ಜೀ ಕನ್ನಡದಲ್ಲಿ ಕ್ಲಾಸಿಕ್ ಧಾರಾವಾಹಿ 'ಮಾಯಾಮೃಗ'
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ಪ್ರಯೋಗಾತ್ಮಕ ಧಾರಾವಾಹಿ 'ಮಾಯಾಮೃಗ'. ಇದೀಗ ಈ ಧಾರಾವಾಹಿ ಮರುಪ್ರಸಾರವಾಗುತ್ತಿದೆ. ಇಂದಿನಿಂದ (ಮಾರ್ಚ್ 10) ಸಂಜೆ 6 ಗಂಟೆಗೆ (ಸೋಮವಾರದಿಂದ ಶನಿವಾರದವರೆಗೆ) ಈ ಧಾರಾವಾಹಿಯನ್ನು ಜೀ ಕನ್ನಡದಲ್ಲಿ ವೀಕ್ಷಿಸಬಹುದು.
ಜೀ ಕನ್ನಡ ವಾಹಿನಿ ತನ್ನ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಈಗಾಗಲೇ ಅಪಾರ ಸಂಖ್ಯೆಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರ್ಯಕ್ರಮ ಹಾಗೂ ಧಾರಾವಾಹಿ ವಿಭಾಗಗಳಲ್ಲಿ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದು, ಅವುಗಳಲ್ಲಿ ಹಳೆಯ ಧಾರಾವಾಹಿಗಳ ಮರುಪ್ರಸಾರ ಕೂಡಾ ಒಂದು. [ಹೊಸ ತಂತ್ರಜ್ಞಾನದಲ್ಲಿ 'ಗುಡ್ಡದ ಭೂತ' ಧಾರಾವಾಹಿ]
ಇತ್ತೀಚೆಗಷ್ಟೇ ಜೀ ಕನ್ನಡದ ಮೂಲಕ 'ಗುಡ್ಡದ ಭೂತ' ಧಾರಾವಾಹಿ ಮರುಪ್ರಸಾರಗೊಂಡಿತ್ತು. ವಾಹಿನಿಯ ಈ ಪ್ರಯತ್ನಕ್ಕೆ ನೋಡುಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಇದೇ ರೀತಿ ಹಳೆಯ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡಿ ಎಂಬ ಕೋರಿಕೆ ಹಾಗೂ ಆಗ್ರಹ ಕೂಡಾ ವ್ಯಕ್ತವಾಗುತ್ತಿದೆ.

ಮೂವರು ಯಶಸ್ವಿ ನಿರ್ದೇಶಕರ ಸಂಗಮ
'ಮಾಯಾಮೃಗ' ಧಾರಾವಾಹಿ 1998 ರಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಯಶಸ್ವೀ ನಿರ್ದೇಶಕರುಗಳಾದ ಟಿ.ಎನ್.ಸೀತಾರಾಮ್, ಪಿ ಶೇಷಾದ್ರಿ ಮತ್ತು ನಾಗೇಂದ್ರ ಶಾ ಈ ಧಾರಾವಾಹಿಯನ್ನು ನಿರ್ದೇಶನ ಮಾಡಿದ್ರು.

ಪಾತ್ರವರ್ಗದಲ್ಲಿ ಹಲವಾರು ನುರಿತ ಕಲಾವಿದರು
ವೈಶಾಲಿ ಕಾಸರವಳ್ಳಿ, ಮುಖ್ಯಮಂತ್ರಿ ಚಂದ್ರು, ಮಾಳವಿಕಾ, ಅವಿನಾಶ್, ದತ್ತಣ್ಣ, ಸೇತುರಾಮ್, ಮಂಜು ಭಾಷಿಣಿ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ನಾಲ್ಕು ವಿಭಿನ್ನ ಮನಸ್ಥಿತಿಯ ಕುಟುಂಬಗಳ ಕಥೆ
ನಾಲ್ಕು ವಿಭಿನ್ನ ಮನಸ್ಥಿತಿಯ ಕುಟುಂಬಗಳ ನಡುವೆ ಸಾಗುತ್ತದೆ 'ಮಾಯಾಮೃಗ'ದ ಕಥಾಹಂದರ. ಸಂಪ್ರದಾಯಸ್ಥ ಕುಟುಂಬದ ಮನೆಗಳಲ್ಲಿ ಸಾಂಸ್ಕ್ರತಿಕ ಪಲ್ಲಟಗಳನ್ನ ಹೇಗೆ ಸ್ವೀಕರಿಸ್ತಾರೆ ಮತ್ತು ಹಾಗೆ ಸ್ವೀಕರಿಸುವ ಸಮಯದಲ್ಲಿ ಮಾನವ ಸಂಬಂಧಗಳ ನಡುವೆ ನಡೆಯುವ ಘರ್ಷಣೆಯೇ ಮಯಾಮೃಗ ಧಾರಾವಾಹಿಯ ಮೂಲ ಕಥಾವಸ್ತು.

ಕಿರುತೆರೆಯ ಅತ್ಯುತ್ತಮ ಧಾರಾವಾಹಿಗಳಲ್ಲಿ ಒಂದು
ನೋಡುಗರ ಭಾವನೆಗಳಿಗೆ ಸದಾಕಾಲ ಸ್ಪಂದಿಸುವ ಅಂಶಗಳು ಈ ಧಾರಾವಾಹಿಯ ಪ್ರತಿ ಸಂಚಿಕೆಯಲ್ಲೂ ಮೇಳೈಸಿದೆ. ಹೀಗಾಗಿಯೇ ಇದು ಕನ್ನಡ ಕಿರುತೆರೆಯ ಅತ್ಯುತ್ತಮ ಧಾರಾವಾಹಿಗಳ ಸಾಲಿನಲ್ಲಿ ಮೊದಲಿಗೆ ಬಂದು ನಿಲ್ಲುತ್ತದೆ ಎಂದು ಜೀ ಕನ್ನಡದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್, ಡಾ.ಗೌತಮ್ ಮಾಚಯ್ಯು ತಿಳಿಸಿದರು.

ಎಷ್ಟೇ ಸಲ ನೋಡಿದರೂ ಬೋರ್ ಆಗಲ್ಲ
ಹತ್ತು ಹದಿಮೂರು ವರ್ಷಗಳ ಹಿಂದಿನ ಈ ಧಾರಾವಾಹಿ ಮರುಪ್ರಸಾರವಾಗುತ್ತಿರುವ ಸಂದರ್ಭದಲ್ಲಿ ಮತ್ತೆ ಈ ಇದು ಗೆಲ್ಲುತ್ತಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ದತ್ತಣ್ಣ ಹೇಳುವುದು ಹಾಲಿವುಡ್ ನ ಸಿಟಿಜನ್ ಕೇನ್, ವಾರ್ ಅಂಡ್ ಪೀಸ್ ಸಿನಿಮಾಗಳನ್ನು ಇಂದಿಗೂ ನೋಡಿ ಆನಂದಿಸುತ್ತೇವೆ. ಅದೇ ರೀತಿ 'ಮಾಯಾಮೃಗ' ಸಹ ಕ್ಲಾಸಿಕ್ ಧಾರಾವಾಹಿ. ಎಷ್ಟೇ ಸಲ ಅದನ್ನು ನೋಡಿದರೂ ಬೋರಾಗುವುದಿಲ್ಲ ಎಂದಿದ್ದಾರೆ.

ಧಾರಾವಾಹಿಯಲ್ಲೂ ಸೀತಾರಾಮ್ ಲಾಯರ್
ಮೂಲತಃ ಒಬ್ಬ ಲಾಯರ್ ಆಗಿರುವ ಟಿ.ಎನ್.ಸೀತಾರಾಂ ಈ ಧಾರಾವಾಹಿಯಲ್ಲಿ ಲಾಯರ್ ಪಾತ್ರವನ್ನೇ ನಿರ್ವಹಿಸಿ ಕಾನೂನಿನ ವಿವಿಧ ಚೌಕಟ್ಟುಗಳನ್ನು ವೀಕ್ಷಕರಿಗೆ ತೋರಿಸಿಕೊಟ್ಟಿದ್ದರು. ಹಿರಿಯ ನಟ ದತ್ತಣ್ಣ, ಮಾಳವಿಕ, ಅವಿನಾಶ್, ಮಂಜುಭಾಷಿಣಿ, ಸೇತುರಾಂ, ಲಕ್ಷ್ಮೀ, ಚಂದ್ರಶೇಖರ್, ವೈಶಾಲಿ ಕಾಸರವಳ್ಳಿ, ವೀಣಾ ಸುಂದರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ಹಿರಿ-ಕಿರುತೆರೆಯ ಕಲಾವಿದರೆಲ್ಲ ಈ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ರಾಮಾಯಣ, ಮಹಾಭಾರತದಂತೆ ಮೋಡಿ ಮಾಡಿತ್ತು
ಎರಡು ದಶಕಗಳ ಹಿಂದೆ ದೆಹಲಿ ದೂರದರ್ಶನದಲ್ಲಿ ಪ್ರಸಾರಗೊಂಡ ರಾಮಾಯಣ, ಮಹಾಭಾರತ ಧಾರವಾಹಿಗಳು ಹೇಗೆ ಜನರನ್ನು ಮೋಡಿ ಮಾಡಿದ್ದವೋ, ಅದೇ ರೀತಿ ಕರ್ನಾಟದ ಜನರ ಮನೆ ಮಾತಾಗಿತ್ತು. ಈ ಮಾಯಾಮೃಗ 1998 ರಲ್ಲಿ ಚಂದನ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರಗೊಂಡ ಈ ಧಾರವಾಹಿ ಅದೇ ವಾಹಿನಿಯಲ್ಲಿ ಪುನರ್ ಪ್ರಸಾರಗೊಂಡು ಕೆಲ ವರ್ಷಗಳ ನಂತರ ಈ ಟಿ.ವಿ.ವಾಹಿನಿಯಲ್ಲಿ ಮರುಪ್ರಸಾರ ಕಂಡಿತ್ತು.

ಶೀರ್ಷಿಕೆ ಗೀತೆ ಬರೆದವರು ನರಸಿಂಹಸ್ವಾಮಿ
ಈ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಕೆ.ಎಸ್.ನರಸಿಂಹಸ್ವಾಮಿಯವರು ಸೀತಾರಾಂರವರ ಒತ್ತಾಯಕ್ಕೆ ಮಣಿದು ಬರೆದು ಕೊಟ್ಟಿದ್ದಾರಂತೆ. ಸಿ.ಅಶ್ವಥ್ ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಸಂಗೀತ ಸಂಯೋಜಿಸಿದ್ದರು.

ಇಲ್ಲಿಂದಲೇ ದೈನಿಕ ಧಾರಾವಾಹಿ ಸಂಸ್ಕೃತಿ ಆರಂಭ
ನಾಲ್ಕು ವಿಭಿನ್ನ ಮನಸ್ಥಿತಿಯ ಕುಟುಂಬಗಳ ನಡುವೆ ನಡೆಯುವ ಕಥೆ ಇದಾಗಿದ್ದು, ಆ ಕುಟುಂಬಗಳ ಸದಸ್ಯರುಗಳೆಲ್ಲಾ ತಮ್ಮ ಪಕ್ಕದ ಮನೆಯವರಂತೆ ವೀಕ್ಷಕರಿಗೆಲ್ಲಾ ಹತ್ತಿರವಾಗಿ ಬಿಟ್ಟಿದ್ದರು. ಮಾಯಾಮೃಗ ಬರುವವರೆಗೆ ಧಾರಾವಾಹಿಗಳು ವಾರದಲ್ಲಿ ಒಂದು ಕಂತು ಮಾತ್ರ ಪ್ರಸಾರಗೊಳ್ಳುತ್ತಿದ್ದವು. 'ದೈನಿಕ ಧಾರಾವಾಹಿ' ಸಂಸ್ಕೃತಿ ಕೂಡ ಈ ಧಾರಾವಾಹಿಯಿಂದಲೇ ಆರಂಭವಾಯಿತು.

ಮಾಳವಿಕಾ ಅವಿನಾಶ್ ಪ್ರಿತಿಸಿ ಮದುವೆಯಾಗಿದ್ದು...
ನಟಿ ಮಾಳವಿಕಾ ಹಾಗೂ ಅವಿನಾಶ್ ಪ್ರೀತಿಸಿ ಮದುವೆಯಾದದ್ದು, ನಟಿ ವೀಣಾ ಸುಂದರ್ ಗೆ ಮಗುವಾದಾಗ ಅದೇ ಮಗುವನ್ನು ಧಾರಾವಾಹಿಯಲ್ಲೂ ತೋರಿಸಿದ್ದು ಹೀಗೆ ಹಲವಾರು ವಿಶೇಷ ಘಟನೆಗಳು ಈ ಧಾರಾವಾಹಿಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನಡೆದವು. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಟಿ.ಎನ್.ಸೀತಾರಾಂ ಅವರು ಈ ಥರದ ಸಾಕಷ್ಟು ಸಂದರ್ಭಗಳನ್ನು ಹೇಳಿಕೊಂಡರು.


Click it and Unblock the Notifications











