ಮೀನಾ ತೂಗುದೀಪರಲ್ಲಿ ಸೂರಪ್ಪ ಬಾಬು ಕ್ಷಮೆಯಾಚನೆ

ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘ, ಶ್ರೀಮತಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಕಾಲಿಗೆ ಬಿದ್ದು ಸೂರಪ್ಪ ಬಾಬು ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದು ಭಾನುವಾರ (ಜು.8) ಸಂಜೆ ಆಗ್ರಹಿಸಿತ್ತು. ಹೀಗಾಗಿ ನಿನ್ನೆ, ಅಂದರೆ 09 ಜುಲೈ 2012 ರಂದು ವಾಣಿಜ್ಯ ಮಂಡಳಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೂರಪ್ಪ ಬಾಬು ಮೀನಾ ತೂಗುದೀಪ ಅವರಲ್ಲಿ ಕ್ಷಮೆ ಯಾಚಿಸಿದ್ದಾರೆ.
"ನನ್ನಿಂದ ತಪ್ಪಾಗಿದೆ. ನಾನು ಒಬ್ಬ ಹಿರಿಯ ನಟನ ಬಗ್ಗೆ ಹಾಗೆ ಮಾತನಾಡಬಾರದಿತ್ತು. ನನ್ನಿಂದ ಆದ ಈ ತಪ್ಪಿಗಾಗಿ ಮೀನಾ ತೂಗುದೀಪ ಅವರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ" ಎಂದರು ಸೂರಪ್ಪ ಬಾಬು. ಆದರೆ ಅಭಿಮಾನಿಗಳ ಸಂಘದ ಮುಖಂಡರು ಮೀನಾ ತೂಗುದೀಪ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದಾಗ ಕೆಲಕಾಲ ಪರಸ್ಪರ್ ಮಾತಿನ ಚಕಮಕಿ ನಡೆಯಿತು.
"ಮೀನಾ ತೂಗುದೀಪ ಅವರು ನನ್ನ ತಾಯಿಗೆ ಸಮಾನ. ಅವರ ಕಾಲಿಗೆ ಬಿದ್ದು ಕ್ಷಮೆ ಕೋರಲು ನನಗೇನೂ ಅಭ್ಯಂತರವಿಲ್ಲ. ಆದರೆ ಮೂರು ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಈಗ ಯಾಕೆ ಪ್ರಚಾರ ಮಾಡಿದ್ದು? ಈಗ ಯಾಕೆ ಅದನ್ನು ಯೂಟ್ಯೂಬ್ ನಲ್ಲಿ ಪ್ರಚಾರ ಮಾಡಿದ್ದು? ಆ ಟೇಪ್ ನಲ್ಲಿ ಇನ್ನೂ ಏನೇನಿದೆ ಎಂಬುದನ್ನು ಸದ್ಯದಲ್ಲೇ ನಾನು ಬಹಿರಂಗ ಮಾಡುತ್ತೇನೆ. (ಯೂಟ್ಯೂಬ್ ವಿಡಿಯೋ)
ಈ ವಿಷಯದಲ್ಲಿ ಕಾಣದ ಕೈಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಸದ್ಯದಲ್ಲೇ ಚಿತ್ರರಂಗಕ್ಕೆ ಹಾಗೂ ಸಮಸ್ತರಿಗೆ ಬಹಿರಂಗಪಡಿಸುತ್ತೇನೆ" ಎಂದು ಸಭೆಯನ್ನುದ್ದೇಶಿಸಿ ಸೂರಪ್ಪ ಬಾಬು ಮಾತನಾಡಿದ್ದಾರೆ. ಅಲ್ಲಿಗೆ ಸೂರಪ್ಪ ಬಾಬು ಪ್ರಕರಣ ಸುಖಾಂತ್ಯಗೊಂಡಿದೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಸಭೆಯಲ್ಲಿ ಮೀನಾ ತೂಗುದೀಪ, ಸೂರಪ್ಪ ಬಾಬು ಅವರೊಂದಿಗೆ ದಿನಕರ್ ತೂಗುದೀಪ, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ನಿರ್ದೇಶಕರ ಸಂಘದ ಅಧ್ಯಕ್ಷ ಎಂಎಸ್ ರಮೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಕೆವಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು. ಒಟ್ಟಿನಲ್ಲಿ ಸದ್ಯಕ್ಕೆ ಪ್ರಕರಣ ಸುಖಾಂತ್ಯ ಕಂಡಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











