ಯೋಗರಾಜ ಭಟ್ಟರ ಪರಮಾತ್ಮ ನೋಡಿ ಪುನೀತರಾಗಿ!

ಚಿತ್ರದ ನಾಯಕ ಪರಮಾತ್ಮ (ಕರಡಿ) ಹಾಗೂ ನಾಯಕಿಯರಾದ ದೀಪಾ ಮತ್ತು ಸಾನ್ವಿ ಇವರ ಜೀವನದಲ್ಲಿ ಗೆಳೆತನ-ಪ್ರೀತಿ, ಯಾವ ರೀತಿ ತನ್ನ ಪ್ರಭಾವ ಬೀರಿ ಮದುವೆ, ಮಗು ಎಂಬಲ್ಲಿಗೆ ಕೊಂಡೊಯ್ಯುತ್ತದೆ. ಪ್ರೀತಿ, ಮದುವೆಯ ಬಗ್ಗೆ ಕನಸೇ ಕಾಣದ ಸಹಪಾಠಿಯನ್ನೇ ಪ್ರೀತಿಸುವ ಹುಡುಗಿ ಒಂದುಕಡೆಯಾದರೆ ಅವಳನ್ನು ಸ್ನೇಹಿತೆ ಅಂದುಕೊಂಡು ಸನ್ನಿವೇಶವೊಂದರಲ್ಲಿ ಸಿಕ್ಕಿ ಇನ್ನೊಂದು ಹುಡುಗಿಯತ್ತ ಆಕರ್ಷಿತನಾಗಿ ಪ್ರೀತಿ, ಮದುವೆಯೆಂಬ ಗೊಂದಲ(!) ದಲ್ಲಿ ಸಿಕ್ಕಿಹಾಕಿಕೊಳ್ಳುವ ನಾಯಕ ಇನ್ನೊಂದುಕಡೆ.
ಗೆಳೆತನ, ಪ್ರೀತಿ, ಸಂದರ್ಭಕ್ಕೆ ಸಿಕ್ಕು ಆಕಸ್ಮಿಕವಾಗಿ ಅರಳುವ ಪ್ರೀತಿಯ ಪರಿ, ಇವೆಲ್ಲಾ ಹೇಗೆ ಹುಡುಗ ಅಥವಾ ಹುಡುಗಿಯರ ಜೀವನದಲ್ಲಿ ಆಕಸ್ಮಿಕ, ಆಯ್ಕೆ ಹಾಗೂ ಅನಿವಾರ್ಯತೆಗಳ ಮಧ್ಯೆ ಸಿಕ್ಕು ಪಕ್ವತೆ ಅಥವಾ ನೋವಿಗೆ ಎಡೆಮಾಡಿ ಎಲ್ಲೋ ಒಂದು ದಡ ಮುಟ್ಟಿಸುವ(?) ಪಯಣವನ್ನು ತೆರೆಯಮೇಲೆ ತಂದಿರುವ ರೀತಿಯೇ ಚೆಂದ ಚೆಂದ. ಮುಂದಿನದನ್ನು ತೆರೆಯಮೇಲೆ ನೋಡಿ ಆನಂದಿಸಿ...
ಕಥೆ ಹೇಳುವ ಕಲೆ ಭಟ್ಟರಿಗೆ ಸಿದ್ಧಿಸಿದೆ ಎಂಬುದು ಹೊಸ ವಿಷಯವೇ ಅಲ್ಲ. ನಮ್ಮ ಸುತ್ತಮುತ್ತಲು ನಡೆಯುವ ಸಮಾಚಾರವನ್ನೇ ಘಟನೆಯನ್ನಾಗಿಸಿ ಸಿನಿಮಾ ರೂಪದಲ್ಲಿ ಯಶಸ್ವಿಯಾಗಿ ಕಟ್ಟಿಕೊಡುವ ಭಟ್ಟರು ಈ ಚಿತ್ರದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ಹಿಡಿತ ತಪ್ಪದ ಭಟ್ಟರ ನಿರ್ದೇಶನ, ಎಲ್ಲಾ ಪಾತ್ರಗಳ ಅತ್ಯದ್ಭುತ ಸಂಭಾಷಣೆ ಹಾಗೂ ಪವರ್ ಸ್ಟಾರ್ ಪುನೀತ್ ಅಭಿನಯ ಚಿತ್ರದ ನಿಜವಾದ ಹೈಲೈಟ್ಸ್.
ಡಾನ್ಸ್, ಫೈಟ್, ಹಾಗೂ ಎಲ್ಲಾ ಸನ್ನಿವೇಶಗಳಲ್ಲೂ ಪುನೀತ್ ಸೂಪರ್. ದೀಪಾ ಸನ್ನಿಧಿ ನೋಡಲು ಥೇಟ್ ಪಕ್ಕದ್ಮನೆ ಹುಡುಗಿಯಂತೆ. ಅಭಿನಯ, ನಗು, ಅಳು ಎಲ್ಲದರಲ್ಲೂ ದೀಪಾ ಮುಗ್ಧತೆ ಪ್ರದರ್ಶಿಸಿ, ಅಭಿನಯಕ್ಕೆ ಪ್ರಯತ್ನಿಸಿದ್ದಾರೆ ಎನ್ನಬಹುದು. ಐಂದ್ರಿತಾ ರೇ ಪಾತ್ರಕ್ಕೆ ತಕ್ಕಷ್ಟು ಅಭಿನಯಿಸಿದ್ದಾರೆ ಎನ್ನಬಹುದಾದರೆ ರಮ್ಯಾ ಬಾರ್ನೆಗೆ ಆಗಾಗ ಬಂದು ಹೋಗುವ ಕೆಲಸವಷ್ಟೇ!
ನಾಯಕನ ತಂದೆ ಪಾತ್ರದಲ್ಲಿ ಅನಂತ್ ನಾಗ್ ಎಂದಿನಂತೆ ಸಲೀಸು ಅಭಿನಯ ನೀಡಿದ್ದರೆ ನಾಯಕಿಯ ತಂದೆಯಾಗಿ ಅವಿನಾಶ್ ಕೂಡ ಮಿಂಚಿದ್ದಾರೆ. ರಂಗಾಯಣ ರಘು ಅಭಿನಯ ಅವರ ಅಭಿಮಾನಿಗಳಿಗೆ ಹಬ್ಬದೂಟ. ಇನ್ನು ನೀನಾಸಂ ಸತೀಶ್, ರಾಜು ತಾಳಿಕೋಟೆ, ದತ್ತಣ್ಣ ಹಾಗೂ ಸಹನಟರ ಅಭಿನಯ ಅವರವರ ಪಾತ್ರಕ್ಕೆ ನ್ಯಾಯಸಲ್ಲಿಸುವಂತಿದೆ.
ಈಗಾಗಲೇ ಇಡೀ ದಕ್ಷಿಣಭಾರತಕ್ಕೆ "ನಂಬರ್ ಒನ್" ಸ್ಥಾನ ಗಿಟ್ಟಿಸಿಕೊಂಡಿರುವ ಪರಮಾತ್ಮದ ಎಲ್ಲಾ ಹಾಡುಗಳು ಒಂದಕ್ಕಿಂತ ಇನ್ನೊಂದು ನೋಡಲಿಕ್ಕೂ ಅತ್ಯದ್ಭುತವಾಗಿ ಮೂಡಿ ಬಂದಿವೆ. ಕತ್ಲಲ್ಲಿ ಕರ್ಡಿಗೆ ಜಾಮೂನು... ಹಾಗೂ ಕಾಲೇಜ್ ಗೇಟಲ್ಲಿ... ಚೊಂಬೇಶ್ವರ! ಹಾಡುಗಳಿಗೆ ಥಿಯೇಟರಿನಲ್ಲಿ ಸಿಳ್ಳೆ-ಚಪ್ಪಾಳೆಗಳ ಸುರಿಮಳೆಯಾದರೆ, "ಪರವಶನಾದೆನೂ..." ಹಾಡಿಗೆ ಮೌನವಾಗಿದ್ದು ಸಂಪೂರ್ಣ ಅನುಭವಿಸುವಂತಿದೆ ಪ್ರೇಕ್ಷಕರ ಪ್ರತಿಕ್ರಿಯೆ.
ವಿ. ಹರಿಕೃಷ್ಣ ಹಾಡು-ಸಂಗೀತ, ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ, ಅವುಗಳ ಕೋರಿಯಾಗ್ರಫಿಗೆ ತಲೆದೂಗಲೇಬೇಕು. ಚೆಂದದ ಲೊಕೇಶನ್ ಜೊತೆ ಸಂತೋಷ್ ರೈ ಪಾತಾಜೆಯವರ ಕ್ಯಾಮೆರಾ ಕೈಚಳಕವೂ ಸೇರಿ ಸಿನಿಮಾ ಫ್ರೆಶ್ ಫ್ರೆಶ್ ಎನಿಸುತ್ತದೆ. ದೀಪು. ಎಸ್ ಕುಮಾರ್ ಸಂಕಲನ ಹಿತಮಿತವಾಗಿದೆ. ಎಲ್ಲವೂ ಸೇರಿ ನಿಮ್ಮನ್ನು ಸೀಟಿನ ತುದಿಗೆ ತಂದು ಕೂರಿಸದಿದ್ದರೆ ಹೇಳಿ!
ಈ ಸಿನಮಾ ಒಂದು ಫುಲ್ ಎಂಟರ್ ಟೈನ್ ಮೆಂಟ್ ಪ್ಯಾಕೇಜ್ ಎನ್ನಬಹುದು. ಈ 'ಪರಮಾತ್ಮ'ನ ಗೆಲುವಿಗೆ ಬೇಕಾಗಿದ್ದನ್ನು ನೀಡುವಲ್ಲಿ ಸಂಪೂರ್ಣ ಗೆದ್ದಿದ್ದಾರೆ, ಯೋಗರಾಜ್ ಭಟ್ರು. ಆದರೆ ಹಾಡುಗಳ ಮೂಲಕ ಪರಭಾಷೆಯ ಚಿತ್ರರಂಗದವರೂ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿರುವ ಭಟ್ಟರು ಕಥೆ-ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ಎಂದಿನ ಲಾಜಿಕ್ಕಿಗೆ ಅಂಟಿಕೊಂಡಿದ್ದಾರೆ, ಹೊಸತನವೇನೂ ಇಲ್ಲ ಎನ್ನಬಹುದು.
ಈ ಅಭಿಪ್ರಾಯ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವಂತೂ ಅಲ್ಲವೇ ಅಲ್ಲ. ಭಟ್ಟರು ಮನಸ್ಸು ಮಾಡಿದರೆ ಬದಲಾವಣೆ, ಇನ್ನೂ ಹೆಚ್ಚಿನ ಕ್ರಿಯೆಟಿವಿಟಿ ಅವರಿಗೆ ಕಷ್ಟ ಅಲ್ಲವೇ ಅಲ್ಲ. "ಯಾವೋನಿಗ್ ಗೊತ್ತು!" ಈಗಾಗಲೇ ಹೊಸ ಕಥೆ ಭಟ್ಟರ ತಲೆಯಲ್ಲಿ ರೆಡಿ ಆಗಿರಬಹುದು. ಗಣೇಶನ ಮೂರ್ತಿ ಕೆತ್ತಿದ ಶಿಲ್ಪಿಗೆ ಶಿವನ ಮೂರ್ತಿಯದೇನು ಸವಾಲೇ?!...


Click it and Unblock the Notifications











