ಗುರುರಾಜ್ 'ಸಂಕ್ರಾಂತಿ' ಪಕ್ಕಾ ಟೈಮ್ ಪಾಸ್ ಮೂವಿ
ಟೈಮ್ ಪಾಸ್ ಮಾಡಲು ಎಲ್ಲೂ ಕಡಲೆಕಾಯಿ ಕೂಡ ಸಿಗಲಿಲ್ಲ ಎಂದರೆ ಗುರುರಾಜ್ ಜಗ್ಗೇಶ್ ಅವರ 'ಸಂಕ್ರಾಂತಿ' ಚಿತ್ರವನ್ನು ಒಮ್ಮೆ ಕಣ್ಣಾರೆ ನೋಡಿ ಆನಂದಿಸಬಹುದು. ಮುಸ್ಸಂಜೆ ಮಹೇಶ್ ಹಳೆ ಸರಕನ್ನು ನೀಟಾಗಿ ಪ್ಯಾಕ್ ಕೊಟ್ಟಿದ್ದಾರೆ. ಪ್ಯಾಕ್ ಓಪನ್ ಮಾಡಿ ನೋಡಿದರೆ ಸರಕಿನ ಬಂಡವಾಳ ಬಯಲಾಗುತ್ತದೆ.
ಅದೊಂದು ಹಳ್ಳಿಯ ಗೌರಸ್ಥ ಅವಿಭಕ್ತ ಕುಟುಂಬ. ಇಪ್ಪತ್ತು ವರ್ಷಗಳ ಹಿಂದೆ ನಾಯಕನ ತಾಯಿ ಈ ಕುಟುಂಬದಿಂದ ದೂರವಾಗಿರುತ್ತಾಳೆ. ಕಾರಣ ಆಕೆ ಪ್ರೀತಿಸಿ ಮದುವೆಯಾಗಿರುತ್ತಾಳೆ. ತನ್ನ ತಾಯಿಯನ್ನು ಮತ್ತೆ ಒಂದು ಮಾಡಲು ಪಣತೊಡುತ್ತಾನೆ ಚಿತ್ರದ ನಾಯಕ ಸೂರ್ಯಪ್ರಕಾಶ್ (ಗುರುರಾಜ್). ಕಡೆಗೇನಾಗುತ್ತದೆ ಎಂಬುದೇ ಚಿತ್ರದ ಕಥಾವಸ್ತು.
ಈ ರೀತಿಯ ಹಳೆಯ ಸರಕನ್ನು ತೆಲುಗು, ತಮಿಳು ನಿರ್ದೇಶಕರು ಸುತ್ತಿಸುತ್ತಿ ಸುಸ್ತಾಗಿದ್ದಾರೆ. ಈಗ ಅದೇ ರೀತಿಯ ಮಾಲನ್ನು ಹೊಸದಾಗಿ ಸುತ್ತಿ ನೀಡುವಲ್ಲಿ ನಿರ್ದೇಶಕರು ಸೋತಿದ್ದಾರೆ. ಕತೆ ಯಾವುದೇ ಕುತೂಹಲ ರೀತಿಯಲ್ಲಿ ಸಾಗುವುದಿಲ್ಲ. ಸಂಭಾಷಣೆ, ಚಿತ್ರಕತೆ, ಉದ್ದುದ್ದ ಸನ್ನಿವೇಶಗಳು ಚಿತ್ರಕ್ಕೆ ಮುಳುವಾಗಿವೆ.
ಗುರುರಾಜ್ ಜಗ್ಗೇಶ್ ಭಾವನಾತ್ಮಕ ಸನ್ನಿವೇಶಗಳಲ್ಲಿ ಕರ್ಚೀಫ್ಗೆ ಕೈ ಹಾಕುವಂತೆ ಅಭಿನಯಿಸಿದ್ದಾರೆ. ಇನ್ನು ಚಿತ್ರದ ನಾಯಕಿ ರೂಪಶ್ರೀ ಅಭಿನಯ ಅಷ್ಟಕ್ಕಷ್ಟೆ. ಚಿತ್ರದ ತಾಂತ್ರಿಕತೆ ಬಗ್ಗೆ ಮಾತನಾಡದಿರುವುದೇ ವಾಸಿ. ಒಟ್ಟಾರೆಯಾಗಿ ಟೈಮ್ ಪಾಸ್ ಮಾಡಲು ಒಳ್ಳೆಯ ಸಿನಿಮಾ. ಹೋಗಿ ನೋಡಿ ಆನಂದಿಸಿ ಬೇರೆಯವರಿಗೂ ತಿಳಿಸಿ.


Click it and Unblock the Notifications











