡೆ, ಕುಮಾರಿ ಸುಗುಣ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ರಾಧಾಕೃಷ್ಣ ಬಡ್ತಿ ಕಾರ್ಯಕ್ರಮದ ನಿರ್ವಹಣೆ ವಹಿಸಿ ಕೊಳ್ಳಲಿದ್ದಾರೆ.
"ಒನ್ ಇಂಡಿಯಾ ಕನ್ನಡ" ಸಂಪಾದಕ ಎಸ್.ಕೆ. ಶಾಮಸುಂದರ ಅವರು ಸಂಕಿರಣದಲ್ಲಿ "ಅಂತರ್ಜಾಲ ಮತ್ತು ಸಿನಿಮಾ" ಎನ್ನುವ ವಿಚಾರದ ಮೇಲೆ ಭಾಷಣ ಮಾಡಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











