ದೊಡ್ಮನೆ ಹುಡುಗನ ಸಿನಿಮಾ ನಿರ್ದೇಶಿಸಲಿರುವ ಸಿಂಪಲ್ ಸುನಿ
ದೊಡ್ಮನೆಯ ನಟರಿಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂಬುದು ಹಲವು ನಿರ್ದೇಶಕರ ಕನಸು. ದೊಡ್ಮನೆಯವರು ತಂತ್ರಜ್ಞರಿಗೆ ಕೊಡುವ ಗೌರವ ಇದಕ್ಕೆ ಪ್ರಮುಖ ಕಾರಣವಾದರೆ, ನಟನೆ ಬಗ್ಗೆ ದೊಡ್ಮನೆಯವರಿಗಿರುವ ಭಕ್ತಿ, ಶ್ರದ್ಧೆಗಳು ಮತ್ತೊಂದು ಕಾರಣ.
ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ, ಅವರೊಟ್ಟಿಗೆ ಕೆಲಸ ಮಾಡಬೇಕು ಎಂದುಕೊಂಡಿದ್ದ ಎಷ್ಟೋ ಮಂದಿ ನಿರ್ದೇಶಕರು ದೊಡ್ಮನೆಯ ಇತರ ನಟರತ್ತ ಕಣ್ಣು ಹಾಯಿಸುತ್ತಿದ್ದಾರೆ. ಶಿವಣ್ಣ ಬಹಳ ಬ್ಯುಸಿ ಅವರೊಟ್ಟಿಗೆ ಸಿನಿಮಾ ಮಾಡಲು ವರ್ಷಗಳಗಟ್ಟಲೆ ಕಾಯಬೇಕಾಗುತ್ತದೆ.
ಹಾಗಾಗಿ ಈಗ ಕೆಲವು ನಿರ್ದೇಶಕರು ರಾಘವೇಂದ್ರ ರಾಜ್ಕುಮಾರ್ ಪುತ್ರರಿಗೆ ಸಿನಿಮಾ ಮಾಡಲು ಉತ್ಸುಕರಾಗಿ ಮುಂದೆ ಬರುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ನ ಮತ್ತೊಬ್ಬ ಜನಪ್ರಿಯ ನಿರ್ದೇಶಕ ದೊಡ್ಮನೆಯ ನಟರೊಬ್ಬರಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನ ಡಿಪೆಂಡಲ್ ನಿರ್ದೇಶಕ ಎನಿಸಿಕೊಂಡಿರುವ ಸುನಿ ಇದೀಗ ರಾಘಣ್ಣನ ಪುತ್ರ ವಿನಯ್ ರಾಜ್ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.
ವಿನಯ್ ರಾಜ್ಕುಮಾರ್ಗಾಗಿ ರೊಮ್ಯಾಂಟಿಕ್ ಕತೆಯನ್ನು ಸಿಂಪಲ್ ಸುನಿ ಹೆಣೆದಿದ್ದಾರೆ. ಇಬ್ಬರ ಕಾಂಬಿನೇಶನ್ ಬಗ್ಗೆ ಈಗಾಗಲೇ ನಿರೀಕ್ಷೆ ಮೂಡಿದೆ. ಸಿನಿಮಾವನ್ನು ನಿರ್ದೇಶನ ಮಾಡಲಿರುವ ಸಿಂಪಲ್ ಸುನಿ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಸಿನಿಮಾಕ್ಕೆ ಮೈಸೂರು ರಮೇಶ್ ಬಂಡವಾಳ ಹೂಡಿದ್ದು, ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿವೆ. ವಿನಯ್ ರಾಜ್ಕುಮಾರ್ ನಟನೆಯ 'ಪೆಪೆ', 'ಗ್ರಾಮಾಯಣ', 'ಅದೊಂದಿತ್ತು ಕಾಲ' ಸಿನಿಮಾಗಳು ಬಿಡಗುಡೆಗೆ ರೆಡಿಯಾಗಿವೆ. ಇದರ ಜೊತೆಗೆ ಈಗ ಸಿಂಪಲ್ ಸುನಿಯ ಸಿನಿಮಾ ಸಹ ಸೇರಿಕೊಳ್ಳಲಿದೆ.
ವಿನಯ್ ರಾಜ್ಕುಮಾರ್ ಸಹೋದರ ಯುವರಾಜ್ಕುಮಾರ್ ಸಹ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಹೊಂಬಾಳೆ ನಿರ್ಮಾಣದಲ್ಲಿ ಸಂತೋಶ್ ಆನಂದ್ರಾಮ್ ಅವರು ಯುವರಾಜ್ಕುಮಾರ್ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಪುನೀತ್ ಸ್ಥಾನವನ್ನು ತುಂಬುವ ಭರವಸೆಯನ್ನು ಯುವರಾಜ್ ಕುಮಾರ್ ನೀಡಿದ್ದಾರೆ.


Click it and Unblock the Notifications











