ರೆಡಿಯಾಗಿ ಶ್ರೀನಗರ ಕಿಟ್ಟಿ ಜತೆ 'ಸವಾರಿ' ಹೊರಡಲು
ಕನ್ನಡದ ಭರವಸೆಯ ನಿರ್ದೇಶಕ ಜೇಕಬ್ ವರ್ಗೀಸ್ ಪ್ರೇಕ್ಷಕರಿಗೆ ಮತ್ತೊಂದು ಥ್ರಿಲ್ಲಿಂಗ್ ಅನುಭವ ನೀಡಲು ಸಿದ್ಧರಾಗಿದ್ದಾರೆ. ಈ ಬಾರಿ ಅವರ ಚಿತ್ರದಲ್ಲಿ ಏನೆಲ್ಲಾ ಇರುತ್ತದೋ ಎಂಬ ಕುತೂಹಲವಂತೂ ಪ್ರೇಕ್ಷಕ ವರ್ಗಕ್ಕೆ ಇದ್ದೇ ಇದೆ.
ಈ ಹಿಂದೆ ತೆಲುಗಿನ ಗಮ್ಯಂ ಚಿತ್ರವನ್ನು ಕನ್ನಡಕ್ಕೆ 'ಸವಾರಿ'ಯಾಗಿ ತಂದಿದ್ದರು. ಬಳಿಕ ಅವರು ಬಳ್ಳಾರಿ ಗಣಿ ಮಾಫಿಯಾ ಮೇಲೆ 'ಪೃಥ್ವಿ' ಚಿತ್ರದ ಮೂಲಕ ಬೆಳಕು ಚೆಲ್ಲಿದ್ದರು. ಅದಾದ ಬಳಿಕ ಈಗ 'ಸವಾರಿ 2' ಮೂಲಕ ಭಿನ್ನ ಅನುಭವ ನೀಡಲು ಬರುತ್ತಿದ್ದಾರೆ. [ನಿರ್ದೇಶಕ ಜೇಕಬ್-ಕಿಟ್ಟಿ ಹೊಸ ಸಾಹಸ 'ಸವಾರಿ 2']
ಇದೇ ಶುಕ್ರವಾರ (ಮೇ.30) ಚಿತ್ರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಜೇಕಬ್ ಫಿಲಂಸ್ ಲಾಂಛನದಲ್ಲಿ ಕಥೆ-ಚಿತ್ರಕಥೆ-ನಿರ್ಮಾಣದ ಜೊತೆಗೆ ನಿರ್ದೇಶನ ಜವಾಬ್ದಾರಿಯನ್ನು ಜೇಕಬ್ ವರ್ಗೀಸ್ ಹೊತ್ತಿದ್ದಾರೆ.ಕೊಟ್ಟಾಯಂ ಮೂಲದ ಜೇಕಬ್ ವರ್ಗೀಸ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು, ಸವಾರಿ, ಪೃಥ್ವಿ ಚಿತ್ರದ ನಂತರ ಬಿಡುವಿನ ವೇಳೆಯಲ್ಲಿ ಒಂದೆರಡು ಕಿರುಚಿತ್ರಗಳನ್ನು ಮಾಡಿದ್ದಾರೆ. ಗೆಳೆಯರೊಡನೆ ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದ್ದಾರೆ. ಚಿತ್ರ ಬಿಡಿಸುತ್ತಾ, ಊರೂರು ಸುತ್ತುತ್ತಾ, ಕೆಮೆರಾ ಹೆಗಲಿಗೇರಿಸಿಕೊಂಡು ಅಲೆಮಾರಿಯಂತೆ ಸವಾರಿ ಮಾಡುವ ನಿರ್ದೇಶಕ ಜೇಕಬ್ ಅವರು ಸವಾರಿ 2 ಮೂಲಕ ಮತ್ತೊಮ್ಮೆ ಪ್ರೇಕ್ಷಕರ ನಿರೀಕ್ಷೆ ಮಟ್ಟ ಮುಟ್ಟುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕವಿ ಗೋಪಾಲಕೃಷ್ಣ ಅಡಿಗರ 'ಯಾವ ಮೋಹನ ಮುರಳಿ ಗೀತೆಯಲ್ಲಿ ಬರುವ ' ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ... ಎಂಬ ಸಾಲುಗಳನ್ನು ಈ ಚಿತ್ರದ ಅಡಿ ಬರಹವಾಗಿ ಬಳಸಿಕೊಳ್ಳಲಾಗಿದೆ. ಹಾಗಾಗಿ ಚಿತ್ರದ ಬಗೆಗೆ ನಿರೀಕ್ಷೆಗಳು ಸಿಕ್ಕಾಪಟ್ಟೆ ಇವೆ.
ಈ ಚಿತ್ರದ ಸಂಭಾಷಣೆ-ಮಂಜು ಮಾಂಡವ್ಯ, ಛಾಯಾಗ್ರಹಣ-ಶಶಿಕುಮಾರ್, ಸಂಗೀತ-ಮಣಿಕಾಂತ್ ಕದ್ರಿ, ಸಾಹಸ-ಡಿಫರೆಂಟ್ ಡ್ಯಾನಿ, ನೃತ್ಯ-ರಘು-ಅರವಿಂದ, ಕಲೆ-ಕುಮಾರ್, ಕೋ-ಡೈರೆಕ್ಟರ್-ನಂದೀಶ್, ನಿರ್ವಹಣೆ-ಸುಂದರರಾಜ್-ಗಗನಮೂರ್ತಿ, ಸಾಹಿತ್ಯ-ಜಯಂತ್ ಕಾಯ್ಕಿಣಿ, ಕವಿರಾಜ್, ಡಾ.ವಿ. ನಾಗೇಂದ್ರ ಪ್ರಸಾದ್.
ಪಾತ್ರವರ್ಗದಲ್ಲಿ ಶ್ರೀನಗರ ಕಿಟ್ಟಿ, ಶ್ರುತಿ ಹರಿಹರನ್, ಕರಣ್ ರಾವ್, ಅಬ್ಬಾಸ್, ಮಧುರಿಮಾ ಬ್ಯಾನರ್ಜಿ, ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












