2022ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಎಂಟ್ರಿ ಪಡೆದ ತಮಿಳಿನ ಕೂಳಂಗಳ್
ಒಂದು ಸಿನಿಮಾ ಅಂದರೆ ಅದು ಬರೀ ಸಿನಿಮಾವಾಗಿ ಮಾತ್ರ ಪ್ರಭಾವ ಬೀರೋದಿಲ್ಲ. ಬದಲಾಗಿ ಸಿನಿಮಾದಲ್ಲಿ ಬರೋ ಪಾತ್ರಗಳು, ಸನ್ನಿವೇಶಗಳು ಕೆಲವೊಮ್ಮೆ ಮನುಷ್ಯನ ನಿಜ ಜೀವನವನ್ನು ಹೊಕ್ಕುತ್ತೆ. ಪರಿಸ್ಥಿತಿಯ ನೈಜತೆಯನ್ನು ಪರಿಚಯಿಸುತ್ತೆ. ಒಬ್ಬ ನೋಡುಗನಿಗೆ ಸಿನಿಮಾ ಒಳ್ಳೆ ಅಭಿಪ್ರಾಯವನ್ನಾದರೂ ಮೂಡಿಸಬಹುದು, ಕೆಟ್ಟ ಸಂದೇಶವನ್ನಾದರೂ ನೀಡಬಹುದು ಆದರೆ ಸಿನಿಮಾವನ್ನು ಪ್ರೇಕ್ಷಕ ಹೇಗೆ ತೆಗೆದುಕೊಳ್ಳುತ್ತಾನೆ ಅನ್ನೋದಷ್ಟೆ ಪ್ರಮುಖವಾಗಿರುತ್ತೆ. ಹೀಗೆ ಮನಸ್ಸಿಗೆ ತುಂಬ ನಾಟುವಂತಹ, ಜೀವನದ ಕರಾಳ ಸತ್ಯವನ್ನು ತೆರೆದಿಡುವ ಸಿನಿಮಾ ತಮಿಳಿನ ಕೂಳಂಗಳ್. ಇದೇ ಸಿನಿಮಾ ಈಗ 2022ರ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಎಂಟ್ರಿ ಪಡೆದಿದೆ.
ಕೂಳಂಗಳ್ ಎಂದರೇ ನದಿಯ ಪಕ್ಕದಲ್ಲಿ ಇರೊ ಬೆಣಚುಕಲ್ಲು ಎಂದರ್ಥ. ಸಿನಿಮಾದ ಟೈಟಲ್ಗು ಸಿನಿಮಾದಲ್ಲಿ ಬರೋ ಕಥೆಗೂ ಸಂಬಂಧ ಇದ್ದು, ಇದನ್ನ ಬಹಳ ಅಚ್ಚುಕಟ್ಟಾಗಿ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಪಿ.ಎಸ್ ವಿನೋದ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, 94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಕೂಳಂಗಳ್ ಅಧಿಕೃತವಾಗಿ ಎಂಟ್ರಿಯಾಗಿದೆ.
ಈ ಸಿನಿಮಾದಲ್ಲಿ ಮದ್ಯ ವ್ಯಸನಿ ಪತಿಯೊಬ್ಬನ ಪಾತ್ರ ಬರುತ್ತದೆ. ದೀರ್ಘ ಕಾಲದ ಕಾಯಿಲೆಯಿಂದ ಈತ ಬಳಲುತ್ತಿರುತ್ತಾನೆ. ಅಲ್ಲದೇ ಕುಡಿದು ಬಂದು ಪತ್ನಿಯ ಮೇಲೆ ಹಲ್ಲೆ ಮಾಡುತ್ತಾನೆ. ಈ ಕಾರಣಕ್ಕಾಗಿ ಈತನ ಪತ್ನಿ ಬಿಟ್ಟು ಹೋಗಿರುತ್ತಾಳೆ. ಇಂತಹ ಸಂದರ್ಭದಲ್ಲಿ ಮನನೊಂದು ತನ್ನ ಚಿಕ್ಕ ವಯಸ್ಸಿನ ಮಗನೊಂದಿಗೆ ಪತ್ನಿಯನ್ನುಈತ ಹುಡುಕಿಕೊಂಡು ಸಾಗುತ್ತಾನೆ. ಹಾಗೂ ಪತ್ನಿಯನ್ನು ಕರೆತರುವಲ್ಲಿಯೂ ಯಶಸ್ವಿಯಾಗುತ್ತಾನೆ. ಈತನ ಈ ಹುಡುಕಾಟದ ಸಮಯದಲ್ಲಿ ಎದುರಾಗುವಂತಹ ಕಷ್ಟಗಳೇನು? ಬಿಟ್ಟುಹೋದ ಪತ್ನಿಯನ್ನು ಈತ ಹೇಗೆ ಹುಡುಕುತ್ತಾನೆ? ಈ ಪಯಣದಲ್ಲಿ ಎದುರಾಗುವ ಕಷ್ಟಗಳು ಮತ್ತು ಗಂಡ ಹೆಂಡತಿಯ ಮನಸ್ಸಿನ ಭಾವನೆಗಳನ್ನು ಮನ ಮುಟ್ಟುವಂತೆ ಕಥೆ ಹೆಣೆದು ಅದಕ್ಕೆ ದೃಶ್ಯರೂಪ ನೀಡಲಾಗಿದೆ.

ಇಂತಹ ಒಂದು ಅದ್ಭುತ ಚಿತ್ರವನ್ನು ನಟಿ ನಯನ ತಾರ ಮತ್ತು ಪತಿ ವಿಘ್ನೇಶ್ ಶಿವನ್ ತಮ್ಮದೇ ರೌಡಿ ಬ್ಯಾನರ್ಸ್ನಲ್ಲಿ ನಿರ್ಮಿಸಿದ್ದಾರೆ.ಈ ಚಿತ್ರ ಈಗ 94ನೇ ಆಸ್ಕರ್ಗೆ ಎಂಟ್ರಿ ಆಗುತ್ತಿರುವ ಬಗ್ಗೆ ಭಾರತೀಯ ಚಲನಚಿತ್ರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಪ್ರನ್ ಸೇನ್ ತಿಳಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಚೆಲ್ಲಪಾಂಡಿ ಮತ್ತು ಕರುತ್ತದೈಯಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ತಮ್ಮ ನಟನೆ ಮೂಲಕವೇ ಗಮನ ಸೆಳೆದಿದ್ದಾರೆ.
ಇನ್ನು ಈ ಖುಷಿ ವಿಚಾರವನ್ನು ನಿರ್ಮಾಪಕ ವಿಘ್ನೇಶ್ ಶಿವನ್ ಕೂಡ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. "ಇದನ್ನು ಕೇಳಲು ಅವಕಾಶ ಬಂದಿದೆ. ನಮ್ಮ ಜೀವನದ ಕನಸು ನನಸಾಗಲು ಇನ್ನೆರೆಡು ಹೆಜ್ಜೆ ಮಾತ್ರ ಬಾಕಿಯಿದೆ ಎಂದು ಹೇಳುವ ಮೂಲಕ ಚಿತ್ರದ ಪೋಸ್ಟರ್ಅನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ವಿಘ್ನೇಶ್ ಅವರ ಈ ಪೋಸ್ಟ್ಗೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದು, ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತಷ್ಟು ಪ್ರಶಸ್ತಿ ನಿಮ್ಮದಾಗಲಿ,'' ಎಂದು ಹೇಳಿದ್ದಾರೆ.

ಇದೇ ವಿಚಾರಕ್ಕೆ ನಟಿ ನಯನ ತಾರ ಕೂಡ ಸಂತಸ ವ್ಯಕ್ತಪಡಿಸಿದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಶೇರ್ ಮಾಡಿ "ಎತ್ತರಕ್ಕೆ. ಎತ್ತರಕ್ಕೆ. ಎತ್ತರಕ್ಕೆ ಹೋಗುವುದು" ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್ ಕೂಡ ಸುದ್ದಿ ಕೇಳಿ ಕಮೆಂಟ್ಗಳ ಮೇಲೆ ಕಮೆಂಟ್ ಮಾಡಿ ವಿಷ್ ಮಾಡುತ್ತಿದ್ದಾರೆ. ಚಿತ್ರ ನಿರ್ದೇಶಕ ವಿನೋದ್ ರಾಜ್ ಕೂಡ ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇನ್ನು ಈ ಹಿಂದೆ ಕೂಡ ಕೂಳಂಗಳ್ ಸಿನಿಮಾ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುನ್ನತ ಟೈಗರ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. 2022ರ ಆಸ್ಕರ್ ಪ್ರಶಸ್ತಿ ಸಮಾರಂಭ ಲಾಸ್ ಏಂಜಲೀಸ್ನಲ್ಲಿ ಮಾರ್ಚ್ 22ಕ್ಕೆ ನಡೆಯಲಿದ್ದು,ಈಡೀ ಚಿತ್ರತಂಡ ಅಂದು ಈ ಕಾರ್ಯಕ್ರಮಕ್ಕೆ ತೆರಳಲಿದೆ ಎಂಬ ಮಾಹಿತಿ ಕೂಡ ತಿಳಿದುಬಂದಿದೆ. ಇದಕ್ಕಾಗಿ ನಿರ್ಮಾಪಕರು ತಯಾರಿ ನಡೆಸಿದ್ದು, ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.


Click it and Unblock the Notifications











