ಜಾತಿ ನಿಂದನೆ ಮಾಡಿದ ಮೋಹನ್ ಬಾಬು ಕುಟುಂಬದ ವಿರುದ್ಧ ತಿರುಗಿಬಿದ್ದ ಸವಿತಾ ಸಮಾಜ!
ತೆಲುಗಿನ ಹಿರಿಯ ನಟ ಮಂಚು ಮೋಹನ್ ಬಾಬು ಕುಟುಂಬ ಸದಾ ಒಂದಲ್ಲ ಒಂದು ವಿವಾದದ ಮೂಲಕವೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದೆ. ಹಿಂದೆ ನಡೆದ 'ಮಾ'ಚುನಾವಣೆ ಆಗಬಹುದು, ಇತ್ತೀಚೆಗೆ ಜಗನ್ ಮೋಹನ್ ರೆಡ್ಡಿ ಜೊತೆ ಸಿನಿಮಾರಂಗದ ಹಿರಿಯರ ಭೇಟಿಯ ಸಂದರ್ಭದಲ್ಲಿ ಮೋಹನ್ ಬಾಬು ಅವರನ್ನು ಕಡೆಗಣಿಸಿರುವ ವಿಚಾರಕ್ಕೆ ಇರಬಹುದು ಅಥವಾ ಇತ್ತೀಚೆಗೆ ಮೋಹನ್ ಬಾಬು ಅಭಿನಯದ 'ಸನ್ ಆಫ್ ಇಂಡಿಯಾ' ಚಿತ್ರದ ಕಲೆಕ್ಷನ್ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಹುಟ್ಟುಹಾಕಲಾದ ಟ್ರೋಲ್ ಗಳು, ಅದಕ್ಕೆ ಪ್ರತಿಯಾಗಿ ಮೋಹನ್ ಬಾಬು ನಡೆದುಕೊಂಡ ರೀತಿ ಇದೆಲ್ಲವೂ ಕೂಡ ಟೀಕೆಗಳಿಗೆ ಒಳಗಾಗಿದೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಅವರ ಕುಟುಂಬದ ಹೇರ್ ಡ್ರೆಸ್ಸರ್ ನಾಗಸೀನು ವಿವಾದ.
ಕಳೆದ ಹತ್ತು ವರ್ಷಗಳಿಂದ ನಾಗಸೀನು, ಮೋಹನ್ ಬಾಬು ಕುಟುಂಬದ ಅದರಲ್ಲೂ ಮೋಹನ್ ಬಾಬು ಮಗ ವಿಷ್ಣು ಅವರಿಗೆ ಕೇಶ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಯಾವುದೇ ವಿವಾದಗಳಿಲ್ಲದೆ ಸೂತ್ರವಾಗಿ ನಾಗಸೀನು ತನ್ನ ಕೆಲಸಗಳನ್ನು ತಾನು ಮಾಡಿಕೊಂಡು ಹೋಗುತ್ತಿದ್ದಾರೆ.
ಆದರೆ ಕಳೆದ ವಾರ ಮೋಹನ್ ಬಾಬು ಮಗ ವಿಷ್ಣು, ತಮ್ಮ ಪರ್ಸನಲ್ ಹೇರ್ ಡ್ರೆಸ್ಸರ್ ನಾಗಸೀನು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಅವರು 'ನಾಗಸೀನು ಅಕ್ರಮವಾಗಿ ಮನೆ ಒಳಗೆ ನುಸುಳಿ ಸುಮಾರು ಐದು ಲಕ್ಷ ಮೌಲ್ಯದ ಹೇರ್ ಡ್ರೆಸ್ಸಿಂಗ್ ಮೆಟೀರಿಯಲ್ ಕಳ್ಳತನ ಮಾಡಿದ್ದಾರೆ' ಅಂತ ಕಳ್ಳತನದ ಆರೋಪವನ್ನು ಹೊರಿಸಿದ್ದಾರೆ. ಪೊಲೀಸರು ವಿಷ್ಣು ಅವರು ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ಕೂಡ ಆರಂಭಿಸಿದ್ದಾರೆ.

ಪೊಲೀಸ್ ಕಂಪ್ಲೇಂಟ್ ಮಾಡುವುದರ ಹಿಂದಿರುವ ಕಥೆ
ಇಷ್ಟಕ್ಕೂ ನಾಗಸೀನು ವಿರುದ್ಧ ಇಂತಹ ಒಂದು ಗುರುತರ ಆರೋಪ ಮಾಡಿ ಪೊಲೀಸ್ ಕಂಪ್ಲೇಂಟ್ ಮಾಡುವುದರ ಹಿಂದಿರುವ ಕಥೆ ಏನು ಅಂತ ನೋಡಿದರೆ, ಇತ್ತೀಚೆಗೆ ಬಿಡುಗಡೆಯಾಗಿರುವ ನಟ ಮೋಹನ್ ಬಾಬು ಅವರ ಚಿತ್ರ 'ಸನ್ ಆಫ್ ಇಂಡಿಯಾ' ಚಿತ್ರ ಬಾಕ್ಸ್ ಆಫೀಸ್ನಲ್ಲಿ ಕಳಪೆಮಟ್ಟದ ಕಲೆಕ್ಷನ್ ಕಂಡಿದೆ ಅಲ್ಲದೆ ಈ ಚಿತ್ರದ ಬಗ್ಗೆ ಸಾಕಷ್ಟು ಟ್ರೋಲ್ಗಳು ಸಹ ನಡೆಯುತ್ತಿದೆ.
ಇದೇ ಕ್ರಮದಲ್ಲಿ ನಾಗಸೀನು ಕೂಡ 'ಸನ್ ಆಫ್ ಇಂಡಿಯಾ' ಚಿತ್ರದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ ಅಂತ ಹೇಳಲಾಗಿದೆ ಇದರ ವಿರುದ್ಧ ಕೆರಳಿದ ಮೋಹನ್ ಬಾಬು ಅವರು ನಾಗಸೀನುರನ್ನು ಮನೆಯ ಕೆಲಸಗಾರರ ಮುಂದೆ ಮಂಡಿಯೂರಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆನಂತರ ಅವರ ನಾಗಸೀನು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ಅವರ ತಾಯಿಯ ಬಗ್ಗೆ ಅವರ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದು ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪವೂ ಕೂಡ ಈಗ ನಾಗಸೀನು ಕಡೆಯಿಂದ ಕೇಳಿಬರುತ್ತಿದೆ. ಈ ವಿಚಾರವಾಗಿ ನಾಗಸೀನು ಅವರು ಮಾಧ್ಯಮಗಳಿಗೆ ತಮ್ಮ ವಿರುದ್ಧ ಕಳ್ಳತನದ ಆರೋಪ ಹೊರಿಸಿದರ ಹಿಂದಿರುವ ವಿಚಾರವನ್ನು ಎಳೆಎಳೆಯಾಗಿ ಬಿಡಿಸಿದ್ದಾರೆ. ಅಲ್ಲದೆ ಜಾತಿ ನಿಂದನೆ ಆರೋಪದಡಿಯಲ್ಲಿ ಮೋಹನ್ ಬಾಬು ಮತ್ತು ಅವರ ಕುಟುಂಬದ ವಿರುದ್ಧ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾರೆ.

ತಿರುಗಿಬಿದ್ದ ಸವಿತಾ ಸಮಾಜ
ನಾಗಸೀನು ವಿರುದ್ಧ ಕಳ್ಳತನದ ಆರೋಪ ಹೊರಿಸಿ ಮಂಚು ವಿಷ್ಣು ಕಂಪ್ಲೇಂಟ್ ಕೊಟ್ಟ ನಂತರ ಘಟನೆಗಳು ಒಂದರಂತೆ ಒಂದು ತೀವ್ರ ಸ್ವರೂಪ ಪಡೆಯುತ್ತಿದೆ. ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ನಾಗಸೀನು ಅವರು ನೀಡಿದ ಸ್ಪಷ್ಟೀಕರಣ ಮತ್ತು ಜಾತಿನಿಂದನೆ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಅತ್ತ ತೆಲಂಗಾಣ ಮತ್ತು ಇತ್ತ ಆಂಧ್ರಪ್ರದೇಶದಲ್ಲಿನ ಸವಿತಾ ಸಮಾಜ ಮೋಹನ್ ಬಾಬು ಕುಟುಂಬದ ವಿರುದ್ಧ ತಿರುಗಿಬಿದ್ದಿದೆ. ಟಾಲಿವುಡ್ನ ಹಿರಿಯ ನಟ ಮಂಚು ಮೋಹನ್ ಬಾಬು ಹಾಗೂ ಅವರ ಪುತ್ರ, ನಾಯಕ ಮಂಚು ವಿಷ್ಣು ಅವರ ವರ್ತನೆಗೆ ಸವಿತಾ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮೋಹನ್ ಬಾಬು ಜೊತೆಗಿನ ನಾಗಸೀನು ವಿಚಾರಕ್ಕೆ ಸಂಬಂಧಿಸಿದಂತೆ ಸವಿತಾ ಸಮಾಜದ ಮುಖಂಡರು ಮೋಹನ್ ಬಾಬು, ಅವರ ಪುತ್ರ ಹಾಗೂ 'ಮಾ' ಸಂಘದ ಅಧ್ಯಕ್ಷ ಮಂಚು ವಿಷ್ಣು ವಿರುದ್ಧ ಕಿಡಿಕಾರಿದ್ದಾರೆ.

ಸಮಾಜದ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ
ಮೋಹನ್ ಬಾಬು ಮೇಲೆ ಜಾತಿನಿಂದನೆ ಎಂತಹ ಗಂಭೀರವಾದ ಆರೋಪ ಕೇಳಿ ಬಂದರೂ ಇದುವರೆಗೆ ಅವರು ಎಲ್ಲಿ ಕೂಡ ಈ ವಿಚಾರವಾಗಿ ಮಾತನಾಡುತ್ತಿಲ್ಲ. ಇದರಿಂದ ಮತ್ತಷ್ಟು ಕೆರಳಿರುವ ಸವಿತಾ ಸಮಾಜದ ನಾಯಕರು ಬೀದಿಗಿಳಿದು ಹೋರಾಟದ ಹಾದಿಯನ್ನು ಹಿಡಿದಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ನಗರಗಳಲ್ಲಿ ಸವಿತಾ ಸಮಾಜದ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಸಮುದಾಯದ ಮುಖಂಡರು ಕರ್ನೂಲ್ನಲ್ಲಿರುವ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಮೋಹನ್ ಬಾಬು ಹಾಗೂ ಅವರ ಪುತ್ರನನ್ನು ಜಾತಿ ಹೆಸರಿನಲ್ಲಿ ನಿಂದಿಸಿರುವ ಆರೋಪದ ಮೇಲೆ ಸವಿತಾ ಸಮಾಜದ ಸಮುದಾಯದ ಮುಖಂಡರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಮಂಚು ಕುಟುಂಬದವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಕೇಶ ವಿನ್ಯಾಸಕ ನಾಗಸೀನು ವಿರುದ್ಧ ಉದ್ದೇಶಪೂರ್ವಕವಾಗಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಜಾತಿಯ ಹೆಸರಲ್ಲಿ ಮಾನಸಿಕವಾಗಿ ಹಿಂಸಿಸಿ ಅವಮಾನಿಸಲಾಗಿದೆ. ಮೋಹನ್ ಬಾಬು ಕುಟುಂಬಸ್ಥರು ತಮ್ಮ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕೂಡಲೇ ಕ್ಷಮೆಯಾಚಿಸಬೇಕು, ಜಾತಿ ನಿಂದನೆಯ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೋಹನ್ ಬಾಬು ವಿರುದ್ಧ ಪ್ರತಿಭಟನೆ
ಮೋಹನ್ ಬಾಬು ವಿರುದ್ಧ ದಿನೇದಿನೇ ಈ ವಿಚಾರದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಇದೆ ಕರ್ನೂಲಿನ ನಂತರ ಇದೀಗ ಗುಂಟೂರು, ಒಂಗೋಲ್ನಲ್ಲಿ ಕೂಡ ಸವಿತಾ ಸಮುದಾಯದ ಜತೆಗೆ ಇತರ ಹಿಂದುಳಿದ ವರ್ಗದ ಸಮುದಾಯಗಳು ಕೂಡ ಮೋಹನ್ ಬಾಬು ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ. ಮತ್ತೊಂದೆಡೆ, ಬಿ.ಸಿ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಆರ್.ಕೃಷ್ಣಯ್ಯ ಅವರು ಮಾತನಾಡುತ್ತಾ 'ಹಣ ಅಧಿಕಾರ ದುರಹಂಕಾರದ ಮದದಿಂದ ಕೂಡಿರುವ ಮೋಹನ್ ಬಾಬು ಅವರು ನಾಗಸೀನುಯನ್ನು ಜಾತಿ ಹೆಸರಿನಲ್ಲಿ ನಿಂದಿಸಿರುವುದು ಖಂಡನಾರ್ಹ. ಮೋಹನ್ ಬಾಬು ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

ಇದುವರೆಗೂ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ
ಹಲವು ವರ್ಷಗಳಿಂದ ಮಂಚು ಕುಟುಂಬಕ್ಕಾಗಿ ದುಡಿಯುತ್ತಿದ್ದ ನಾಗಸೀನು ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿ ದಾಖಲಿಸುವ ಮೊದಲು ಮಾನಸಿಕವಾಗಿ ಸಾಕಷ್ಟು ಕಿರುಕುಳವನ್ನು ನೀಡಿರುವ ಆರೋಪ ಕೂಡ ಈಗ ಕೇಳಿ ಬರುತ್ತಿದೆ. ಮೋಹನ್ ಬಾಬು ಮತ್ತು ಅವರ ಪುತ್ರ ಮಂಚು ವಿಷ್ಣು, ಸವಿತಾ ಸಮುದಾಯದ ಜೊತೆಗೆ ಬಿ.ಸಿ ಸಮುದಾಯದಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯ ದಿನನಿತ್ಯ ಹೆಚ್ಚಾಗುತ್ತಿದೆ. ಇಷ್ಟೆಲ್ಲ ಘಟನಾವಳಿಗಳು ನಡೆಯುತ್ತಿದ್ದರು ಮೋಹನ್ ಬಾಬು ಮತ್ತವರ ಕುಟುಂಬದ ಸದಸ್ಯರು ಇದುವರೆಗೂ ಈ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ.


Click it and Unblock the Notifications











