ಮತ್ತೆ ಕನ್ನಡಕ್ಕೆ ಬಂದ ಸುನಿಲ್ ಶೆಟ್ಟಿ: ಸಿನಿಮಾಕ್ಕಾಗಿ ಅಲ್ಲ ವೆಬ್ ಸೀರೀಸ್ಗಾಗಿ
ಕನ್ನಡಿಗ ಸುನಿಲ್ ಶೆಟ್ಟಿ ಅವರದ್ದು ಬಾಲಿವುಡ್ನಲ್ಲಿ ದೊಡ್ಡ ಹೆಸರು. ಬಾಲಿವುಡ್ನಲ್ಲಿ 100 ಕ್ಕೂ ಹೆಚ್ಚು ಸಿನಿಮಾ ಗಳಲ್ಲಿ ನಟಿಸಿರುವ ಅವರು ಕನ್ನಡದಲ್ಲಿ ಒಂದು ಸಿನಿಮಾದಲ್ಲಿಯಷ್ಟೆ ನಟಿಸಿದ್ದಾರೆ.
ಸುನಿಲ್ ಶೆಟ್ಟಿ ಅವರು ಕನ್ನಡದ ಪೈಲ್ವಾನ್ ಸಿನಿಮಾದಲ್ಲಿ ಸುದೀಪ್ ಅವರ ಸಾಕು ತಂದೆಯಾಗಿ, ಗುರುವಾಗಿ ನಟಿಸಿದ್ದಾರೆ. ಇದಾದ ಬಳಿಕ ಈಗ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ ನಟ ಸುನಿಲ್ ಶೆಟ್ಟಿ.
ಆದರೆ ಈ ಬಾರಿ ಅವರು ಸಿನಿಮಾಕ್ಕಾಗಿ ಕನ್ನಡಕ್ಕೆ ಬರುತ್ತಿಲ್ಲ ಬದಲಿಗೆ ಕನ್ನಡದ ವೆಬ್ ಸೀರೀಸ್ನಲ್ಲಿ ನಟಿಸಲು ಬರುತ್ತಿದ್ದಾರೆ. ಹೌದು, ಸುನಿಲ್ ಶೆಟ್ಟಿ ಅವರು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ವೆಬ್ ಸೀರೀಸ್ ಒಂದರಲ್ಲಿ ನಟಿಸುತ್ತಿದ್ದಾರೆ.

ಶಂಕರ್ ಬಿದಿರಿ ಪಾತ್ರದಲ್ಲಿ ಸುನಿಲ್ ಶೆಟ್ಟಿ
ವೀರಪ್ಪನ್ ಕತೆ ಆಧರಿಸಿದ ಅಟ್ಟಹಾಸ ಸಿನಿಮಾ ನಿರ್ದೇಶಿಸಿದ್ದ ಎ.ಎಂ.ಆರ್.ರಮೇಶ್ ಅವರು 'ವೀರಪ್ಪನ್; ಹಂಗರ್ ಫಾರ್ ಕಿಲ್ಲಿಂಗ್' ಹೆಸರಿನ ಕನ್ನಡ ವೆಬ್ ಸೀರೀಸ್ ನಿರ್ಮಿಸುತ್ತಿದ್ದು, ಸುನಿಲ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿ ಶಂಕರ್ ಬಿದಿರಿ ಪಾತ್ರ ನಿರ್ವಹಿಸಿದ್ದಾರೆ.

ವೀರಪ್ಪನ್ ಪಾತ್ರದಲ್ಲಿ ಕಿಶೋರ್ ನಟನೆ
ವೆಬ್ ಸರಣಿಯಲ್ಲಿ ಕರ್ನಾಟಕ ಪೊಲೀಸರ ಪ್ರಯತ್ನಗಳ ಬಗ್ಗೆ ಹೆಚ್ಚು ಒತ್ತು ನೀಡಲಾಗುವ ಕಾರಣ, ಶಂಕರ್ ಬಿದಿರಿ ಪಾತ್ರಕ್ಕೆ ದೊಡ್ಡ ನಟರನ್ನೇ ಕರೆಸುವ ಇರಾದೆಯಿಂದ ಸುನಿಲ್ ಶೆಟ್ಟಿ ಅವರನ್ನು ಒಪ್ಪಿಸಲಾಗಿದೆ. ವೆಬ್ ಸರಣಿಯಲ್ಲಿ ವೀರಪ್ಪನ್ ಪಾತ್ರವನ್ನು ಕಿಶೋರ್ ಅವರೇ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಪೊಲೀಸರ ಪ್ರಯತ್ನಗಳಿಗೆ ಆದ್ಯತೆ ಇರಲಿಲ್ಲ
ನಿರ್ದೇಶಕ ಎ.ಎಂ.ಆರ್.ರಮೇಶ್ ಹೇಳಿರುವಂತೆ, ಅಟ್ಟಹಾಸ ಸಿನಿಮಾದಲ್ಲಿ ಕೇವಲ ರಾಜ್ಕುಮಾರ್ ಅಪಹರಣ ಮತ್ತು ವೀರಪ್ಪನ್ ಎನ್ಕೌಂಟರ್ ವಿಷಯಕ್ಕೆ ಮಾತ್ರವೇ ಒತ್ತು ನೀಡಲಾಗಿದೆ. ಕರ್ನಾಟಕ ಪೊಲೀಸರು ವೀರಪ್ಪನ್ ಹಿಡಿಯಲು ಮಾಡಿದ ಯತ್ನಗಳನ್ನು ಅನಿವಾರ್ಯವಾಗಿ ತುಸುವಷ್ಟೆ ತೋರಿಸಲಾಗಿದೆ.

ಹತ್ತು ಗಂಟೆಗಳಷ್ಟು ಕಂಟೆಂಟ್ ತಯಾರಿದೆ
ಆದರೆ ವೀರಪ್ಪನ್ ಕುರಿತಾಗಿ ಸುಮಾರು ಹತ್ತು ಗಂಟೆಗಳಿಗಾಗುವಷ್ಟು ಕಂಟೆಂಟ್ ಇದ್ದು, ಅದರಲ್ಲಿಯೂ ಕರ್ನಾಟಕ ಪೊಲೀಸರು ವೀರಪ್ಪನ್ ಹಿಡಿಯಲು ಮಾಡಿದ ಯತ್ನಗಳ ಮೇಲೆ ಈ ವೆಬ್ ಸೀರೀಸ್ ಬೆಳಕು ಚೆಲ್ಲಲಿದೆಯಂತೆ. ಈ ವೆಬ್ ಸರಣಿಯ ಮೂಲಕ ಎ.ಎಂ.ಆರ್.ರಮೇಶ್ ಮಗಳು ವಿಜೇತ ವಸಿಷ್ಠ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾಳೆ.


Click it and Unblock the Notifications











