ಚಿತ್ರೀಕರಣ ಅನುಮತಿಗೆ ಏಕಗವಾಕ್ಷಿ ಪದ್ಧತಿ ಚಿಂತನೆ
ಹಳೆ ಸಿನಿಮಾಗಳನ್ನು ನೋಡುತ್ತಿದ್ದರೆ ಒಂದಲ್ಲಾ ಒಂದು ಹಾಡಿನಲ್ಲೋ, ಸನ್ನಿವೇಶದಲ್ಲೋ ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್, ಲಾಲ್ ಬಾಗ್ ಕಾಣಿಸಿಕೊಳ್ಳುತ್ತಿತ್ತು. ಓ ನಮ್ಮ ಬೆಂಗಳೂರಲ್ಲೇ ಶೂಟಿಂಗ್ ಮಾಡಿದ್ದಾರೆ ಎಂದು ಪ್ರೇಕ್ಷಕರು ಸಹ ಉದ್ಗಾರ ತೆಗೆಯುತ್ತಿದ್ದರು. ಆದರೆ ಈಗಿನ ಚಿತ್ರಗಳನ್ನು ನೋಡಿದರೆ ಎಲ್ಲಿ ಚಿತ್ರೀಕರಿಸಿದ್ದಾರೆ ಎಂಬುದೇ ಗೊತ್ತಾಗಲ್ಲ.
ಇದಕ್ಕೆ ಕಾರಣವಾಗಿರುವುದು ಕಾನೂನು ಕಟ್ಟುಪಾಡುಗಳು. ವಿಧಾನಸೌಧದ ಸುತ್ತಮುತ್ತ ನಾಲ್ಕು ಕಿ.ಮೀ ವ್ಯಾಪ್ತಿಯಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಈಗ ಈ ನೀತಿ ನಿಯಮಗಳನ್ನು ಸಡಿಲಿಸಲು ಸರ್ಕಾರ ಮುಂದಾಗಿದೆ. [ಜನತಾ ಚಿತ್ರಮಂದಿರ, ಸಿನಿನಗರಿ ನಿರ್ಮಾಣ: ಸಿಎಂ]

ವಾರ್ತಾ ಸೌಧದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದ ನಂತರ ವಾರ್ತಾ ಸಚಿವ ಆರ್. ರೋಷನ್ ಬೇಗ್ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.
ಚಿತ್ರೀಕರಣಕ್ಕೆ ಅಲೆಯುವುದು, ಇದಕ್ಕೆ ಸಂಬಂಧಪಟ್ಟಂತೆ ಹಲವಾರು ಸರ್ಕಾರಿ ಇಲಾಖೆಗಳಿಂದ ಅನುಮತಿ ಪಡೆಯಲು ಹರಸಾಹಸ ಪಡುವ ಪರಿಸ್ಥಿತಿ ಇದೆ. ಇದನ್ನು ತಡೆಯಲು ಸರ್ಕಾರವು ಏಕಗವಾಕ್ಷಿ ಪದ್ದತಿಯನ್ನು ಜಾರಿಗೆ ತಂದು ಒಂದೇ ಕಡೆ ಎಲ್ಲಾ ಇಲಾಖೆಗಳ ಅನುಮತಿ ಪಡೆಯುವಂತೆ ವ್ಯವಸ್ಥೆ ಮಾಡಲು ಚಿಂತಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಚಿತ್ರೀಕರಣಕ್ಕಾಗಿ ಅನುಮತಿ ಪಡೆಯಲು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಈ ಸಮಸ್ಯೆಯನ್ನು ಎದುರಿಸುತ್ತಿರುವ ಚಿತ್ರ ನಿರ್ಮಾಪಕರನ್ನು ಇನ್ನು ಮುಂದೆ ಈ ಕಿರುಕುಳದಿಂದ ಪಾರು ಮಾಡಲು ಸರ್ಕಾರ ಈ ಚಿಂತನೆ ನಡೆಸಿದ್ದು, ಮುಂದಿನ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಚಿತ್ರೀಕರಣಕ್ಕೆ ಸೂಕ್ತವಾದ ರಾಜ್ಯದ ಹಲವಾರು ಪ್ರದೇಶಗಳು, ಸ್ಮಾರಕ, ಕಟ್ಟಡಗಳಲ್ಲಿ ಭದ್ರತೆಯ ದೃಷ್ಟಿಯಿಂದ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುತ್ತಿಲ್ಲ. ವಿಧಾನಸೌಧ, ಲಾಲ್ಬಾಗ್, ಹೈಕೋರ್ಟ್ ನಂತಹ ಪ್ರದೇಶಗಳು ಬೆಂಗಳೂರನ್ನು ಗುರುತಿಸುವ ಪಾರಂಪರಿಕ ತಾಣಗಳಾಗಿವೆ. ಆದರೆ ಇತ್ತೀಚೆಗೆ ಯಾವುದೇ ಭಾಷೆಯ ಚಿತ್ರಗಳು ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದ್ದರೂ ಸಹ ಈ ಪ್ರದೇಶಗಳು ನೋಡಲು ಸಿಗುವುದಿಲ್ಲ.
ಹಾಗಾಗಿ ಇತ್ತೀಚಿನ ಪೀಳಿಗೆಗೆ ಸಿನಿಮಾ ಮೂಲಕ ಈ ಪ್ರದೇಶಗಳ ಪರಿಚಯವೇ ಆಗುತ್ತಿಲ್ಲ ಎಂದು ಅವರು ವಿಷಾದಿಸಿದರು. ಸರ್ಕಾರಿ ರಜಾ ದಿನಗಳಂದು ಭದ್ರತಾ ನಿಯಮಗಳನ್ನು ಪಾಲಿಸಿಕೊಂಡು ಚಿತ್ರೀಕರಣಕ್ಕೆ ಅನುಮತಿ ನೀಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು. (ಒನ್ಇಂಡಿಯಾ ಕನ್ನಡ)


Click it and Unblock the Notifications











