ಲುಟೆರಾ ವಿಮರ್ಶೆ: ಸಿನಿರಸಿಕರ ಹೃದಯ ಲೂಟಿ
ಉಡಾನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ನಿರ್ದೇಶಕ ವಿಕ್ರಮಾದಿತ್ಯ ಮತ್ತೊಮ್ಮೆ ತಮ್ಮ ಮಾಂತ್ರಿಕ ಸ್ಪರ್ಶವನ್ನು ಲುಟೆರಾ ಚಿತ್ರಕ್ಕೂ ನೀಡಿದ್ದಾರೆ.
ಸಾಹಿತಿ ಓ ಹೆನ್ರಿ ಸಣ್ಣಕಥೆ 'ದಿ ಲಾಸ್ಟ್ ಲೀಫ್' ಆಧಾರಿತ ಚಿತ್ರದಲ್ಲಿ ರಣವೀರ್ ಸಿಂಗ್ ಹಾಗೂ ಸೋನಾಕ್ಷಿ ಸಿನ್ಹಾ ಮನೋಜ್ಞ ಅಭಿನಯ ನೀಡಿದ್ದಾರೆ. ಇಲ್ಲಿನ ನೆಟಿವಿಟಿಗೆ ತಕ್ಕಂತೆ ಆ ಕಾಲ ಘಟ್ಟಕ್ಕೆ ತಕ್ಕ ಸನ್ನಿವೇಶ, ಉಡುಗೆ ತೊಡುಗೆ, ಅಭಿನಯ ಎಲ್ಲವೂ ಸೂಕ್ತವಾಗಿ ಸಮ್ಮಿಲನಗೊಂಡು ಲುಟೆರಾ ಪ್ರೇಕ್ಷಕರ ಮನಸ್ಸನ್ನು ಲೂಟಿ ಮಾಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
1953ರ ಕಾಲಘಟ್ಟದ ಕತೆಯಲ್ಲಿ ಪಾಖಿ(ಸೋನಾಕ್ಷಿ ಸಿನ್ಹಾ) ಮಧ್ಯವಯಸ್ಕ ಹುಡುಗಿ ತನ್ನ ಜಮೀನ್ದಾರ ಅಪ್ಪನ ಲೋಕದಲ್ಲಿ ವಿಹರಿಸುತ್ತಾ ಇರುತ್ತಾಳೆ. ಎಲ್ಲವೂ ಇದ್ದರೂ ಏನೋ ಲವಲವಿಕೆ ಕಳೆದುಕೊಂಡಂಥ ಬರಡು ಭಾವದಲ್ಲಿದ್ದ ಹುಡುಗಿಯ ಬಾಳಲ್ಲಿ ವರುಣ್ (ರಣವೀರ್ ಸಿಂಗ್) ಪ್ರವೇಶವಾಗುತ್ತದೆ.
ಭೂಗರ್ಭವಿಜ್ಞಾನಿಯಾಗಿ ವರುಣ್ ಸಂಗೀತ, ಸಾಹಿತ್ಯ ಹಾಗೂ ತನ್ನ ಕ್ಷೇತ್ರದಲ್ಲಿನ ಅನುಭವದಿಂದ ಜಮೀನ್ದಾರನ ಮನಸ್ಸು ಗೆಲ್ಲುತ್ತಾನೆ. ಜೊತೆಗೆ ಇಡೀ ಕುಟುಂಬದ ವಿಶ್ವಾಸ ಗೆಲ್ಲುತ್ತಾನೆ.
ಈ ಸಮಯದಲ್ಲಿ ಪಾಖಿಯಲ್ಲಿ ಪ್ರೇಮ ಅಂಕುರವಾಗಿರುತ್ತದೆ. ಒಂದಷ್ಟು ಹಾಸ್ಯ, ಪ್ರೇಮ, ಮೌನ, ವೈಮನಸ್ಯದ ದೃಶ್ಯಗಳ ಜೊತೆ ಜೊತೆಗೆ ಪಾಖಿ ತನ್ನ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾಳೆ. ಮನೆ ಮಂದಿಯೂ ಓಕೆ ಎನ್ನುತ್ತಾರೆ. ಆದರೆ, ಇಬ್ಬರ ಮದುವೆ ಅಷ್ಟು ಸುಲಭವಾಗಿ ಆಗುವುದೇ? ಪಾಖಿಗೆ ಕೈ ಕೊಟ್ಟು ವರುಣ್ ಹೋಗುತ್ತಾನಾ? ಮತ್ತೆ ಪಾಖಿ ಬಳಿಗೆ ವರುಣ್ ಬರುತ್ತಾನಾ? ತೆರೆಯ ಮೇಲೆ ತಪ್ಪದೇ ನೋಡಿ ಪ್ರೇಮಕಾವ್ಯ...
ಅಪೂರ್ವ ಪ್ರೇಮಕಾವ್ಯ
50ರ ದಶಕದ ದೃಶ್ಯಗಳನ್ನು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಸಮರ್ಥವಾಗಿ ತೆರೆದಿಡಲಾಗಿದೆ. ಸೋನಾಕ್ಷಿ ಸಿನ್ಹಾ ತಮ್ಮ ನೈಜ ಅಭಿನಯದಿಂದ ಕಣ್ಮನ ಸೆಳೆಯುತ್ತಾರೆ. ಸೋನಾಕ್ಷಿ ಹುಸಿ ಮುನಿಸು ಪ್ರೇಕ್ಷಕರಿಗೆ ಆಪ್ತವಾಗಿದೆ.
ಬ್ಯಾಂಡ್ ಬಾಜಾ ಬಾರಾತ್, ಪ್ಲೇಬಾಯ್ ಇಮೇಜ್ ನಿಂದ ಹೊರ ಬರಲು ರಣವೀರ್ ಸಿಂಗ್ ಗೆ ಉತ್ತಮ ಪಾತ್ರ ಸಿಕ್ಕಿದೆ. ರಣವೀರ್ ಮೌನ ಕೂಡಾ ಇಲ್ಲಿ ಮಾತಾಗಿದೆ.
ಕ್ಲಾಸಿಕ್ ಕಥೆ
2010ರಲ್ಲಿ ಉಡಾನ್ ಚಿತ್ರದ ಮೂಲಕ ಸಿನಿರಸಿಕರ ಗಮನ ಸೆಳೆದ ವಿಕ್ರಮಾದಿತ್ಯ ಮೋತ್ವಾನೆ ಅವರು ಓ ಹೆನ್ಸಿ ಸಣ್ಣ ಕಥೆಗಳನ್ನು ಸೊಗಸಾಗಿ ದೃಶ್ಯ ಕಾವ್ಯವನ್ನಾಗಿಸಿದ್ದಾರೆ. ಈ ಚಿತ್ರದ ಇತಿಹಾಸ, ಕಲೆ, ಕಾವ್ಯ, ಸಾಹಿತ್ಯ, ಸುಶ್ರಾವ್ಯ ಸಂಗೀತ ನಿಮ್ಮನ್ನು ಹಳೆ ಕಾಲದ ನೆನಪುಗಳು ಕೆದಕುವಂತೆ ಮಾಡುತ್ತದೆ.
ಸರಳ ಸುಂದರ ಸಂಯೋಜನೆ
ಅಮಿತ್ ತ್ರಿವೇದಿ ರಾಗ ಸಂಯೋಜನೆ, ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯದ ಜುಗಲ್ ಬಂದಿ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.
ಹಳೆ ಕಾಲದ ಚಿತ್ರ
ಗತಕಾಲದ ವೈಭವವನ್ನು ಸೆರೆ ಹಿಡಿಯುವಲ್ಲಿ ಮಹೇಂದ್ರ ಶೆಟ್ಟಿ ಅವರ ಶ್ರಮ ಎದ್ದು ಕಾಣುತ್ತದೆ. ರಣವೀರ್ ಹಾಗೂ ಸೋನಾಕ್ಷಿ ಸಾಮಿಪ್ಯದ ದೃಶ್ಯ, ಲಾಂಗ್ ಶಾಟ್ ದೃಶ್ಯಗಳು ಅದ್ಭುತವಾಗಿ ಬಂದಿದೆ. ಸೋನಾಕ್ಷಿ ಒಂಟಿಯಾಗಿ ಕುಳಿತಿರುವಾಗ ನೆರಳು ಬೆಳಕಿನ ದೃಶ್ಯ ಸಂಯೋಜನೆ ಉತ್ತಮವಾಗಿದೆ.
ಕೊನೆ ನುಡಿ
ದಬಾಂಗ್, ರೌಡಿ ರಾಥೋರ್, ಸನ್ ಆಫ್ ಸರ್ದಾರ್ ಚಿತ್ರಗಳ ಸೋನಾಕ್ಷಿ ಬದಲಿಗೆ ಹೊಸ ಸೋನಾಕ್ಷಿ ನೋಡಲು ಬಯಸುವವರು ಈ ಚಿತ್ರವನ್ನು ತಪ್ಪದೇ ನೋಡಿ.. ರಣವೀರ್ ಸಿಂಗ್ ಮೌನವೇ ಮಾತಾಡುವ ನಟನೆ ಕಾಣಬೇಕಾದರೆ ಚಿತ್ರಮಂದಿರಕ್ಕೆ ಹೋಗಿ ಬನ್ನಿ. ಅಬ್ಬರದ ಚಿತ್ರಗಳ ನಡುವೆ ಸುಂದರ ಪ್ರೇಮ ಕಾವ್ಯ ಹಿಂದಿ ಚಿತ್ರರಂಗದಲ್ಲಿ ಅಪರೂಪ ತಪ್ಪದೇ ವೀಕ್ಷಿಸಿ


Click it and Unblock the Notifications










