ರಂಗನಾಥ್ ಇಲ್ಲದೆ ಪಿಚ್ ಅನಿಸುತ್ತಿದೆ ಸುವರ್ಣ!

ರಂಗನಾಥ್ ಕೊರತೆಯನ್ನು ಹಮೀದ್ ಪಾಳ್ಯ ಹಾಗೂ ಗೌರೀಶ್ ಅಕ್ಕಿ ಅಚ್ಚುಕಟ್ಟಾಗಿ ತುಂಬುತ್ತಿರುವುದು ಎದ್ದು ಕಾಣುತ್ತದೆ. ಆದರೂ ಎಲ್ಲೋ ಒಂದು ಕಡೆ ರಂಗನಾಥ್ ಗೈರುಹಾಜರಿ ಎದ್ದು ಕಾಣುತ್ತಿದೆ. ಅವರಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಉಳಿದ ವಾಹಿನಿಗಳ ಪರಿಸ್ಥಿತಿಯೂ ಸುವರ್ಣ ವಾಹಿನಿಗಿಂತಲೂ ಭಿನ್ನವಾಗಿಲ್ಲ. ಅಲ್ಲೂ ಸಂಪಾದಕರು ಹಾಗೂ ಪತ್ರಕರ್ತರ ನಡುವೆ ಸೂಕ್ತ ಸಮನ್ವಯದ ಕೊರತೆ ಕಾಡುತ್ತಿದೆ.
ಘಟಾನುಘಟಿ ರಾಜಕಾರಣಿಗಳೊಂದಿಗೆ ರಂಗನಾಥ್ ಆತ್ಮವಿಶ್ವಾಸದಿಂದ ಚರ್ಚೆ ನಡೆಸುತ್ತಿದ್ದರು. ರಾಜಕಾರಣಿಗಳಿಂದ ಅಗತ್ಯ ಉತ್ತರಗಳನ್ನು ತೆಗೆಸುವಲ್ಲಿ ಅವರ ವೃತಿಪರತೆ, ಜಾಣ್ಮೆ , ಚಾಕಚಕ್ಯತೆ ಎದ್ದು ಕಾಣುತ್ತಿತ್ತು. ಅದರಲ್ಲೂ ಸಾಂವಿಧಾನಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನಂತಹ ಪರಿಸ್ಥಿತಿಯಲ್ಲಿ ರಂಗನಾಥ್ ಇಲ್ಲದೆ ಇದ್ದದ್ದು ಸುವರ್ಣ ವಾಹಿನಿಗೆ ದೊಡ್ಡ ನಷ್ಟ ಎಂದೇ ಹೇಳಬೇಕು.
ಸುದ್ದಿಯ ವಿಶ್ಲೇಷಣೆ, ಖಚಿತ ಮಾಹಿತಿ ನಿರೀಕ್ಷಿಸುತ್ತಿರುವ ಕನ್ನಡ ವೀಕ್ಷಕರೂ ಸಿಎನ್ಎನ್ ಐಬಿಎನ್, ಎನ್ಡಿಟಿವಿ, ಟೈಮ್ಸ್ ನೌ ಗಳನ್ನು ನೋಡಿ ತಮ್ಮ ಸುದ್ದಿ ದಾಹವನ್ನು ನೀಗಿಸಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ರಂಗನಾಥ್ ತರಹದ ನುರಿತ ಕನ್ನಡ ಪತ್ರಕರ್ತರು ಯಾವುದಾದರೂ ಚಾನಲ್ಗೆ ಶೀಘ್ರ ಬರಲಿ ಎಂದು ಆಶಿಸುತ್ತೇನೆ. ಅಂದಹಾಗೆ ರಂಗನಾಥ್ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ವಿಷಯವಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.


Click it and Unblock the Notifications











