ಬಿಗ್ಬಾಸ್ ಮನೆಯಲ್ಲಿ ಗಣೇಶ ಚತುರ್ಥಿ: ಗುರೂಜಿ ಆಶೀರ್ವಾದ ಪಡೆದ ಮನೆ ಮಂದಿ
ಬಿಗ್ಬಾಸ್ ಮನೆಯಲ್ಲಿ ಎಷ್ಟೇ ಜಗಳ ಮುನಿಸುಗಳು ಇದ್ದರೂ ಸಹ ಹಬ್ಬ-ಹರಿದಿನಗಳನ್ನು ಸಂಭ್ರಮದಿಂದ ಒಟ್ಟಾಗಿ ಆಚರಣೆ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದ ಬಿಗ್ಬಾಸ್ ಮನೆ ಸದಸ್ಯರು ಈಗ ಗೌರ-ಗಣೇಶ ಹಬ್ಬ ಆಚರಿಸುತ್ತಿದ್ದಾರೆ.
ಇಂದು ಗೌರಿ ಹಬ್ಬದ ಪ್ರಯುಕ್ತ ಮನೆಯ ಎಲ್ಲ ಮಹಿಳಾ ಸದಸ್ಯರು ಸೀರೆ ಉಟ್ಟುಕೊಂಡು ಪೂಜೆ ಮಾಡಿ ಹಬ್ಬ ಆಚರಿಸಿದರು. ಪುರುಷ ಸ್ಪರ್ಧಿಗಳೂ ಸಹ ಪಂಚೆ, ಹಾಗೂ ಕುರ್ತಾ, ಪೈಜಾಮ್ ಧರಿಸಿ ಪೂಜೆಯಲ್ಲಿ ಪಾಲ್ಗೊಂಡರು. ಅಕ್ಷತಾ ಉಟ್ಟಿದ್ದ ಉತ್ತರ ಕರ್ನಾಟಕ ಶೈಲಿಯ ಸೀರೆ ಹಾಗೂ ಒಡವೆಗಳು ಹೆಚ್ಚು ಗಮನ ಸೆಳೆಯುತ್ತಿದ್ದವು.
ಬಿಗ್ಬಾಸ್ ಮನೆಯ ಎಲ್ಲ ಸದಸ್ಯರು ಗುರೂಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ರೂಪೇಶ್ ಶೆಟ್ಟಿ, ಸೋನು ಗೌಡ, ಹಿರಿಯ ಸದಸ್ಯರಲ್ಲಿ ಒಬ್ಬರಾದ ಚೈತ್ರಾ, ಸೋಮಣ್ಣ, ನಟಿ ಸಾನ್ಯಾ ಐಯ್ಯರ್ ಸೇರಿ ಎಲ್ಲರೂ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಎಲ್ಲರಿಗೂ ಮನಃಪೂರ್ವಕವಾಗಿ ಹಾರೈಸಿ, ಆಶೀರ್ವದಿಸಿದರು ಗುರೂಜಿ.

ಬಿಗ್ಬಾಸ್ ಮನೆಯಲ್ಲಿರುವ ದೇವಿಯ ವಿಗ್ರಹಕ್ಕೆ ಎಲ್ಲರೂ ಪೂಜೆ ಮಾಡಿದರು. ಗುರೂಜಿ ಸಹ ಪೂಜೆ ಮಾಡಿ ಎಲ್ಲರಿಗೂ ಕುಂಕುಮ ವಿತರಣೆ ಮಾಡಿದರು. ಗಣೇಶ ಹಬ್ಬಕ್ಕೆ ಬಿಗ್ಬಾಸ್ ಮನೆಯಲ್ಲಿ ವಿಶೇಷ ಆಚರಣೆ ಆಗುವುದು ಪಕ್ಕಾ. ಗಣೇಶ ಚತುರ್ಥಿ ನಾಳೆ ಅಂದರೆ ಆಗಸ್ಟ್ 31ರಂದು ಇದ್ದು ಈ ದಿನ ಗಣೇಶ ಮೂರ್ತಿ ಬಿಗ್ ಬಾಸ್ ಮನೆಯ ಒಳಗೆ ಪ್ರತಿಷ್ಠಾಪಿಸುವ ಸಾಧ್ಯತೆ ಇದೆ.
ಬಿಗ್ಬಾಸ್ ಮನೆಯಲ್ಲಿ ಈಗ ಕಡಿಮೆ ಜನ ಉಳಿದಿದ್ದಾರೆ. ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ, ಅರ್ಜುನ್ ರಮೇಶ್ ಹಾಗೂ ಕಳೆದ ವಾರ ಉದಯ್ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಈಗ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ಜಯಶ್ರೀ ಆರಾಧ್ಯ, ಜಶ್ವಂತ್, ನಂದಿನಿ, ಅಕ್ಷತಾ, ರಾಕೇಶ್ ಅಡಿಗ, ಸೋನು ಗೌಡ, ಗುರೂಜಿ, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೆರೆ ಅವರುಗಳು ಬಿಗ್ಬಾಸ್ ಮನೆಯಲ್ಲಿ ಉಳಿದಿದ್ದಾರೆ. ಇವರಲ್ಲಿ ಯಾರು ವಿಜೇತರಾಗುತ್ತಾರೆ ನೋಡಬೇಕಿದೆ.
ವಾರಗಳು ಕಳೆದಂತೆ ಬಿಗ್ಬಾಸ್ ಮನೆ ಹೆಚ್ಚು-ಹೆಚ್ಚು ಕುತೂಹಲಭರಿತಗೊಳ್ಳುತ್ತಾ ಸಾಗುತ್ತಿದೆ. ಸದಸ್ಯರ ಮಧ್ಯೆ ಅಭಿಪ್ರಾಯ ಭೇದಗಳು, ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿವೆ. ಈ ವಾರ ಸೋನು ಗೌಡ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದು ಯಾರು ಹೊರಗೆ ಹೋಗುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











