ಅವಕಾಶವಿಲ್ಲದ ನಟಿ ಇದೀಗ ಕಾಲ್ ಸೆಂಟರ್ ಕೆಲಸಗಾರ್ತಿ; ಮೀಡಿಯಾ ಮುಂದೆ ಕುಳಿತು ಅಳದ ಗಟ್ಟಿಗಿತ್ತಿ!
ಸಿನಿಮಾ ಅಥವಾ ಧಾರಾವಾಹಿಯಲ್ಲಿ ಒಮ್ಮೆ ಹಿಟ್ ಸಿಕ್ಕರೆ ಸಾಕು ನಟ ಅಥವಾ ನಟಿಯ ಜೀವನವೇ ಬದಲಾಗಿ ಹೋಗುತ್ತದೆ. ಸಾಮಾನ್ಯ ಜೀವನ ಸೆಲೆಬ್ರಿಟಿ ಜೀವನಕ್ಕೆ ಬದಲಾಗಿ ಬಿಡುತ್ತದೆ. ಒಳ್ಳೆಯ ಮನೆ, ಒಳ್ಳೆಯ ಕಾರು, ಬೇಕಾದ್ದನ್ನು ಖರೀದಿಸಲು ಕೈತುಂಬಾ ಸಂಭಾವನೆ ಹೀಗೆ ಏನೆಲ್ಲಾ ಸವಲತ್ತು ಆ ಒಂದು ಹಿಟ್ನಿಂದ ಲಭಿಸಿಬಿಡುತ್ತದೆ ಅಲ್ವಾ. ಆದರೆ ಇದೆಲ್ಲಾ ಶಾಶ್ವತವೂ ಅಲ್ಲ. ಕೆಲವರು ಮಾತ್ರ ಹಿಟ್ ಮೇಲೆ ಹಿಟ್ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಇಂಡಸ್ಟ್ಟಿಯಲ್ಲಿ ಸೆಟಲ್ ಆದರೆ, ಇನ್ನೂ ಕೆಲವರು ಒಮ್ಮೆ ಹಿಟ್ ರುಚಿ ಕಂಡು ನಂತರ ಮಂಕಾಗಿ ಹೋಗುತ್ತಾರೆ.
ಹೀಗೆ ಹಿಟ್ ಮೇಲೆ ಹಿಟ್ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೆ, ಯಶಸ್ಸು ಸಾಧಿಸಿ ನಂತರ ಆ ಯಶಸ್ಸಿನ ಅಲೆಯಲ್ಲಿ ಹೆಚ್ಚು ದಿನ ತೇಲಲಾಗದೇ ಬಿದ್ದವರೇ ಹೆಚ್ಚು. ಹೀಗೆ ಒಂದಷ್ಟು ದಿನ ಸೆಲೆಬ್ರಿಟಿ ಜೀವನ ಸಾಗಿಸಿ ಫ್ಲಾಪ್ ಆದ ಬಳಿಕ ಮತ್ತೆ ಸಾಮಾನ್ಯರಂತೆ ಜೀವನ ಸಾಗಿಸಲು ಮುಂದಾಗುವವರಿಗಿಂತ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟು ಹಾಗೂ ಗಿಮಿಕ್ ಮಾಡಿ ಕಷ್ಟ ಹೇಳಿಕೊಳ್ಳುವವರೇ ಹೆಚ್ಚು.
ಹೀಗೆ ಸಿನಿಮಾ ಬಿಟ್ಟು ನಾನು ಯಾವುದೇ ಕೆಲಸ ಮಾಡಲಾರೆ, ನಂಗೆ ಯಾರು ಅವಕಾಶ ಕೊಡುತ್ತಿಲ್ಲ ಎಂದು ಹೇಳಿಕೆ ನೀಡುವವರ ನಡುವೆ ಕೆಲ ಕಲಾವಿದರು ಮಾತ್ರ ತಮ್ಮ ಪಾಲಿಗೆ ಬಂದದ್ದನ್ನು ಸ್ವೀಕರಿಸಿ ಜೀವನ ಸಾಗಿಸುತ್ತಿದ್ದಾರೆ. ಅಂತಹ ಕಲಾವಿದರ ಸಾಲಿಗೆ ಇದೀಗ ನೂತನ ಸೇರ್ಪಡೆ ಕಿರುತೆರೆಯ ಖ್ಯಾತ ನಟಿ ಏಕ್ತಾ ಶರ್ಮಾ.

ಏಕ್ತಾ ಶರ್ಮಾ ಕಿರುತೆರೆಯ ಜನಪ್ರಿಯ ನಟಿ
1998ರಲ್ಲಿ ಮೊದಲ ಬಾರಿಗೆ ಜನಪ್ರಿಯ ಕ್ರೈಮ್ ಥ್ರಿಲ್ಲರ್ ಟಿವಿ ಸರಣಿ ಸಿಐಡಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದ ಏಕ್ತಾ ಶರ್ಮಾ ನಂತರ ಹತ್ತಾರು ಧಾರಾವಾಹಿಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಜೋಶಿಲಿ, ಪ್ರತಿಮಾ, ಬ್ರಹ್ಮರಾಕ್ಷಸ್, ಡ್ಯಾಡಿ ಸಮ್ಜಾ ಕರೋ ಖುಸುಮ್ ರೀತಿಯ ಮುಂತಾದ ಟಿವಿ ಸರಣಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಏಕ್ತಾ ಶರ್ಮಾ ತನ್ನ ಅಭಿನಯದಿಂದ ವೀಕ್ಷಕರ ಮನ ಗೆದ್ದು ಜನಪ್ರಿಯ ನಟಿ ಎನಿಸಿಕೊಂಡಿದ್ದರು.

ಕೊರೊನಾ ಕೊಡ್ತು ಕೈ
ಹೀಗೆ ಸಾಲು ಸಾಲು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಏಕ್ತಾ ಶರ್ಮಾ 2021ರಲ್ಲಿ ಅಂತಿಮವಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಕೊರೊನಾ ಕಾರಣದಿಂದಾಗಿ ಅನೇಕ ಧಾರಾವಾಹಿಗಳ ಕೆಲಸ ನಿಂತಿದ್ದವು, ಹೀಗಾಗಿ ಏಕ್ತಾ ಶರ್ಮಾ ಕೂಡ ಕೆಲಸವಿಲ್ಲದೇ ಕೆಲ ದಿನಗಳ ಕಾಲ ಮನೆಯಲ್ಲೇ ಕೂರುವಂತಾಯಿತು. ತನ್ನ ಬಳಿ ಇದ್ದ ಒಡವೆಗಳನ್ನು ಅಡವಿಟ್ಟು ಸ್ವಲ್ಪ ದಿನ ಜೀವನ ಸಾಗಿಸಿದ ಏಕ್ತಾ ಶರ್ಮಾ ಆಫರ್ಗಳಿಗಾಗಿ ಎದುರು ನೋಡಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ ಎಂಬುದನ್ನು ಅರಿತ ನಂತರ ನಟನಾ ಕ್ಷೇತ್ರವನ್ನೇ ಬಿಟ್ಟು ಕಾಲ್ ಸೆಂಟರ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

ಅಳುತ್ತಾ ಕೂರಲಿಲ್ಲ, ಕೆಲಸಕ್ಕೆ ಹೊರಟೆ
ಇನ್ನು ಈ ವಿಷಯವನ್ನು ಸ್ವತಃ ಏಕ್ತಾ ಶರ್ಮಾ ಅವರೇ ದ ಇಂಡಿಯನ್ ಎಕ್ಸ್ಪ್ರೆಸ್ ಸಂದರ್ಶನದ ವೇಳೆ ಬಿಚ್ಚಿಟ್ಟಿದ್ದು "ಕೆಲಸವಿಲ್ಲದೇ ಹೋದಾಗ ನಾನು ಮನೆಯಲ್ಲಿ ಕುಳಿತು ಅಳಲಿಲ್ಲ, ನನ್ನ ಬಳಿ ಇದ್ದ ಒಡವೆಗಳನ್ನು ಮಾರಿದೆ ಹಾಗೂ ಎಲ್ಲಾ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಆದರೆ ಯಾವುದೂ ಸರಿ ಹೋಗಲಿಲ್ಲ. ನಾನು ಶಿಕ್ಷಣ ಕಲಿತ ಮಹಿಳೆ, ಒಂದು ವರ್ಷ ಕಳೆದ ಬಳಿಕ ಕಾಲ್ ಸೆಂಟರ್ ಕೆಲಸಕ್ಕೆ ಸೇರಿದೆ" ಎಂದು ಹೇಳಿಕೊಂಡಿದ್ದಾರೆ.

ಕೋಪಿಷ್ಟ ಜನರ ಜೊತೆ ಮತನಾಡಬೇಕು
ಇನ್ನೂ ಮುಂದುವರೆದು ಮಾತನಾಡಿರುವ ಏಕ್ತಾ ಶರ್ಮಾ ತಾನು ಮಾಡುತ್ತಿರುವ ಕೆಲಸದ ಬಗ್ಗೆ ತನಗೆ ಹೆಮ್ಮೆ ಇದೆ ಎಂದಿದ್ದಾರೆ. ನಟಿಯಾಗಿದ್ದಾಗ ಅಕ್ಕಪಕ್ಕ ಸಹಾಯಕರನ್ನು ಇಟ್ಟುಕೊಂಡು ಡೈಯಟ್ ಆಹಾರ ಸೇವಿಸುತ್ತಾ ಐಷಾರಾಮಿ ಜೀವನ ಸಾಗಿಸುತ್ತಿದ್ದೆ, ಆದರೆ ಈಗ ಹಾಗಿಲ್ಲ, ಕೋಪಿಷ್ಟ ಗ್ರಾಹಕರೊಡನೆ ಮಾತನಾಡುತ್ತಿದ್ದೇನೆ, ಜೀವನವನ್ನು ವೀರರಂತೆ ಸಾಗಿಸಬೇಕೇ ಹೊರತು ಬಲಿಪಶುಗಳಾಗಬಾರದು ಎಂದಿದ್ದಾರೆ.


Click it and Unblock the Notifications











