ರಿಷಬ್ ಶೆಟ್ಟಿಯ 'ರುದ್ರ ಪ್ರಯಾಗ' ಸಿನಿಮಾ ಏನಾಯ್ತು? ಮತ್ತೆ ಶುರುವಾಗುತ್ತಾ?
ಭಾರತದ ಕೆಲವೇ ಯಶಸ್ವಿ ಪ್ಯಾನ್ ಇಂಡಿಯಾ ನಿರ್ದೇಶಕರ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ಸೇರಿಯಾಗಿದೆ. ಅವರು ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ದೊಡ್ಡ ಹಿಟ್ ಆಗಿದೆ.
ರಿಷಬ್ ಶೆಟ್ಟರ ಸಿನಿಮಾ ದೊಡ್ಡ ಲೆವೆಲ್ನಲ್ಲಿ ಹಿಟ್ ಆಗಿರುವ ಕಾರಣ ಸಹಜವಾಗಿಯೇ ಅವರ ಮುಂದಿನ ಸಿನಿಮಾ ಬಗೆಗಿನ ಕುತೂಹಲ, ನಿರೀಕ್ಷೆ ದುಪ್ಪಟ್ಟಾಗಿದೆ.
'ಕಾಂತಾರ' ಸಿನಿಮಾಗೂ ಮುನ್ನವೇ ರಿಷಬ್ ಶೆಟ್ಟಿ 'ರುದ್ರ ಪ್ರಯಾಗ' ಸಿನಿಮಾ ಘೋಷಿಸಿದ್ದರು. ಸಿನಿಮಾದ ಚಿತ್ರೀಕರಣವೂ ಆರಂಭಕ್ಕೆ ಯೋಜನೆ ಸಹ ಆಗಿತ್ತು. ಆದರೆ ಸಿನಿಮಾದ ಚಿತ್ರೀಕರಣ ಹಠಾತ್ತನೆ ನಿಲ್ಲಿಸಲಾಯ್ತು. ಅದು ಏಕೆ? ಆ ಸಿನಿಮಾದ ಚಿತ್ರೀಕರಣ ಪುನರಾರಂಭ ಯಾವಾಗ? ಸಿನಿಮಾದ ಕತೆ ಏನು? ಇತ್ಯಾದಿ ವಿಷಯಗಳ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.

'ಮಾರ್ಚ್ 23 ಕ್ಕೆ ಸಿನಿಮಾದ ಚಿತ್ರೀಕರಣ ಶುರುವಾಗಬೇಕಿತ್ತು'
''ರುದ್ರ ಪ್ರಯಾಗ' ಸಿನಿಮಾದ ಬಾಂಡೆಂಡ್ ಚಿತ್ರಕತೆ, ಶಾಟ್ ಡಿವಿಶನ್, ಪಾತ್ರಗಳ ಆಯ್ಕೆ, ನನ್ನ ಲುಕ್ ಎಲ್ಲವೂ ಅಂತಿಮವಾಗಿತ್ತು. 2020 ರ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭ ಮಾಡಲು ಯೋಜನೆ ಹಾಕಿಕೊಂಡಿದ್ದೆವು. ಅನಂತ್ನಾಗ್ ಅವರು ಸಿನಿಮಾದ ಮುಖ್ಯ ಪಾತ್ರದಲ್ಲಿದ್ದರು, ನನ್ನ ಲುಕ್ ಸಹ ಅಂತಿಮವಾಗಿತ್ತು. ಆದರೆ ಚಿತ್ರೀಕರಣಕ್ಕೆ ಹೋಗುವ ಹತ್ತು ದಿನ ಮೊದಲು ಲಾಕ್ಡೌನ್ ಘೋಷಣೆಯಾಯ್ತು'' ಹಾಗಾಗಿ ನಾವು ಚಿತ್ರೀಕರಣ ಮಾಡಲಾಗಲಿಲ್ಲ'' ಎಂದಿದ್ದಾರೆ ರಿಷಬ್ ಶೆಟ್ಟಿ.

ಲಾಕ್ಡೌನ್ ಸಿನಿಮಾ ಒಂದನ್ನು ಮಾಡಿದೆವು!
''ನಾನಿದ್ದ ಆರ್ಆರ್ ನಗರದಲ್ಲಿಯೇ ಮೊದಲ ಕೋವಿಡ್ ಕೇಸು ಪತ್ತೆಯಾಯಿತು. ನನ್ನ ಮಗನಿಗೆ ಆಗಿನ್ನೂ ಒಂದು ವರ್ಷ ಹಾಗಾಗಿ ನಾನು ಕುಟುಂಬವನ್ನು ಕರೆದುಕೊಂಡು ಊರಿಗೆ ಹೋಗಿಬಿಟ್ಟೆ. ಅಲ್ಲೇ ಲಾಕ್ಡೌನ್ನಲ್ಲಿಯೇ ಒಂದು ಸಿನಿಮಾ ಮಾಡಿದೆವು. ಆ ಬಳಿಕ ಲಾಕ್ಡೌನ್ ತುಸು ಸಡಿಲವಾಯಿತಾದರೂ ವ್ಯಾಕ್ಸಿನೇಶನ್ ಎಲ್ಲರಿಗೂ ಲಭ್ಯವಿರಲಿಲ್ಲವಾದ್ದರಿಂದ ಅನಂತ್ನಾಗ್ ಅಂಥಹಾ ಹಿರಿಯ ನಟರನ್ನು ಶೂಟ್ಗೆ ಕರೆತಂದು ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ'' ಎಂದು ವಿವರಿಸಿದ್ದಾರೆ ರಿಷಬ್ ಶೆಟ್ಟಿ.

'ಕಾಂತಾರ' ಕತೆ ಹೊಳೆದ ಬಳಿಕ ಬಿಡುವೇ ಇಲ್ಲ!
''ಎರಡನೇ ಲಾಕ್ಡೌನ್ ಬಳಿಕ ನನಗೆ 'ಕಾಂತಾರ' ಸಿನಿಮಾದ ಕತೆ ಹೊಳೆಯಿತು. ಈ ಕತೆಯಲ್ಲಿ ಬಹಳ ಎನರ್ಜಿ ಇತ್ತು. ಕತೆಯೇ ನನ್ನನ್ನು ಮುಂದಕ್ಕೆ ಕರೆದುಕೊಂಡು ಹೋಯಿತು. ಕತೆಯಲ್ಲಿಯೇ ನಾನು ಮುಳುಗಿ ಹೋದೆ. ಆ ನಂತರ ಚಿತ್ರೀಕರಣ, ಪ್ರಚಾರ ಹೀಗೆ ನನಗೆ ಬೇರೆ ಕೆಲಸಕ್ಕೆ ಸಮಯವೇ ಸಿಗಲಿಲ್ಲ. ಈಗ ಎಲ್ಲ ಮುಗಿದಿದೆ. 'ರುದ್ರ ಪ್ರಯಾಗ'ದ ಬಗ್ಗೆ ಯೋಚಿಸುವ ಅವಕಾಶವೂ ಲಭ್ಯವಾಗಿದೆ'' ಎಂದಿದ್ದಾರೆ.

ಈಗಲೇ ಸಿನಿಮಾ ಮಾಡಬೇಕಾ ಎಂಬ ಗೊಂದಲ!
''ರುದ್ರ ಪ್ರಯಾಗ' ಸಿನಿಮಾ ಸಹ ಕಾಡಿಗೆ ಸಂಬಂಧಪಟ್ಟ ಕತೆಯೇ ಆಗಿದೆ. ಈಗಷ್ಟೆ ಅದೇ ಮಾದರಿಯ 'ಕಾಂತಾರ' ಮಾಡಿದ್ದೇನೆ. ಹಾಗಾಗಿ ಈಗಲೇ ಆ ಸಿನಿಮಾವನ್ನು ಮಾಡುವುದಾ? ಅಥವಾ ಬೇರೊಂದು ಸಿನಿಮಾ ಮಾಡಿ ಬಳಿಕ 'ರುದ್ರ ಪ್ರಯಾಗ' ಮಾಡುವುದಾ? ಯೋಚಿಸಬೇಕಿದೆ. ಆದರೆ ಆ ಸಿನಿಮಾವನ್ನು ಮಾಡುವುದಂತೂ ಪಕ್ಕಾ'' ಎಂದಿದ್ದಾರೆ ರಿಷಬ್. ಅವರ ಕೈಯಲ್ಲಿ ಈಗ 'ಕಿರಿಕ್ ಪಾರ್ಟಿ 2' ಸಿನಿಮಾ ಇದೆ. ಶಿವರಾಜ್ ಕುಮಾರ್ ನಟನೆಯ ಸಿನಿಮಾ ಒಂದನ್ನು ನಿರ್ದೇಶಿಸುವ ಯೋಜನೆಯೂ ಅವರಿಗಿದೆ. ಅದರ ಬಳಿಕ 'ರುದ್ರ ಪ್ರಯಾಗ' ಸಿನಿಮಾ ಬರುವ ಸಾಧ್ಯತೆ ಇದೆ.


Click it and Unblock the Notifications











