Bigg Boss OTT Kannada: ಮೊದಲ ವಾರದ ಪಂಚಾಯ್ತಿಯಲ್ಲಿ ಸುದೀಪ್ ಹೊಗಳಿದ್ದು ಯಾರನ್ನು?
ಬಿಗ್ಬಾಸ್ ಒಟಿಟಿ ಕನ್ನಡ ಶುರುವಾಗಿ ಒಂದು ವಾರ ಮುಗಿದೇ ಹೋಗಿದೆ. ಮೊದಲ ವಾರವೇ ಮನೆಯಿಂದ ಸದಸ್ಯರೊಬ್ಬರು ಹೊರಗೆ ಹೋಗಿದ್ದಾರೆ ಅದುವೇ ಕಿರಣ್ ಯೋಗೇಶ್ವರ್.
ಇಂದು (ಶನಿವಾರ) ಸುದೀಪ್ ಅವರು ಬಿಗ್ಬಾಸ್ ಒಟಿಟಿ ಕನ್ನಡ ಸೀಸನ್ನ ಮೊದಲ ವಾರದ ಪಂಚಾಯ್ತಿ ಮಾಡಲು ಬಂದಿದ್ದರು. ಒಳ್ಳೆಯ ಟಿಪ್-ಟಾಪ್ ಉಡುಗೆ ತೊಟ್ಟು ಅದ್ಭುತವಾಗಿ ಕಾಣುತ್ತಿದ್ದ ಸುದೀಪ್ ತಮ್ಮ ಎಂದಿನ ಶೈಲಿಯಲ್ಲಿ ತಮಾಷೆಯಾಗಿ ಪಂಚಾಯ್ತಿಯನ್ನು ಆರಂಭಿಸಿದರು.
ಆರಂಭದಲ್ಲಿ ತಮಾಷೆ ಮಾಡುತ್ತಾ ಎಲ್ಲರನ್ನೂ ನಗಿಸುತ್ತಾ ಇದ್ದ ಸುದೀಪ್ ಹಂತ-ಹಂತವಾಗಿ ಗಂಭೀರವಾಗುತ್ತಾ ಸಾಗಿ ಮನೆಯ ಸದಸ್ಯರು ಈ ವಾರ ನಡೆದುಕೊಂಡ ರೀತಿಯನ್ನು ವಿಶ್ಲೇಷಿಸಿದರು. ಮಾಡಿದ ತಪ್ಪುಗಳನ್ನು ತಿಳಿಸಿದರು. ಒಬ್ಬರ ಬಗ್ಗೆ ಇನ್ನೊಬ್ಬರು ಬೆನ್ನ ಹಿಂದೆ ಆಡಿದ ಮಾತುಗಳನ್ನು ಎದುರಿಗೆ ಇಟ್ಟರು.
ಈ ಹಿಂದಿನ ಸೀಸನ್ಗಳಲ್ಲಿ ಪ್ರತಿ ವಾರವೂ ಸುದೀಪ್ ಯಾರಾದರೂ ಒಬ್ಬರನ್ನು ಹೊಗಳುತ್ತಾರೆ, ಅವರು ಆಡಿದ ಶೈಲಿಯನ್ನು ಮೆಚ್ಚಿಕೊಳ್ಳುತ್ತಾರೆ. ಕಿಚ್ಚನ ಚಪ್ಪಾಳೆ ಎಂಬ ಸೆಗ್ಮೆಂಟ್ ಸಹ ಈ ಹಿಂದಿನ ಕೆಲವು ಸೀಸನ್ಗಳಲ್ಲಿ ಇತ್ತು. ಅಂತೆಯೇ ಈ ವಾರವೂ ಒಬ್ಬರನ್ನು ಕಿಚ್ಚ ಮೆಚ್ಚಿಕೊಂಡಿದ್ದಾರೆ. ಅವರು ಮೊದಲ ವಾರ ಆಡಿರುವ ರೀತಿಗೆ, ಆಡುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೇ ಆರ್ಯವರ್ಧನ್ ಗುರೂಜಿ.
ಆರ್ಯವರ್ಧನ್ ಗುರೂಜಿ ಬಗ್ಗೆ ಮಾತನಾಡಿದ ಸುದೀಪ್, ''ಮನೆಯಲ್ಲಿರುವವರಿಗೆ, ಹೊರಗೆ ಇರುವವರಿಗೆ ಸ್ವತಃ ನನಗೆ ಆಶ್ಚರ್ಯ ಆಗುವ ರೀತಿಯಲ್ಲಿ ನೀವು ಮನೆಯಲ್ಲಿ ಇದ್ದೀರಿ. ಚೆನ್ನಾಗಿ ತೊಡಗಿಕೊಳ್ಳುತ್ತಿದ್ದೀರಿ. ಎಲ್ಲರನ್ನೂ ಎಂಟರ್ಟೈನ್ ಮಾಡುತ್ತಿದ್ದೀರಿ. ನಡೆದುಕೊಳ್ಳುತ್ತಿದ್ದೀರಿ, ಪಾಲ್ಗೊಳ್ಳುತ್ತಿದ್ದೀರಿ. ನಿಮಗೆ ಅಭಿನಂದನೆ'' ಎಂದು ಹೊಗಳಿದರು.

ಕೆಲವರನ್ನು ಮೆದು ಮಾತಿನಲ್ಲೇ ಚುಚ್ಚಿದ ಸುದೀಪ್, ಎಚ್ಚರವಾಗಿ ಆಡುವಂತೆಯೂ, ವ್ಯಕ್ತಿತ್ವ ಬದಲಾಯಿಸಿಕೊಳ್ಳುವಂತೆಯೂ ಹೇಳಿದರು. 'ನಾಯಕನಾದ ಮಾತ್ರಕ್ಕೆ ಓಟು ಹಾಕುವ ಅಗತ್ಯ ಇಲ್ಲ ಎಂದೇನೂ ಇಲ್ಲ ನೀವು ಓಟು ಹಾಕಬೇಕು, ಓಟಿನ ಅವಶ್ಯಕತೆ ಇಲ್ಲ ಎಂದರೆ ಬಿಗ್ಬಾಸ್ ಹೇಳುತ್ತಾರೆ'' ಎಂದು ನಾಯಕ ಅರ್ಜುನ್ಗೆ ಸುದೀಪ್ ಹೇಳಿದರು.


Click it and Unblock the Notifications











