ಖ್ಯಾತ ನಟ ಮನ್ಸೂರ್ ಅಲಿ ಖಾನ್ ಆಸ್ಪತ್ರೆಗೆ ದಾಖಲು
ದಕ್ಷಿಣ ಭಾರತದ ಖ್ಯಾತ ನಟ ಮನ್ಸೂರ್ ಅಲಿ ಖಾನ್ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ ಹಿನ್ನೆಲೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮನ್ಸೂರ್ ಅಲಿ ಖಾನ್ ಅವರ ಮೂತ್ರಪಿಂಡದಲ್ಲಿ ಕಲ್ಲು ಪತ್ತೆಯಾಗಿದ್ದು, ಸೋಮವಾರ (ಮೇ 10) ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ತಿಳಿದು ಬಂದಿದೆ.
ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಮನ್ಸೂರ್ ಅಲಿ ಖಾನ್ ಅವರು ಇತ್ತೀಚಿಗೆ ಭಾರಿ ಸುದ್ದಿಯಲ್ಲಿದ್ದರು. 'ಸರ್ಕಾರ ಬಲವಂತವಾಗಿ ಜನರಿಗೆ ವ್ಯಾಕ್ಸಿನ್ ನೀಡುತ್ತಿದೆ, ವ್ಯಾಕ್ಸಿನ್ ಪಡೆದ ನಂತರ ಜನರು ಸಾಯುತ್ತಿದ್ದಾರೆ, ಸರ್ಕಾರವೇ ಸಾರ್ವಜನಿಕರನ್ನು ಕೊಲ್ಲುತ್ತಿದೆ' ಎಂದು ಆರೋಪಿಸಿದ್ದರು.

ಇತ್ತೀಚಿಗಷ್ಟೆ ಸಾವನ್ನಪ್ಪಿದ್ದ ತಮಿಳು ಹಾಸ್ಯ ನಟ ವಿವೇಕ್ ಅವರ ಸಾವಿನ ಬಗ್ಗೆಯೂ ಟೀಕೆ ಮಾಡಿದ್ದ ಮನ್ಸೂರ್ ಅಲಿ ಖಾನ್, ''ವ್ಯಾಕ್ಸಿನ್ ಪಡೆದ ನಂತರವೇ ವಿವೇಕ್ ನಿಧನರಾದರು, ಅದಕ್ಕೂ ಮುಂಚೆ ಅವರು ಚೆನ್ನಾಗಿದ್ದರು'' ಎಂದು ಗಂಭೀರ ಆರೋಪ ಮಾಡಿದ್ದರು.
ಮನ್ಸೂರ್ ಅಲಿ ಖಾನ್ ಅವರ ಈ ಆರೋಪಗಳ ವಿರುದ್ಧ ಮದ್ರಾಸ್ ಹೈ ಕೋರ್ಟ್ನಲ್ಲಿ ದೂರು ದಾಖಲಾಗಿತ್ತು. ಕೋವಿಡ್ ವ್ಯಾಕ್ಸಿನ್ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿದ್ದಾರೆ ಎಂದು ನ್ಯಾಯಾಲಯ 2 ಲಕ್ಷ ದಂಡ ವಿಧಿಸಿತ್ತು.
ಮನ್ಸೂರ್ ಅಲಿ ಖಾನ್ ಸಿನಿಮಾಗಳು ಕುರಿತು
ಮನ್ಸೂರ್ ಅಲಿ ಖಾನ್ ಅವರು ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಮನ್ಸೂರ್ ಅಲಿ ಖಾನ್ ಕನ್ನಡದಲ್ಲಿ ಬಾಸ್, ಯುವ ಶಕ್ತಿ, ದಿಗ್ಗಜರು, ಮಸ್ತಿ, ಲೇಡಿ ಕಮಿಷನರ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











