ಶಿವ ಕ್ಷೀರಾಭಿಷೇಕದಲ್ಲಿ ಮೇಲಿಂದ ಬಿದ್ದ ಅಭಿಮಾನಿ
ರಾಜ್ಯದಾದ್ಯಂತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಶಿವ' ಚಿತ್ರ ಶುಕ್ರವಾರ (ಆ.24) 200ಕ್ಕೂ ಅಧಿಕ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎಲ್ಲೆಡೆಯೂ ಶಿವಣ್ಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇದೇ ಸಂದರ್ಭದಲ್ಲಿ ಒಂದು ಸಣ್ಣ ಪ್ರಮಾದವೂ ಸಂಭವಿಸಿದೆ.
ಮೈಸೂರಿನ ಸಂಗಮ್ ಚಿತ್ರಮಂದಿರದ ಮುಂದಿನ ಶಿವ ಕಟೌಟ್ ಗೆ ಕ್ಷೀರಾಭಿಷೇಕ ಮಾಡಬೇಕಾದರೆ ಅಭಿಮಾನಿಯೊಬ್ಬ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಶಿವಣ್ಣನ ಈ ಉತ್ಕಟ ಅಭಿಮಾನಿಯ ಹೆಸರು ನಾಗ. ಶಿವ ಚಿತ್ರ ವಿಮರ್ಶೆ ಓದಿ.
ಕಟೌಟಿಗೆ ಹಾಲಿನ ಅಭಿಷೇಕ ಮಾಡಬೇಕಾದರೆ ಕೆಳಗೆ ಬಿದ್ದ ಈತ ಅದೃಷ್ಟವಶಾತ್ ಗಂಭೀರವಾಗಿ ಗಾಯಗೊಂಡಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದ ಈತನನ್ನು ಕೂಡಲೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ಆರೋಗ್ಯ ಹೇಗಿದೆ ಎಂದು ಸ್ವತಃ ಶಿವಣ್ಣ ಹಾಗೂ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ದೂರವಾಣಿ ಮೂಲಕ ವಿಚಾರಿಸಿಕೊಂಡಿದ್ದಾರೆ.
ಮೈಸೂರಿಗೆ ಭೇಟಿ ನೀಡಿ ವೈಯಕ್ತಿಕವಾಗಿ ನಾಗ ಅವರನ್ನು ಭೇಟಿ ಮಾಡುವುದಾಗಿ ಕೆಪಿ ಶ್ರೀಕಾಂತ್ ತಿಳಿಸಿದ್ದಾರೆ. ಆತನ ಚಿಕಿತ್ಸೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳುವಂತೆ ಮೈಸೂರಿನ ಗೆಳೆಯರಿಗೆ ಶ್ರೀಕಾಂತ್ ಸೂಚಿಸಿದ್ದಾರೆ.
ಏತನ್ಮಧ್ಯೆ 'ಶಿವ' ಚಿತ್ರದ ಮೊದಲ ದಿನದ ಪ್ರದರ್ಶನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲುಗು ಚಿತ್ರಗಳ ಹವಾ ಅಧಿಕವಾಗಿರುವ ಬಳ್ಳಾರಿ, ಹೊಸಪೇಟೆಯಲ್ಲೂ ಶಿವ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ಯಶಸ್ಸನ್ನು ಕೋರಿ ಶಿವಣ್ಣ ಇಂದು ರಾಜಾಜಿನಗರದ ಸಾಯಿಬಾಬಾ ಮಂದಿರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











