ಪ್ರಕಾಶ್ ರಾಜ್ ಹೊಸ ಚಿತ್ರ 'ದೇವರ ನಾಡಲ್ಲಿ' ಟ್ರೇಲರ್
ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿರುವ ಖ್ಯಾತ ನಿರ್ದೇಶಕ ಬಿ.ಸುರೇಶ ನಿರ್ದೇಶನದ ಹೊಚ್ಚ ಹೊಸ ಚಿತ್ರ 'ದೇವರ ನಾಡಲ್ಲಿ'. ಹೆಸರು ಕೇಳ್ತಿದ್ದ ಹಾಗೆ, ನಿಸರ್ಗದ ರಮ್ಯಸಿರಿ ಎಲ್ಲರ ಕಣ್ಣ ಮುಂದೆ ಬರುವುದು ಸಹಜ. ಆದ್ರೆ, ಈ 'ದೇವರ ನಾಡಲ್ಲಿ' ಪ್ರಕೃತಿಯ ಸೊಬಗಿನ ಜೊತೆ ಸಂಘರ್ಷವೂ ಇದೆ.
ಕರ್ನಾಟಕದ ಕಡಲ ತೀರದಲ್ಲಿ ನಡೆದ ನೈಜಕಥೆ 'ದೇವರ ನಾಡಲ್ಲಿ' ಚಿತ್ರದ ಹೂರಣ. 1998ರಲ್ಲಿ ಪ್ರಕಟವಾದ ವರದಿಯನ್ನ ಆಧರಿಸಿ 'ದೇವರ ನಾಡಲ್ಲಿ' ಚಿತ್ರಕಥೆಯನ್ನ ರಚಿಸಲಾಗಿದೆ. ಜಾತಿ ಧರ್ಮದ ಸಂಘರ್ಷ, ಪ್ರೀತಿ ಪ್ರೇಮ, ಬಾಂಬು, ಭಯ, ಹೀಗೆ ಅನೇಕ ಕುತೂಹಲಕಾರಿ ಅಂಶಗಳು 'ದೇವರ ನಾಡಲ್ಲಿ' ಚಿತ್ರದಲ್ಲಿದೆ.

ಇದೀಗಷ್ಟೆ ರಿಲೀಸ್ ಆಗಿರುವ 'ದೇವರ ನಾಡಲ್ಲಿ' ಚಿತ್ರದ ಟ್ರೇಲರ್ ನೋಡಲು ಎಷ್ಟು ನಯನ ಮನೋಹರವೋ ಅಷ್ಟೇ ಕುತೂಹಲಕಾರಿ. ಮುಖ್ಯ ಭೂಮಿಕೆಯಲ್ಲಿ ನಟ ಪ್ರಕಾಶ್ ರಾಜ್ ಎಲ್ಲರ ಗಮನ ಸೆಳೆಯುತ್ತಾರೆ. ಬಹುದಿನಗಳ ನಂತ್ರ ಗೆಳೆಯ ಬಿ.ಸುರೇಶ ಜೊತೆಯಾಗಿರುವ ಪ್ರಕಾಶ್ ರಾಜ್, ಇಡೀ ಚಿತ್ರದ ಹೈಲೈಟ್. [ಇಪ್ಪತ್ತಾರು ಸ್ಪೆಷಲ್ ಕಳ್ಳರ ಬೆನ್ನಟ್ಟಲಿರುವ ಪ್ರಕಾಶ್ ರೈ]
ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ಪ್ರತಿಭೆಗಳಿಗೆ ಸದಾ ಮಣೆ ಹಾಕುವ ಬಿ.ಸುರೇಶ, 'ದೇವರ ನಾಡಲ್ಲಿ' ಚಿತ್ರದ ಮೂಲಕ ನಟ ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ಗೆ ಚಾನ್ಸ್ ಕೊಟ್ಟಿದ್ದಾರೆ. ಇನ್ನೂ 'ನೀನಸಂ' ಪ್ರತಿಭೆ ಮನು ಹೆಗ್ದೆ ಬೆಳ್ಳಿತೆರೆಗೆ ಕಾಲಿಟ್ಟಿರುವುದು ಈ ಚಿತ್ರದ ಮೂಲಕವೇ.
ಚಿತ್ರಕಥೆಗೆ ಪೂರಕವಾಗಿ ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜಿಸಿದ್ದಾರೆ. ಇನ್ನೂ ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಹಂಚಿಕೆಯಲ್ಲಿ ಸದ್ಯದಲ್ಲೇ 'ದೇವರ ನಾಡಲ್ಲಿ' ರಾಜ್ಯಾದ್ಯಂತ ತೆರೆಕಾಣಲಿದೆ.


Click it and Unblock the Notifications












