ಕೆಜಿಎಫ್ ಮುಗಿಸಿ ಹೈದರಾಬಾದ್ಗೆ ಬಂದಿಳಿದ ಪ್ರಶಾಂತ್ ನೀಲ್
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೈದರಾಬಾದ್ಗೆ ತೆರಳಿದ್ದಾರೆ. ಮುತ್ತಿನ ನಗರಿ ಹೈದರಾಬಾದ್ ಏರ್ಪೋರ್ಟ್ನಲ್ಲಿ ಪ್ರಶಾಂತ್ ಕಾಣಿಸಿಕೊಂಡಿದ್ದು, ಫೋಟೋಗಳು ವೈರಲ್ ಆಗಿದೆ.
ಕೆಜಿಎಫ್ ಚಿತ್ರೀಕರಣ ಬಹುತೇಕ ಮುಗಿಸಿರುವ ಪ್ರಶಾಂತ್ ನೀಲ್ ಈಗ ಸಲಾರ್ ಚಿತ್ರದ ಕೆಲಸ ಆರಂಭಿಸಲು ಸಜ್ಜಾಗಿದ್ದಾರೆ. ಸಲಾರ್ ಚಿತ್ರದ ಲೋಕೇಶನ್ ಹುಡುಕಲು ಪ್ರಶಾಂತ್ ನೆರೆರಾಜ್ಯಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಭಾಸ್ ನಾಯಕನಾಗಿ ನಟಿಸಲಿರುವ ಸಲಾರ್ ಚಿತ್ರ ಜನವರಿ ತಿಂಗಳಲ್ಲಿ ಆರಂಭವಾಗಲಿದೆ ಎಂದು ಈ ಮೊದಲೇ ತಿಳಿಸಿದ್ದರು. ಅದರಂತೆ ಚಿತ್ರದ ಕೆಲಸ ಸಹ ಪ್ರಾರಂಭವಾಗಿದೆ ಎನ್ನಲಾಗಿದೆ. ಹೈದರಾಬಾದ್ನಲ್ಲಿ ಮಾಧ್ಯಮಗಳು ವರದಿ ಮಾಡಿರುವಂತೆ ಜನವರಿ 22 ರಿಂದ ಸಲಾರ್ ಸಿನಿಮಾ ಅಧಿಕೃತವಾಗಿ ಶುರುವಾಗಲಿದೆ. ಚಿತ್ರದ ಮುಹೂರ್ತವನ್ನು ಮಾಡುವ ಮೂಲಕ ಸಿನಿಮಾ ಆರಂಭಿಸಲಿದ್ದಾರೆ.

ಇನ್ನುಳಿದಂತೆ ಕೆಜಿಎಫ್ ನಿರ್ಮಾಪಕ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರ್ ಸಲಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್, ಛಾಯಾಗ್ರಾಹಕ ಭುವನ್ ಗೌಡ ಈ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.
ನಾಯಕಿಯ ಆಯ್ಕೆ ಅಂತಿಮವಾಗಿಲ್ಲ. ಸದ್ಯದ ವರದಿ ಪ್ರಕಾರ ಸಲಾರ್ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ಹೆಸರು ಚರ್ಚೆಯಲ್ಲಿದೆ. ಜಾನ್ ಅಬ್ರಾಹ ಖಳನಾಯಕನ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮತ್ತೊಂದೆಡೆ ಪ್ರಭಾಸ್ ಸಹ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಧೇ ಶ್ಯಾಮ್ ಕೊನೆಯ ಹಂತದಲ್ಲಿದ್ದಾರೆ. ನಾಗ್ ಅಶ್ವಿನ್ ಜೊತೆಗಿನ ಪ್ರಾಜೆಕ್ಟ್ ಆರಂಭಿಸಬೇಕಿದೆ. ಆದಿಪುರುಷ್ ಆರಂಭಿಸಬೇಕಿದೆ. ಈ ನಡುವೆ ಸಲಾರ್ ಚಿತ್ರವೂ ಪ್ರಾರಂಭಿಸಬೇಕಿದೆ.


Click it and Unblock the Notifications











