ಕಿರುತೆರೆಯಲ್ಲಿ ಕಿಚ್ಚ ಸುದೀಪ್ ರಿಯಾಲಿಟಿ ಶೋ
ಹೆಚ್ಚಿನ ನಾಯಕ ನಟರು ಕಿರುತೆರೆ ಎಂದರೆ ಮೂಗುಮುರಿಯುತ್ತಾರೆ. ಆದರೆ ನಮ್ಮ ಕಿಚ್ಚ ಸುದೀಪ್ ಯಾವುದೇ ಅಳುಕಿಲ್ಲದೆ ಕಿರುತೆರೆಗೆ ಅಡಿಯಿಡಲು ಮುಂದಾಗಿದ್ದಾರೆ. ರಮೇಶ್, ದೇವರಾಜ್, ರಕ್ಷಿತಾ, ವರ್ಷಾ ನಂತರ ಇದೀಗ ಸುದೀಪ್ ಕಿರುತೆರೆಯತ್ತ ದಾಪುಗಾಲು ಹಾಕಿದ್ದು ರಿಯಾಲಿಟಿ ಶೋ ಒಂದನ್ನು ನಡೆಸಿಕೊಡಲಿದ್ದಾರೆ.
ಸುವರ್ಣ ವಾಹಿನಿಗಾಗಿ ಸುದೀಪ್ ನಡೆಸಿಕೊಡುವ ರಿಯಾಲಿಟಿ ಶೋ ಹೆಸರು 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್'. ಹೆಸರು ವಿಚಿತ್ರವಾಗಿ ಹಾಗೂ ಆಕರ್ಷಕವಾಗಿದೆ ಅನ್ನಿಸುವುದಿಲ್ಲವೆ? ಪೇಟೆ ಹುಡುಗಿಯರನ್ನು ಹಳ್ಳಿಗೆ ಬಿಟ್ಟು ಅಲ್ಲಿನ ವಾತಾವರಣಕ್ಕೆ ಅವರೆಲ್ಲಾ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲಾಗುತ್ತದೆ.
ಹಳ್ಳಿಗರ ಎಲ್ಲಾ ಸ್ಪರ್ಧೆಯಲ್ಲಿ ಗೆದ್ದ ಪೇಟೆ ಹುಡುಗಿಯರಿಗೆ ವಿಶೇಷ ಬಹುಮನಾ ಕೊಡಲಾಗುತ್ತದೆ. ಸುದೀಪ್ ನಿರೂಪಿಸುವ ಈ ಕಾರ್ಯಕ್ರಮಕ್ಕೆ ತೀರ್ಪುಗಾರರು ಸಹ ಅವರೇ ಎಂಬುದು ಗಮನಾರ್ಹ ಅಂಶ. ಪ್ಯಾಟೆ ಹುಡ್ಗೀರ ಹಳ್ಳಿ ಲೈಫ್ ಕಾರ್ಯಕ್ರಮಕ್ಕೆ ಮಾರ್ಗದರ್ಶನವನ್ನೂ ನೀಡಲಿದ್ದಾರೆ ಸುದೀಪ್.
ಈಗಾಗಲೆ ಈ ರಿಯಾಲಿಟಿ ಶೋನ ಚಿತ್ರೀಕರಣ ಆರಂಭವಾಗಿದೆ. 'ವೀರ ಪರಂಪರೆ' ಚಿತ್ರೀಕರಣ ಮುಗಿದ ಕೂಡಲೆ ಸುದೀಪ್ ಕಿರುತೆರೆಗೆ ಮುಖ ಮಾಡಲಿದ್ದಾರೆ. ಸದ್ಯಕ್ಕೆ 'ಕನ್ವರ್ ಲಾಲ್' ಹಾಗೂ ತೆಲುಗಿನಲ್ಲಿ 'ರಕ್ತ ಚರಿತ್ರ' ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಒಟ್ಟಾರೆಯಾಗಿ ಕಿರುತೆರೆ ಮೂಲಕ ಸುದೀಪ್ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.


Click it and Unblock the Notifications











