'ಗಾಳಿಪಟ-2' ಚಿತ್ರದಿಂದ ಹೊರ ಬರಲು ಕಾರಣ ಬಿಚ್ಚಿಟ್ಟ ರಿಷಿ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರಲಿರುವ ಗಾಳಿಪಟ-2 ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಅಷ್ಟರಲ್ಲೇ ಚಿತ್ರತಂಡ ಬಹುದೊಡ್ಡ ಬದಲಾವಣೆ ತರುವ ಮೂಲಕ ಸ್ಯಾಂಡಲ್ ವುಡ್ ಗೆ ಅಚ್ಚರಿ ನೀಡಿದೆ. ಮೂರು ಜನ ನಾಯಕರ ಪೈಕಿ ಶರಣ್, ರಿಷಿ ಅವರನ್ನ ಚಿತ್ರದಿಂದ ಕೈಬಿಟ್ಟಿದೆ.
ಶರಣ್ ಮತ್ತು ರಿಷಿ ಜಾಗಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ದೂದ್ ಪೇಡಾ ದಿಂಗತ್ ಬಂದಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟರಲ್ಲೇ ಶೂಟಿಂಗ್ ಶುರು ಮಾಡಬೇಕಿತ್ತು. ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಲಾಗಿತ್ತು. ಇಂತಹ ಸಮಯದಲ್ಲೇ ಇವರಿಬ್ಬರನ್ನ ಚಿತ್ರತಂಡದಿಂದ ಕೈಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಬಗ್ಗೆ ಕೆಲವು ಅಂತೆ-ಕಂತೆಗಳು ಚಾಲ್ತಿಯಲ್ಲಿದೆ. ಆದರೆ, ನಟ ರಿಷಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ರಿಷಿ, ಗಾಳಿಪಟ-2 ಚಿತ್ರದಿಂದ ಹೊರಬರಲು ಕಾರಣವೇನು ಎಂಬುದನ್ನ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ರಿಷಿ ಹೇಳಿದ ಸತ್ಯವೇನು? ಮುಂದೆ ಓದಿ....

ಡೇಟ್ ಸಮಸ್ಯೆ ಆಗಿದೆ.!
ಇದ್ದಕ್ಕಿದ್ದಂತೆ ನಟ ರಿಷಿ ಗಾಳಿಪಟ-2 ಚಿತ್ರದಿಂದ ಹೊರಬಂದಿದ್ದಾರೆ ಎಂದು ಸುದ್ದಿ ಹೊರಬೀಳುತ್ತಿದ್ದಂತೆ ಯಾಕೆ ಎಂಬ ಪ್ರಶ್ನೆ ಉದ್ಬವವಾಗುತ್ತೆ. ಅದಕ್ಕೆ ರಿಷಿ ಕೊಟ್ಟ ಕಾರಣ ಡೇಟ್ ಸಮಸ್ಯೆ. ಸದ್ಯ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಹಾಗೂ 'ರಾಮನ ಅವತಾರ' ಸಿನಿಮಾದಲ್ಲಿ ರಿಷಿ ನಟಿಸುತ್ತಿದ್ದಾರೆ. ಹಾಗ್ನೋಡಿದ್ರೆ ಈ ಚಿತ್ರಗಳಿಗಾಗಿ ಗಾಳಿಪಟ-2 ಬಿಟ್ಟರಾ ಎಂಬುದು ಅನುಮಾನ ಮೂಡಿಸಿದೆ.

ಪರಸ್ಪರ ಸಮ್ಮತಿಸಿ ಹೊರಬಂದಿದ್ದೇನೆ
''ಗಾಳಿಪಟ-2 ಅಂತಹ ಸಿನಿಮಾದಿಂದ ಅನಿವಾರ್ಯ ಕಾರಣಗಳಿಂದ ಹೊರಬರಬೇಕಾಯಿತು. ಇಲ್ಲಿ ಯಾವುದೇ ಗೊಂದಲವಿಲ್ಲ. ಪರಸ್ಪರ ಸಮ್ಮತಿಯ ಮೇರೆಗೆ ಈ ಸಿನಿಮಾದಿಂದ ಹಿಂದೆ ಸರಿದಿದ್ದೇನೆ. ಇದೊಂದು ಒಳ್ಳೆಯ ಸ್ಕ್ರಿಪ್ಟ್, ಬ್ಲಾಕ್ ಬಸ್ಟರ್ ಆಗುತ್ತೆ ಎಂಬ ನಿರೀಕ್ಷೆ ಇದೆ'' ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಅಭಿಮಾನಿಗಳ ಬೇಡಿಕೆ ಬೇರೆ ಇತ್ತು
ಗಾಳಿಪಟ ಸಿನಿಮಾದಲ್ಲಿ ನಟ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ನಟಿಸಿದ್ದರು. ಗಾಳಿಪಟ-2 ಸಿನಿಮಾ ಘೋಷಣೆ ಮಾಡಿದಾಗ ಅದೇ ಕಲಾವಿದರು ಮುಂದುವರಿಯಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ, ಅಭಿಮಾನಿಗಳಿಗೆ ಟ್ವಿಸ್ಟ್ ನೀಡಿದ್ದ ಭಟ್ಟರು, ಗಣೇಶ್, ದಿಗಂತ್, ರಾಜೇಶ್ ಅವರನ್ನ ಬಿಟ್ಟು ರಿಷಿ, ಶರಣ್ ಹಾಗೂ ಪವನ್ ಕುಮಾರ್ ಅವರನ್ನ ಕರೆತಂದಿದ್ದರು. ಇದರಿಂದ ನಿರಾಸೆಯಾದ ಅಭಿಮಾನಿಗಳು ಗಣೇಶ್, ಮತ್ತು ದಿಗಂತ್ ಬೇಕು ಎಂದು ಬೇಡಿಕೆ ಇಟ್ಟರು. ಇದೀಗ, ಅಂತಿಮ ಹಂತದಲ್ಲಿ ಅಭಿಮಾನಿಗಳ ಬೇಡಿಕೆಯನ್ನ ಗಂಭೀರವಾಗಿ ಪರಿಗಣಿಸಿ ನಾಯಕರನ್ನ ಬದಲಾಯಿಸಲಾಗಿದೆ ಎನ್ನಲಾಗಿದೆ.

ರಿಷಿ ಜೊತೆ ಭಟ್ ಇನ್ನೊಂದು ಚಿತ್ರ
ಗಾಳಿಪಟ-2 ಚಿತ್ರದಿಂದ ರಿಷಿ ಅವರನ್ನ ಕೈಬಿಟ್ಟಿರುವ ಯೋಗರಾಜ್ ಭಟ್ ಅವರು, ರಿಷಿ ಜೊತೆ ಇನ್ನೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಪ್ರಾಜೆಕ್ಟ್ ಕೂಡ ಈಗಾಗಲೇ ಅನೌನ್ಸ್ ಆಗಿದೆ. ಶಶಾಂಕ್ ನಿರ್ಮಾಣ ಮಾಡಲಿರುವ ಚಿತ್ರದಲ್ಲಿ ರಿಷಿ ನಟಿಸುತ್ತಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಒದಗಿಸಲಿದ್ದಾರೆ. ಮತ್ತೊಂದೆಡೆ ಶರಣ್ ಜೊತೆಯಲ್ಲಿ ಗಾಳಿಪಟ 2 ನಿರ್ಮಾಪಕ ಕೂಡ ಇನ್ನೊಂದು ಸಿನಿಮಾ ಮಾಡ್ತಾರಂತೆ.


Click it and Unblock the Notifications











