X
ಹೋಮ್ ಚಲನಚಿತ್ರಗಳ ಒಳನೋಟ

ಹ್ಯಾಪಿ ಬರ್ತಡೇ ಸೂಪರ್‌ ಸ್ಟಾರ್: ರಜನಿಕಾಂತ್ ಅಭಿನಯದ ಈ 11 ಕನ್ನಡ ಸಿನಿಮಾಗಳನ್ನು ಮಿಸ್ ಮಾಡದೇ ನೋಡಿ!

Author Sowmya Bairappa | Updated: Thursday, December 12, 2024, 09:59 AM [IST]

ತಮ್ಮ ವಿಭಿನ್ನ ಸ್ಟೈಲ್ ಮತ್ತು ಮ್ಯಾನರಿಸಂನಿಂದ ಖ್ಯಾತರಾಗಿರುವ ಸೂಪರ್ ಸ್ಟಾರ್ ರಜನಿಕಾಂತ್, ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಜನಿಸಿದ್ದು, ಶಿಕ್ಷಣ ಪಡೆದಿರುವುದು ಎಲ್ಲಾ ಬೆಂಗಳೂರಿನಲ್ಲಿಯೇ. ಇವರ ಬಾಲ್ಯದ ಹೆಸರು ಶಿವಾಜಿರಾವ್ ಗಾಯಕವಾಡ್. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಬಸ್‌ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್, ತಮಿಳಿನ ಖ್ಯಾತ ನಿರ್ದೇಶಕ ಕೆ.ಬಿ.ಬಾಲಚಂದರ್ ನಿರ್ದೇಶನದ ಚಿತ್ರದ ಮೂಲಕ ಖಳನಟನಾಗಿ ಸಿನಿರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿ, ಮುಂದೆ ನಾಯಕನಾಗಿ ಬಡ್ತಿ ಪಡೆದರು. ರಜನಿಕಾಂತ್ ತಮಿಳು ಸಿನಿಮಾರಂಗಕ್ಕೆ ಮಾತ್ರವಾಗಿಲ್ಲ. ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ತಲೈವಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ತೆಲುಗು, ಹಿಂದಿ ಭಾಷೆಯಲ್ಲಿ ಟಾಪ್ ನಟರ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇಲ್ಲಿ ರಜಿನಿಕಾಂತ್ ಅಭಿನಯದ ಕನ್ನಡ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಕಥಾಸಂಗಮ 1976

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೊದಲ ಕನ್ನಡ ಸಿನಿಮಾ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಕಥಾಸಂಗಮ'. ಈ ಸಿನಿಮಾದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಪುಟ್ಟಣ್ಣ ಅವರು ನಿರ್ದೇಶನ ಮಾಡಿದ್ದರು.  ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಕಥಾಸಂಗಮದಲ್ಲಿ ಕಲ್ಯಾಣ ಕುಮಾರ್, ಬಿ.ಸರೋಜಾದೇವಿ, ರಜಿನಿಕಾಂತ್, ಆರತಿ, ಗಂಗಾಧರ್ ಮತ್ತು ಲೀಲಾವಾತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರ ಹಂಗು, ಅತಿಥಿ ಮತ್ತು ಮುನಿತಾಯಿ ಎಂಬು ಮೂರು ಕಥಾಸರಣಿ ಹೊಂದಿತ್ತು. ಚಿತ್ರದಲ್ಲಿ ರಜನಿಕಾಂತ್ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು.

ಬಾಳು ಜೇನು

ಕುಣಿಗಲ್ ನಾಗಭೂಷಣ್ ಮತ್ತು ಬಾಲನ್ ನಿರ್ದೇಶನದಲ್ಲಿ ಮೂಡಿಬಂದ 'ಬಾಳು ಜೇನು' ಸಿನಿಮಾ 80ರ ದಶಕದಲ್ಲಿಯೇ ಕ್ರಾಂತಿಕಾರಿ ಸಾಮಾಜಿಕ ಕಥೆಯನ್ನು ಹೊಂದಿತ್ತು. ಚಿತ್ರದಲ್ಲಿ ಆರತಿ, ಗಂಗಾಧರ್, ರಜನಿಕಾಂತ್, ಪಂಡರಿಬಾಯಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅಚಾತುರ್ಯದಿಂದ ತನ್ನ ಪ್ರಿಯಕರನೊಡನೆ ಒಂದು ರಾತ್ರಿ ಕಳೆಯುವ ನಾಯಕಿ, ಆತ ಕಣ್ಮರೆಯಾದಾಗ ಬೇರೆಯವನನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಹಲವು ವರ್ಷಗಳ ನಂತರ ಮತ್ತೆ ಅವಳ ಬಾಳಲ್ಲಿ ಬರುವ ಹಳೇ ಪ್ರಿಯಕರ, ಅವಳ ಬಾಳಲ್ಲಿ ಹೇಗೆ ಬಿರುಗಾಳೆ ಎಬ್ಬಿಸುತ್ತಾನೆ ಎಂಬುದನ್ನ ಚಿತ್ರ ತೋರಿಸಿತ್ತು.

ಒಂದು ಪ್ರೇಮದ ಕಥೆ

ಜೋಸೈಮನ್ ನಿರ್ದೇಶನದ 'ಒಂದು ಪ್ರೇಮದ ಕಥೆ' ಚಿತ್ರದಲ್ಲಿ ರಜನಿಕಾಂತ್, ಅಶೋಕ್ ಹಾಗೂ ಶಾರದಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪನವರ ಛಾಯಾಗ್ರಹಣವಿತ್ತು. ರಜನಿಕಾಂತ್ ಅವರಿಗೆ ಜೋಡಿಯಾಗಿ ಶಾರದಾ ಅವರು ನಟಿಸಿದ್ದರು. ಇದು ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಸ್ಕೋಪ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಲನಚಿತ್ರವಾಗಿದೆ.

ಸಹೋದರರ ಸವಾಲ್

ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದ 'ಸಹೋದರರ ಸವಾಲ್' ಸಿನಿಮಾದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಾಯಕಿಯರಾಗಿ ಪದ್ಮಪ್ರಿಯಾ, ಕವಿತಾ, ಜಯಮಾಲಿನಿ ಕಾಣಿಸಿಕೊಂಡಿದ್ದರು. ಬಾಲ್ಯದಲ್ಲಿ ಬೇರೆಯಾದ ಇಬ್ಬರು ಸಹೋದರರು, ಬೇರೆ ವಾತಾವರಣದಲ್ಲಿ ಬೆಳೆದು ಪರಸ್ಪರ ವಿರುದ್ಧವಾಗಿ ಹೋರಾಡಲು ನಿಲ್ಲುತ್ತಾರೆ. ನಂತರ ತಾವು ಪರಸ್ಪರ ಸಹೋದರರೆಂದು ಅರಿತು ಬಾಲ್ಯದಲ್ಲಿ ತಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದವರ ವಿರುದ್ದ ಹೇಗೆ ಸಿಡಿದೇಳುತ್ತಾರೆ ಎಂಬುದು ಈ ಸಿನಿಮಾದ ಕಥೆ. ಈ ಚಿತ್ರಕ್ಕೆ ಚೆಲ್ಲಪಿಲ್ಲ ಸತ್ಯಂ ಸಂಗೀತ ನೀಡಿದ್ದರು.

ಕುಂಕುಮ ರಕ್ಷೆ

ಅಶೋಕ್ ಮತ್ತು ಮಂಜುಳಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಕುಂಕುಮ ರಕ್ಷೆ' ಸಿನಿಮಾದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ತಾನು ಪ್ರೀತಿಸಿದ ಹುಡುಗಿ ಬೇರೆವರನ್ನು ವಿವಾಹವಾಗಿದ್ದನನ್ನು ತಿಳಿದು ನೋವನ್ನು ಅನುಭವಿಸಿದ ವೈದ್ಯ, ಮುಂದೆ ತಾನು ಪ್ರೀತಿಸಿದ ಹುಡುಗಿಯ ಗಂಡನಿಗೆ ಪದೇ ಪದೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಬರುತ್ತದೆ.

ಗಲಾಟೆ ಸಂಸಾರ

ವಿಷ್ಣುವರ್ಧನ್, ರಜನಿಕಾಂತ್, ಮಂಜುಳಾ ಮತ್ತು ಶುಭಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಗಲಾಟೆ ಸಂಸಾರ' ಸಿನಿಮಾವನ್ನು ಸಿ.ವಿ.ರಾಜೇಂದ್ರನ್ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ರಜನಿಕಾಂತ್ ತನ್ನ ಹೆಂಡತಿಯೊಂದಿಗಿನ ವಿರಸದಿಂದ ಡೈವೋರ್ಸ್ ನೀಡಿ ಬೇರೊಂದು ಯುವತಿಯ ಹಿಂದೆ ಹೋಗುವ ಪಾತ್ರದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಶ್ರೀಮಂತ ತಂದೆಯ ಪುತ್ರನಾಗಿ, ನಂತರ ತಾನು ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟು ಹೋಗುವ ಯುವಕನಾಗಿ ನಟಿಸಿದ್ದರು.

ಕಿಲಾಡಿ ಕಿಟ್ಟು

ವಿಷ್ಣುವರ್ಧನ್, ರಜನಿಕಾಂತ್, ಕವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಕಿಲಾಡಿ ಕಿಟ್ಟು' ಸಿನಿಮಾವನ್ನು ಕೆ.ಎಸ್.ಆರ್.ದಾಸ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಈ ಚಿತ್ರದಲ್ಲಿ ರಾಬಿನ ಹುಡ್ ಮಾದರಿಯ ಕಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಕಳ್ಳನನ್ನು ಹಿಡಯುವ ಪಾತ್ರದಲ್ಲಿ ರಜನಿಕಾಂತ್ ಪೋಲಿಸ್ ಅವತಾರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಮೂರನೇ ಬಾರಿಗೆ ವಿಷ್ಣು-ರಜನಿ ಜೊತೆಯಾಗಿದ್ದರು.

ಮಾತು ತಪ್ಪದ ಮಗ

ಪಟೇಕಿ ಶಿವರಾಮ್ ನಿರ್ದೇಶನದ 'ಮಾತು ತಪ್ಪದ ಮಗ' ಸಿನಿಮಾದಲ್ಲಿ ಅನಂತ್‌ ನಾಗ್, ಆರತಿ ಹಾಗೂ ರಜಿನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು ನೆಗೆಟಿವ್ ಶೇಡ್ ಆಗಿತ್ತು. ಈ ಸಿನಿಮಾಗೆ ಇಳಯರಾಜ ಸಂಗೀತ ನೀಡಿದ್ದು, ಆರ್.ಎನ್.ಜಯಗೋಪಾಲ್ ಸಾಹಿತ್ಯವಿತ್ತು.

ತಪ್ಪಿದ ತಾಳ

ಕೆ.ಬಾಲಚಂದರ್ ನಿರ್ದೇಶನದ 'ತಪ್ಪಿದ ತಾಳ' ಸಿನಿಮಾದಲ್ಲಿ ರಜಿನಿಕಾಂತ್ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಓರ್ವ ರೌಡಿ ಹಾಗೂ ವೇಶ್ಯೆಯೊಬ್ಬಳು ಮನ ಪರಿವರ್ತನೆಯಾಗಿ ಸಮಾಜದಲ್ಲಿ ಮತ್ತೆ ಒಂದಾಗಿ ಬಾಳಲು ಮುಂದದಾಗ ಅವರನ್ನು ಸಮಾಜ ಕಾಣುವ ಪರಿಯನ್ನು ಚಿತ್ರ ಮನೋಘ್ನವಾಗಿ ತೋರಿಸಿತು. ಬದುಕಿನ ತಾಳ ಒಮ್ಮೆ ತಪ್ಪಿದರೆ, ಮತ್ತೆ ಸರಿಮಾಡಲು ಬಾರದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು. ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಪ್ರಿಯಾ

ರಜಿನಿಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಪ್ರಿಯಾ' ಸಿನಿಮಾವನ್ನು ಎಸ್.ಪಿ.ಮುತ್ತುರಾಮನ್ ನಿರ್ದೇಶನ ಮಾಡಿದ್ದರು. ಸಿನಿಮಾದಲ್ಲಿ ಖ್ಯಾತ ಚಿತ್ರನಟಿ ಪ್ರಿಯಾ (ಶ್ರೀದೇವಿ) ತನ್ನ ಗೆಳೆಯ ಭರತ್‌ನನ್ನು (ಅಂಬರೀಶ್) ಮದುವೆಯಾಗಲು ಅವಳ ಮ್ಯಾನೇಜರ್ ಅಡ್ಡಿಪಡಿಸುತ್ತಿರುತ್ತಾನೆ. ಆಗ ಪ್ರಿಯಾ, ತನಗೆ ಅಡ್ಡಿಯಾಗುತ್ತಿರುವ ಮ್ಯಾನೇಜರ್‌ನನ್ನು ಮಟ್ಟಹಾಕಲು ಲಾಯರ್ ಗಣೇಶ್ (ರಜಿನಿಕಾಂತ್) ಮೊರೆ ಹೋಗುತ್ತಾಳೆ. ಮುಂದೆ ಈ ಸಮಸ್ಯೆಯನ್ನು ಹೇಗೆ ಬಗೆ ಹರಿಯುತ್ತೆ ಎಂಬುದೇ ಈ ಚಿತ್ರದ ಕಥೆ. ಪ್ರಿಯಾ ಅದ್ಭುತ ಯಶಸ್ಸು ಕಂಡು 175 ದಿನ ಪ್ರದರ್ಶನ ಕಂಡಿತ್ತು.

ಘರ್ಜನೆ

ರಜಿನಿಕಾಂತ್ ಮತ್ತು ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ 'ಘರ್ಜನೆ' ಸಿನಿಮಾವನ್ನು ಸಿ.ವಿ.ರಾಜೇಂದ್ರನ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ,ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ರಜಿನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರುವಲ್ಲಿ ವೈದ್ಯ ಹೇಗೆ ಯಶಸ್ವಿಯಾಗುತ್ತಾನೆ ಎಂಬುದು ಸಿನಿಮಾದ ಕಥೆ.




Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+