ಎರಡೂ ತಂಡಗಳಲ್ಲಿ ಮುನಿಸು: ಅತ್ತ ಜಯಶ್ರೀ, ಸೋಮಣ್ಣನ ಮೇಲೆ ಸಿಟ್ಟಾದ ಸ್ಪೂರ್ತಿ
ಬಿಗ್ಬಾಸ್ ಕನ್ನಟ ಒಟಿಟಿ ಮನೆಯಲ್ಲಿ ಬಿಸಿ ಶುರುವಾಗಿದೆ. ಮನೆಯ ಸದಸ್ಯರ ನಡುವೆ ಜಗಳ ತಾರಕ್ಕಕ್ಕೇರಿದೆ. ಒಬ್ಬರ ಮೇಲೊಬ್ಬರು ಮುಗಿಬಿದ್ದು ಜಗಳ ಮಾಡುತ್ತಿದ್ದಾರೆ. ಆರಂಭದಲ್ಲಿದ್ದ ನಗು-ಸ್ನೇಹ ಮಾತುಗಳು ಹೋಗಿ ಈಗ ಅಳು-ಮುನಿಸು-ಜಗಳಗಳು ಶುರುವಾಗಿವೆ.
ಚಪಾತಿಯ ಕಾರಣಕ್ಕೆ ರೂಪೇಶ್ ಶೆಟ್ಟಿ ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ನಡುವೆ ದೊಡ್ಡ ಜಗಳವೇ ನಡೆದಿದೆ. ಇದರ ಜೊತೆಗೆ ಬಿಗ್ಬಾಸ್ ಮನೆಯಲ್ಲಿರುವ ಎರಡು ತಂಡಗಳಿಗೆ ಒಂದರ ಹಿಂದೊಂದು ಟಾಸ್ಕ್ಗಳನ್ನು ನೀಡಲಾಗುತ್ತಿದ್ದು, ಪರಸ್ಪರರ ವಿರುದ್ಧ ಮನೆಯ ಸ್ಪರ್ಧಿಗಳು ಕಾದಾಡುತ್ತಿದ್ದಾರೆ.
ನಾಮಿನೇಶನ್ ಆಗಿರುವವರು ಆಟಗಳಲ್ಲಿ ಪಾಲ್ಗೊಂಡು ತಮ್ಮ ಶಕ್ತಿ, ಯುಕ್ತಿ ಪ್ರದರ್ಶಿಸಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಆಟಗಳಲ್ಲಿ ತಮಗೆ ಅವಕಾಶ ಸಿಗಲಿಲ್ಲವೆಂದು ಇಂದು ಸೋಮಣ್ಣನ ತಂಡ ಹಾಗೂ ನಂದು ತಂಡ ಎರಡರಲ್ಲೂ ಒಬ್ಬೊಬ್ಬರು ಸದಸ್ಯರು ಸಿಟ್ಟಾಗಿದ್ದಾರೆ.

ಹಗುರ ತಟ್ಟೆಗಳನ್ನು ಎಸೆದು ಎದುರಿಗಿದ್ದ ವ್ಯಕ್ತಿಗೆ ಸೇತುವೆ ನಿರ್ಮಿಸುವ ಆಟವೊಂದನ್ನು ಬಿಗ್ಬಾಸ್ ಇಂದು ಎರಡೂ ತಂಡಗಳಿಗೆ ಆಡಿಸಿದರು. ಆದರೆ ಈ ಆಟದಲ್ಲಿ ಮೂವರು ಮಾತ್ರವೇ ಪಾಲ್ಗೊಳ್ಳಬೇಕಾಗಿತ್ತು. ಸೋಮಣ್ಣ ಮೊದಲಿಗೆ, ಅವರ ತಂಡದಿಂದ ಗುರೂಜಿ, ತಾವು ಹಾಗೂ ಸ್ಪೂರ್ತಿಯನ್ನು ಆರಿಸಿದ್ದರು. ಆದರೆ ಆಟದ ನಿಯಮಗಳನ್ನು ಓದಿದ ಬಳಿಕ ಸ್ಪೂರ್ತಿ ಬದಲಿಗೆ ಉದಯ್ ಅನ್ನು ಆರಿಸಿಕೊಂಡರು.
ನಂದು ತಂಡದಲ್ಲಿಯೂ ಯಾರು ಆಡಬೇಕು ಎಂಬ ಬಗ್ಗೆ ಚರ್ಚೆ ನಡೆದು ಕ್ಯಾಪ್ಟನ್ ಆಗಿರುವ ನಂದು, ತಾನು, ಜಶ್ವಂತ್ ಹಾಗೂ ಚೈತ್ರಾ ಆಡುವುದಾಗಿ ನಿರ್ಧಾರ ಪ್ರಕಟಿಸಿದರು. ಆದರೆ ಈ ನಿರ್ಧಾರ ತಂಡದ ಸದಸ್ಯೆ ಜಯಶ್ರೀಗೆ ಇಷ್ಟವಾಗಲಿಲ್ಲ. ಆಕೆ ತಾನೂ ಈ ಆಟ ಆಡಬೇಕೆಂದು ಪಟ್ಟು ಹಿಡಿದರು. ನಂದು ಸೇರಿದಂತೆ ಸಾನಿಯಾ, ಜಶ್ವಂತ್ ಎಲ್ಲರೂ ಸೇರಿ ಆಕೆಗೆ ವಿವರಿಸಲು ಯತ್ನಿಸಿದರಾದರೂ ಆಕೆ ಕೇಳಲಿಲ್ಲ. ಆದರೆ ಅಷ್ಟರಲ್ಲೇ ನಂದು, ಬಿಗ್ಬಾಸ್ಗೆ ತಮ್ಮ ತಂಡದ ಸದಸ್ಯರ ಹೆಸರನ್ನು ಹೇಳಿ ಆಗಿತ್ತು.
ಆ ನಂತರ ಎಲ್ಲರೂ ಮನೆಯ ಹೊರಗಿನ ಖಾಲಿ ಸ್ಥಳಕ್ಕೆ ಬಂದರು. ಆಟ ಶುರುವಾಗಲು ತುಸು ಸಮಯವಿತ್ತು, ಆಗ ಜಯಶ್ರೀ ಅಳಲು ಆರಂಭಿಸಿದರು. ಸಾನಿಯಾ ಹಾಗೂ ಸೋನು ಗೌಡ ಆಕೆಯ ಸಮಾಧಾನಕ್ಕೆ ಯತ್ನಿಸಿದರಾದರೂ ಜಯಶ್ರೀ ಅಳು ನಿಲ್ಲಿಸಲಿಲ್ಲ. ಅದಕ್ಕೆ ತಕ್ಕಂತೆ ನಂದು ತಂಡ ಆಟದಲ್ಲಿ ಸೋತು, ಸೋಮಣ್ಣ ತಂಡ ಜಯಗಳಿಸಿತು.
ಇತ್ತ ಸೋಮಣ್ಣ ತಂಡದಲ್ಲಿ ತಮ್ಮ ಹೆಸರನ್ನು ಕೈಬಿಟ್ಟಿದ್ದಕ್ಕೆ ಸ್ಪೂರ್ತಿ ಗೌಡ ಬೇಸರಗೊಂಡು, ಸೋಮಣ್ಣ ಜೊತೆ ವಾಗ್ವಾದ ಆರಂಭಿಸಿದರು. ನಾನು ಈ ಆಟ ಆಡಬೇಕಿತ್ತು, ನನ್ನ ಹೆಸರು ಕೈಬಿಟ್ಟಿದ್ದು ಏಕೆಂದು ಪ್ರಶ್ನೆ ಮಾಡಿದರು. ಇದಕ್ಕೆ ಸೋಮಣ್ಣ, ಈ ಮುಂಚೆ ನಿನಗೆ ಅವಕಾಶ ನೀಡಿದ್ದೆ ಅಲ್ಲದೆ ನಾವು ಗೇಮ್ ಅನ್ನು ತಪ್ಪಾಗಿ ಎಣಿಸಿದೆವು, ಭಾರದ ಡಿಸ್ಕ್ಗಳನ್ನು ನೀಡಿರುತ್ತಾರೆ ಎಂದುಕೊಂಡು ನಾನು ನಿನ್ನ ಹೆಸರು ಕೈಬಿಟ್ಟೆ ಎಂದರು. ಆದರೆ ಸ್ಪೂರ್ತಿ ಗೌಡ ಬಹಳ ಹೊತ್ತು ಈ ಬಗ್ಗೆ ಸೋಮಣ್ಣ ಬಳಿ ವಾದಿಸಿದರು. ಒಂದು ಹಂತದಲ್ಲಂತೂ ಸೋಮಣ್ಣ ರೋಸಿ ಹೋದರು ಸಹ.
ಇತ್ತ ಸೋತ ನಂದು ತಂಡ, ಜಯಶ್ರೀಗೆ ವಿವರಣೆ ನೀಡಲು ಮುಂದಾಯ್ತು, ನಂದು ಅಂತೂ ವಿಪರೀತ ಮಾತನಾಡಿದರಾದರೂ ಜಯಶ್ರೀಯ ಅಸಮಾಧಾನ ಹೋಗಲಾಡಿಸಲಾಗಲಿಲ್ಲ. ಕೊನೆಗೆ ಮುಂದಿನ ಆಟದಲ್ಲಿ ಜಯಶ್ರೀಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಸೋಮಣ್ಣ ಸಹ ಸ್ಪೂರ್ತಿ ಗೌಡದೇ ಇದೇ ಭರವಸೆ ನೀಡಿದ್ದಾರೆ. ಸ್ಪೂರ್ತಿ ಗೌಡ ಹಾಗೂ ಜಯಶ್ರೀ ಇಬ್ಬರೂ ಈ ಬಾರಿ ನಾಮಿನೇಟ್ ಆಗಿದ್ದು, ಮನೆಯಿಂದ ಹೊರಗೆ ಹೋಗುವ ಭೀತಿಯಲ್ಲಿದ್ದಾರೆ.


Click it and Unblock the Notifications











