ಜಯಶ್ರೀ ರಾಮಯ್ಯ ಸಾವಿನ ಬಗ್ಗೆ ಟಿಎನ್ ಸೀತಾರಾಮ್ ಬೇಸರ
ನೂರಾರು ಕನಸುಗಳನ್ನು ಹೊಂದಿದ್ದ ನಟಿ, ರೂಪದರ್ಶಿ ಜಯಶ್ರೀ ರಾಮಯ್ಯ ಅವರ ಸಾವು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕಿ ಬಾಳಬೇಕಾದ ವಯಸ್ಸು, ಏನೇ ಕಷ್ಟವಿದ್ದರೂ ಹೋರಾಡಿ ಜಯಿಸಬೇಕಾಗಿತ್ತು. ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದು ಬೇಸರವಾದವರೇ ಹೆಚ್ಚು.
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ ರಾಮಯ್ಯ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಿರೀಕ್ಷಿತ ಸಾವಿಗೆ ಮಾನವಕುಲ ಮರುಗಿದೆ. ಚಿತ್ರರಂಗ, ಕಿರುತೆರೆ ಕಲಾಬಂಧುಗಳು ದುಃಖಿತರಾಗಿದ್ದಾರೆ. ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಅವರು ಫೇಸ್ಬುಕ್ನಲ್ಲಿ ಲೈವ್ ಬಂದು ತೀರಾ ಬೇಸರ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಎಂಬ ಆಲೋಚನೆ ಮಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮುಂದೆ ಓದಿ.....

ಈ ಸಾವು ಬಹಳ ದುಃಖ ತಂದಿದೆ
''ಮನುಷ್ಯ ಸ್ವತಂತ್ರ, ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಸ್ವತಂತ್ರ ಇರುವುದಿಲ್ಲ ಎಂದು ಪ್ರಸಿದ್ಧ ದಾರ್ಶನಿಕರೊಬ್ಬರು ಹೇಳ್ತಾರೆ. ಆ ಕ್ಷಣದಲ್ಲಿ ಅವರಿಗೆ ಯಾವ ದಾರಿಗಳು ಗೋಚರವಾಗುವುದಿಲ್ಲ. ತಾನು ಬದುಕಿನ ದುರಂತದಲ್ಲಿ ಬಂಧಿಯಾಗಿದ್ದೇನೆ ಎನಿಸುವುದಕ್ಕೆ ಶುರುವಾಗುತ್ತದೆಯಂತೆ. ಜಯಶ್ರೀ ಅವರ ಸ್ವಂತ ಬದುಕು ನನಗೆ ಗೊತ್ತಿಲ್ಲ. ಬಿಗ್ ಬಾಸ್ನಲ್ಲಿ ನೋಡಿದ್ದೆ. ತುಂಬಾ ಲಕ್ಷಣವಾಗಿದ್ದರು. ತಾಯಿ ಜೊತೆ ಇದ್ದರಂತೆ. ಕೌನ್ಸಲಿಂಗ್ನಲ್ಲಿ ಸಹ ಇದ್ದರು ಎಂದು ತಿಳಿಯಿತು. ಈ ಸಾವು ಬಹಳ ದುಃಖ ತಂದಿದೆ''. - ಟಿಎನ್ ಸೀತಾರಾಮ್

ಮನಸ್ಸನ್ನು ಅಧೀರರನ್ನಾಗಿ ಮಾಡಿಕೊಳ್ಳುವುದು ಬೇಡ
''ಈ ಬದುಕಿನ ದುರಂತ ತಮ್ಮ ಮನಸ್ಸನ್ನು ಅಧೀರರನ್ನಾಗಿ ಮಾಡುತ್ತದೆ. ಕಟುವಾದ, ಕಟುವಾಸ್ತವಗಳನ್ನು ಎದುರಿಸಲು ಸಾಧ್ಯವಾಗದಿದ್ದಾಗ, ಯಾರದೋ ನಗು ಗೇಲಿಯ ರೀತಿ ಕಾಣುತ್ತದೆ, ಯಾರದೂ ಮಾತು ಅಪಹಾಸ್ಯದ ರೀತಿ ಕಾಣುತ್ತದೆ, ಯಾರೋ ನಿಮ್ಮನ್ನು ಸಣ್ಣದಾಗಿ ಹೆದರಿಸಿ ಮಾತನಾಡಿದರೂ ಅಟ್ಟಹಾಸ ಹಾಗೂ ತೇಜೋವಧೆಯಂತೆ ಕಾಣುತ್ತದೆ. ಹಾಗಾಗಿ, ಮನಸ್ಸನ್ನು ಬಹಳ ವೀಕ್ ಮಾಡಿಕೊಳ್ಳುತ್ತಾರೆ. ಇದು ಬಹಳ ತಪ್ಪು'' ಎಂದು ಟಿಎನ್ ಸೀತಾರಾಮ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಬದುಕು ಭಗವಂತ ಕೊಟ್ಟಿದ್ದು
''ಈ ಬದುಕು ಭಗವಂತ ಕೊಟ್ಟಿರುವುದು ಒಂದೇ ಸಲ. ಮತ್ತೆ ಮತ್ತೆ ಕೊಡಲ್ಲ. ಈ ರೀತಿ ಧೈರ್ಯಗೆಟ್ಟು ಆತ್ಮಹತ್ಯೆ ನಿರ್ಧಾರಕ್ಕೆ ಹೋಗಬಾರದು. ಈ ಭೂಮಿ ಇರೋವರೆಗೂ ಅಥವಾ ಪ್ರಪಂಚ ಇರೋವರೆಗೂ ಯಾರೂ ಬದುಕಿರಲ್ಲ. ಇದ್ದಾಗ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು. ಹೀಗೆ ಅನಾಹುತ ಮಾಡಿಕೊಂಡರೆ ಬದುಕಿರುವವರೆಗೂ ಕಷ್ಟ. ಬದುಕಿನಿಂದ ದಕ್ಕಿಸಿಕೊಳ್ಳಬೇಕಾದ ಪ್ರೀತಿ-ವಾತ್ಸಲ್ಯವನ್ನು ಕಳೆದುಕೊಳ್ಳುತ್ತಾರೆ'' - ಟಿಎನ್ ಸೀತಾರಾಮ್
Recommended Video

ದುಃಖವನ್ನು ದುರಂತದಲ್ಲಿ ಅಂತ್ಯ ಮಾಡುವುದು ಬೇಡ
''ಸಮಯ ಹೀಗೆ ಇರಲ್ಲ. ಮನುಷ್ಯನಿಗೆ ಕೆಟ್ಟ ದಿನಗಳು ಬರುತ್ತೆ, ಅದು ಹಾಗೆ ಉಳಿಯಲ್ಲ. ಕಾಲಚಕ್ರ ಉರುಳುತ್ತೆ. ಬೇರೆಯವರಿಗಿಂತ ನಾವು ಶ್ರೇಷ್ಠವಾಗಿದ್ದೇವೆ ಎಂಬ ಸುಳ್ಳು ಅಹಂಕಾರವನ್ನು ಬೆಳಸಿಕೊಳ್ಳಿ. ಆದರೆ ಆ ಅಹಂಕಾರಿಗಳಿಗೆ ಬಲಿಯಾಗುವುದು ಬೇಡ. ತಮ್ಮ ಮನಸ್ಸನ್ನು ಅಧೀರರನ್ನಾಗಿಸುವುದು ಬೇಡ. ಒತ್ತಡದಲ್ಲಿದ್ದರೆ ಸ್ನೇಹಿತರ ಬಳಿ ಮಾತನಾಡಿ. ಬೇರೆಯವರ ಜೊತೆ ಮಾತನಾಡಿ. ಡೈರಿ ಬರೆಯುವ ಅಭ್ಯಾಸ ಇಟ್ಕೊಳ್ಳಿ. ದಿನಕ್ಕೊಂದು ಜೋಕ್ ಬರೆಯಿರಿ, ದುಃಖ ಮರೆಯಾಗುತ್ತೆ, ಉಲ್ಲಾಸ ಹುಟ್ಟುತ್ತೆ. ಯಾವುದೇ ದುಃಖ ಇದ್ದರೂ ಅದನ್ನು ದುರಂತಕ್ಕೆ ತೆಗೆದುಕೊಳ್ಳವುದು ಬೇಡ. ಜಯಶ್ರೀ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟಿಎನ್ ಸಂತಾಪ ಸೂಚಿಸಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777


Click it and Unblock the Notifications











