ತೆಲುಗು ಧಾರಾವಾಹಿ ಸೆಟ್ನಲ್ಲಿ ಹಲ್ಲೆ: ದೂರು ನೀಡಲ್ಲ ಆದರೆ ಸುಮ್ಮನೆ ಇರಲ್ಲ ಎಂದ ಚಂದನ್
ಕನ್ನಡದ ಕಿರುತೆರೆ ಹಾಗೂ ಸಿನಿಮಾ ನಟ ಚಂದನ್ ಮೇಲೆ ನಿನ್ನೆ ತೆಲುಗು ಧಾರಾವಾಹಿ ಒಂದರ ಸೆಟ್ನಲ್ಲಿ ಹಲ್ಲೆ ನಡೆದಿದ್ದು, ಆ ಕುರಿತಂತೆ ಇಂದು ಬೆಂಗಳೂರಿನಲ್ಲಿ ನಟ ಚಂದನ್ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.
''ನನ್ನ ಮೇಲೆ ನಡೆದ ಹಲ್ಲೆ ಪೂರ್ವ ಯೋಜಿತ. ನನ್ನ ಮೇಲೆ ನಡೆದ ಹಲ್ಲೆ, ಕನ್ನಡದ ನಟರ ಮೇಲೆ ಅವರಲ್ಲಿರುವ ಅಸಹನೆಯ ಸೂಚಕ. ಸುಮಾರು ಮೂರು ಗಂಟೆಗಳ ಕಾಲ ನನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ. ಅದನ್ನು ವಿಡಿಯೋ ಮಾಡಿಕೊಂಡು ಕೆಲವು ದೃಶ್ಯಗಳನ್ನಷ್ಟೆ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ'' ಎಂದಿದ್ದಾರೆ ಚಂದನ್.
ಘಟನೆಯನ್ನು ವಿವರಿಸಿದ ಚಂದನ್, ನನ್ನ ಶೆಡ್ಯೂಲ್ ಇನ್ನೂ ಮುಂದಿತ್ತು, ಆದರೆ ಪ್ರಸಾರ ಮಾಡಲು ಎಪಿಸೋಡ್ಗಳಿಲ್ಲ ಎಂದು ಹೇಳಿ ನನ್ನನ್ನು ಕರೆಸಿಕೊಂಡರು. ನನ್ನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಹಾಗಿದ್ದರೂ ನಾನು ಹೋದೆ. ಆದರೆ ಚಿತ್ರೀಕರಣ ಮಾಡದೆ ನನ್ನನ್ನು ಕಾಯಿಸಿದರು. ಅಮ್ಮನ ಅನಾರೋಗ್ಯದ ಕಾರಣದಿಂದ ನಿದ್ದೆ ತಪ್ಪಿಸಿಕೊಂಡಿದ್ದ ನಾನು ಅಲ್ಲಿ ಕೆಲ ಸಮಯ ಮಲಗಿಕೊಂಡೆ'' ಎಂದು ಆರಂಭದಿಂದಲೂ ಏನಾಯಿತೆಂದು ಚಂದನ್ ವಿವರಿಸಿದರು.

ಘಟನೆ ವಿವರಿಸಿದ ನಟ ಚಂದನ್
''ಬಳಿಕ ರಂಜಿತ್ ಎಂಬ ಅಸಿಸ್ಟೆಂಟ್ ಡೈರೆಕ್ಟರ್ ಬಂದು ಕರೆದ, ನಾನು ಎದ್ದು ನನ್ನ ಅಸಿಸ್ಟೆಂಟ್ ಅನ್ನು ಕೇಳಿದೆ ಆತ ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ ಎಂದ. ಬಳಿಕ ಮತ್ತೆ ಮಲಗಿದೆ. ಆ ವೇಳೆಗೆ ಅದೇ ರಂಜಿತ್ ಕೆಟ್ಟದಾಗಿ ಏಕವಚನದಲ್ಲಿ ನನ್ನನ್ನು ಕರೆದಿದ್ದು ಕೇಳಿಸಿತು. ಅವನ್ನನು ಕರೆದು ಏಕೆ ಹಾಗೆ ಮಾತನಾಡುತ್ತೀಯ ಎಂದು ಕೇಳಿದೆ. ಆದರೆ ಅವನು ನನ್ನ ಮೇಲೆ ಏರಿ ಬಂದ. ಆಗ ನಾನು ನನ್ನ ಮುಂದೆ ಹೀಗೆ ಮಾತನಾಡಬೇಡ ಎಂದು ಹೇಳಿ ತಳ್ಳಿದೆ. ಆದರೆ ಅವನು ಹೊರಗೆ ಹೋಗಿ ಆ ಸಣ್ಣ ಘಟನೆಯನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸಿದ'' ಎಂದಿದ್ದಾರೆ ಚಂದನ್.

ಆ ಹುಡುಗ ನನ್ನೊಂದಿಗೆ ಚೆನ್ನಾಗಿಯೇ ಇದ್ದ: ಚಂದನ್
''ರಂಜಿತ್ ನನ್ನೊಂದಿಗೆ ಚೆನ್ನಾಗಿಯೇ ಇದ್ದ. ನನ್ನೊಟ್ಟಿಗೆ ಪಾರ್ಟಿ ಮಾಡಿದ್ದ ಅದೇ ಸಲುಗೆಯಲ್ಲಿಯೇ ನಾನು ಅವನೊಟ್ಟಿಗೆ ನಿನ್ನೆ ಮಾತನಾಡಿದೆ. ಆದರೆ ಆತ ಸಣ್ಣ ವಿಷಯವನ್ನು ದೊಡ್ಡದು ಮಾಡಿದ. ಕೂಡಲೇ ಹೊರಗಿನವರನ್ನೆಲ್ಲ ಕರೆಸಿಕೊಂಡ ಅವರು ನನ್ನ ಕಾರನ್ನು ಅಡ್ಡಗಟ್ಟಿದರು. ಸುಮಾರು 30-40 ಜನ ಸೇರಿದರು ಅವರ ನಡುವೆ ನಾನು ಒಬ್ಬನೇ. ಅವಾಚ್ಯವಾಗಿ ಮಾತನಾಡಿದರು. ಹಲ್ಲೆ ನಡೆಸಿದರು. ಬೆದರಿಕೆ ಹಾಕಿದರು. ನಾನು ಆತನ ಮೇಲೆ ಕೈ ಮಾಡಿದ್ದಕ್ಕೆ ನಾನು ಅಲ್ಲಿಯೇ ಅವನಿಗೆ ಕ್ಷಮೆ ಸಹ ಕೇಳಿದೆ. ಆದರೆ ಅವರು ನನ್ನ ಮೇಲೆ ಮಾಡಿದ ಹಲ್ಲೆಗೆ ಕ್ಷಮೆ ಕೇಳಲಿಲ್ಲ'' ಎಂದರು ಚಂದನ್.

ಪೂರ್ವ ನಿಯೋಜಿತ ದಾಳಿ ಎನಿಸುತ್ತದೆ: ಚಂದನ್
ಅದೊಂದು ಪೂರ್ವ ನಿಯೋಜಿತ ಘಟನೆ ಎನಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ ಚಂದನ್, ''ಸೆಟ್ಗೆ ಸಂಬಂಧವಿದವರೆಲ್ಲ ಅಲ್ಲಿದ್ದರು, ನನ್ನ ಬೆಂಬಲಕ್ಕೆ ನನ್ನ ಪರಿಚಿತರೂ ಬರಲಿಲ್ಲ. ನನ್ನ ಮೇಲೆ ಹಲ್ಲೆ ಮಾಡಲು ಆ ವ್ಯಕ್ತಿ ಯತ್ನಿಸಿದಾಗ ಆತನನ್ನು ಯಾರೂ ಅವನನ್ನು ತಡೆಯಲಿಲ್ಲ. ಅಲ್ಲದೆ ಇದಕ್ಕೆ ಮುನ್ನವೂ ಅವರ ಮಾತುಗಳಲ್ಲಿ ಅಸಹನೆ ಇದ್ದುದನ್ನು ನಾನು ಕೇಳಿಸಿಕೊಂಡಿದ್ದೇನೆ. ನಾನು ಮಾತ್ರವಲ್ಲ ಅದೇ ಧಾರಾವಾಹಿಯ ನಟಿ ಅಂಕಿತ ಎರಡು ಮೂರು ಬಾರಿ ಕಣ್ಣೀರು ಹಾಕಿದ್ದು ಸಹ ಉಂಟು. ಅವರ ಮಾತು ವರ್ತನೆಗಳಲ್ಲಿ ನಮ್ಮ ಮೇಲಿನ (ಹೊರಗಿನ ನಟರು) ಅಸಹನೆ ಎದ್ದು ಕಾಣುತ್ತಿರುತ್ತದೆ. ಆದರೆ ನಮಗೆ ಕೆಲಸ ಮುಖ್ಯವಾಗಿರುವ ಕಾರಣ ಅದನ್ನೆಲ್ಲ ನಿರ್ಲಕ್ಷಿಸಿ ಕೆಲಸ ಮಾಡಿಕೊಂಡು ಬರುತ್ತೇವೆಯಷ್ಟೆ'' ಎಂದರು ಚಂದನ್.

ಆ ಧಾರಾವಾಹಿಯಲ್ಲಿ ನಟಿಸುವುದಿಲ್ಲ: ಚಂದನ್
''ಆ ಧಾರಾವಾಹಿ ನಿರ್ಮಾಪಕರು ಕನ್ನಡಿಗರೇ, ಪ್ರಶಾಂತಿ ಎಂದು ಅವರ ಹೆಸರು ನನಗೆ ಪರಿಚಿತರೇ ಹಾಗಾಗಿ ನಾನು ಆ ಧಾರಾವಾಹಿಯಲ್ಲಿ ನಟಿಸಲು ಹೋದೆ. ಅವರು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ಇಟ್ಟುಕೊಂಡಿದ್ದಾರೆ. ನಾನು ಕೈ ಎತ್ತಿದ್ದಕ್ಕೆ ಆ ಹುಡುಗನಿಗೆ ಕ್ಷಮೆ ಕೇಳಿದ್ದೇನೆ, ಅವರು ಕೈ ಎತ್ತಿದ್ದಕ್ಕೆ ನನ್ನ ಬಳಿ ಕ್ಷಮೆ ಕೇಳಲಿ, ಅಲ್ಲಿಯ ವರೆಗೂ ನಾನು ಆ ಧಾರಾವಾಹಿಯಲ್ಲಿ ನಟಿಸುವುದಿಲ್ಲ. ನನಗೆ ಸುರಕ್ಷಿತವಾದ ವಾತಾವರಣ ಸೃಷ್ಟಿಸಿಕೊಟ್ಟರಷ್ಟೆ ನಾನು ಆ ಧಾರಾವಾಹಿಯಲ್ಲಿ ನಟಿಸುತ್ತೇನೆ ಅದೂ ನಿರ್ಮಾಪಕರಿಗಾಗಿ ಅಷ್ಟೆ. ಇಲ್ಲವಾದರೆ ಇಲ್ಲ'' ಎಂದಿದ್ದಾರೆ ಚಂದನ್.

ನಾನು ದೂರು ನೀಡುವುದಿಲ್ಲ: ಚಂದನ್
''ನನ್ನ ಮೇಲೆ ಹಲ್ಲೆ ಮಾಡಿದ ಬಳಿಕ ಅವರು ಚಾನೆಲ್ಗೆ ಮನವಿ ಕೊಟ್ಟಿದ್ದಾರಂತೆ ಕನ್ನಡದ ನಟರುಗಳು ಯಾರೂ ತೆಲುಗು ಭಾಷೆಯಲ್ಲಿ ನಟಿಸಬಾರದು, ಕನ್ನಡದ ನಟರು ನಟಿಸುತ್ತಿರುವ ಎಲ್ಲ ಧಾರಾವಾಹಿಗಳ ಪ್ರಸಾರ ರದ್ದು ಮಾಡಬೇಕು ಎಂದು ಹೇಳಿದ್ದಾರಂತೆ. ಇದರಿಂದ ಅವರ ಉದ್ದೇಶ ಸ್ಪಷ್ಟವಾಗುತ್ತಿದೆ. ಈ ವಿಷಯವನ್ನು ದೊಡ್ಡದು ಮಾಡಬಾರದು ಎಂದು ನಾನು ನಿಶ್ಚಯಿಸಿದ್ದೇನೆ. ಹಾಗಾಗಿ ನಾನು ಪೊಲೀಸ್ ಠಾಣೆಗೆ ದೂರು ನೀಡುತ್ತಿಲ್ಲ, ಮೊಕದ್ದಮೆಯನ್ನೂ ದಾಖಲಿಸುತ್ತಿಲ್ಲ. ಆದರೆ ನನಗೆ ಅಪಮಾನ ಮಾಡಿದ ಅವರ ಮುಂದೆ ಎತ್ತರಕ್ಕೆ ಬೆಳೆದು ತೋರಿಸುತ್ತೇನೆ'' ಎಂದಿದ್ದಾರೆ ಚಂದನ್.


Click it and Unblock the Notifications











