ಶಿಲ್ಪಾ ಶೆಟ್ಟಿಗೆ ಮೆಸೇಜ್ ಮಾಡಿದ್ದೆ, ಪ್ರತಿಕ್ರಿಯೆ ಬಂದಿಲ್ಲ; ಸೂಪರ್ ಡಾನ್ಸರ್ ಜಡ್ಜ್ ಅನುರಾಗ್ ಬಸು
ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದಿಂದ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸಬೇಕಾಗಿದೆ. ಪತಿಯ ಬ್ಲೂ ಫಿಲ್ಮ್ ಪ್ರಕರಣ ಶಿಲ್ಪಾ ಶೆಟ್ಟಿಯ ಮೇಲೂ ಪರಿಣಾಮ ಬೀರಿದೆ. ಈ ಸಂಬಂಧ ಇತ್ತೀಚಿಗೆ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿಯನ್ನು ವಿಚಾರಣೆ ನಡೆಸಿದ್ದರು. ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಸಾರ್ವನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಜೊತೆಗೆ ನೆಟ್ಟಿಗರು ಶಿಲ್ಪಾ ಶೆಟ್ಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ರಾಜ್ ಕುಂದ್ರ ಬಂಧನಕ್ಕೂ ಮೊದಲು ಶಿಲ್ಪಾ ಶೆಟ್ಟಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಡಾನ್ಸ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರ ಪತಿಯ ಬಂಧನ ಆಗುತ್ತಿದ್ದಂತೆ ಶಿಲ್ಪಾ ಕಿರುತೆರೆ ಕಡೆಯು ಮುಖ ಮಾಡಿಲ್ಲ. ಶಿಲ್ಪಾ ಶೆಟ್ಟಿ ಡಾನ್ಸ್ ರಿಯಾಲಿಟಿ ಶೋನಿಂದ ದೂರ ಸರಿದ್ದಾರೆ. ಸೂಪರ್ ಡಾನ್ಸರ್ 4ನಲ್ಲಿ ಶಿಲ್ಪಾ ಜಡ್ಜ ಆಗಿ ಕಾಣಿಸಿಕೊಳ್ಳುವ ಜೊತೆಗೆ ಸಖತ್ ಮನರಂಜನೆ ನೀಡುತ್ತಿದ್ದರು. ಸ್ಪರ್ಧಿಗಳ ನೆಚ್ಚಿನ ಜಡ್ಜ್ ಗಳಲ್ಲಿ ಒಬ್ಬರಾಗಿದ್ದರು.
ಇದೀಗ ಶಿಲ್ಪಾ ಜಾಗಕ್ಕೆ ಬೇರೆ ಬೇರೆ ಸೆಲೆಬ್ರಿಟಿಗಳು ಎಂಟ್ರಿ ಕೊಡುತ್ತಿದ್ದಾರೆ. ಶಿಲ್ಪಾ ಜಾಗದಲ್ಲಿ ನೋರಾ ಫತೇಹಿ, ಕರೀಷ್ಮಾ ಕಪೂರ್ ಹೀಗೆ ಖ್ಯಾತ ನಟಿಯರು ಶಿಲ್ಪಾ ಬಿಟ್ಟ ಜಾಗವನ್ನು ತುಂಬುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಜೊತೆ ಗೀತಾ ಕಪೂರ್ ಮತ್ತು ಅನುರಾಗ್ ಬಸು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಬಗ್ಗೆ ಸಹ ಜಡ್ಜ್ ಅನುರಾಗ್ ಬಸು ಮಾತನಾಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅನುರಾಗ್ ಬಸು ಹೇಳಿದ್ದಾರೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿರುವ ಅನುರಾಗ್ ಬಸು, "ನಾವು ಶಿಲ್ಪಾ ಶೆಟ್ಟಿ ಅವರನ್ನು ಸೆಟ್ ನಲ್ಲಿ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ನಾವೆಲ್ಲರ ನಡುವೆ ಒಂದು ಬಾಂಧವ್ಯವಿದೆ. ನಾವೆಲ್ಲರೂ ಒಂದು ಕುಟುಂಬದ ಹಾಗೆ ಇದ್ದೆವು. ಒಬ್ಬ ವ್ಯಕ್ತಿ ಇಲ್ಲವಾದಾಗ ತುಂಬಾ ಬೇಸರವಾಗುತ್ತೆ. ಶಿಲ್ಪಾ ನಮಗೆ ಪ್ರಿಯ" ಎಂದು ಹೇಳಿದ್ದಾರೆ.
"ಶಿಲ್ಪಾ ಶೆಟ್ಟಿ ಮತ್ತೆ ವಾಪಸ್ ಆಗುವ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ. ನಾನು ಅವರಿಗೆ ಮೆಸೇಜ್ ಕಳುಹಿಸಿದ್ದೆ. ಯಾವಾಗ ಬರ್ತೀರಾ ಎಂದು ಕೇಳಿದ್ದೆ. ಆದರೆ ಅವರ ಕಡೆಯಿಂದ ನನಗೆ ಯಾವುದೇ ಉತ್ತರ ಬಂದಿಲ್ಲ. ಹಾಗಾಗಿ ಅವರು ಯಾವಾಗ ಬರ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಏನಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಶೀಘ್ರದಲ್ಲೇ ಅವರು ಬರಲಿ ಅಂತ ಆಶಿಸೋಣ" ಎಂದು ಹೇಳಿದ್ದಾರೆ.
ಪತಿ ರಾಜ್ ಕುಂದ್ರ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ಕಾಮಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯದ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ. 'ವಿ ಫಾರ್ ಇಂಡಿಯಾ' ಹೆಸರಿನ ಕೋವಿಡ್ 19 ನಿಧಿ ಸಂಗ್ರಹ ಅಭಿಯಾನಕ್ಕೆ ಜೊತೆಯಾಗಿರುವ ಶಿಲ್ಪಾ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆ ದಿನ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಸಕಾರಾತ್ಮಕ ಚಿಂತನೆ ಇತರ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.
''ನಾವಿಂದು ಬಹಳ ಕಷ್ಟದ ಸಮಯದಲ್ಲಿ ಬದುಕುತ್ತಿದ್ದೇವೆ. ನಾವು ಹೇಗೆ ಉಸಿರಾಡುತ್ತೇವೆ ಎಂಬುದುರ ಮೇಲೆ ನಮ್ಮ ಆರೋಗ್ಯ ನಿರ್ಭರವಾಗಿದೆ. ಒಳ್ಳೆಯ ಉಸಿರಾಟದಿಂದ ನಾವು ನಮ್ಮ ದೇಹವನ್ನು ರೋಗಾಣುಗಳಿಂದ ಕಾಪಾಡಿಕೊಳ್ಳಬಹುದು. ನಮ್ಮ ಶ್ವಾಸ ವ್ಯವಸ್ಥೆ ಸದಾ ಉತ್ತಮವಾಗಿರಬೇಕು. ಇದರಿಂದ ಆಮ್ಲಜನಕ ನಮ್ಮ ಮೆದುಳಿಗೆ ಸೇರುವುದು ಸಾಧ್ಯವಾಗುತ್ತದೆ. ಇದರಿಂದಾಗಿಯೇ ಪ್ರಾಣಯಾಮ ಎಂಬುದು ಬಹಳ ಪರಿಣಾಮಕಾರಿಯಾಗಿದೆ. ಉತ್ತಮ ಆರೋಗ್ಯ ಹಾಗೂ ಧನಾತ್ಮಕ ಚಿಂತನೆಗೆ ಇದು ಸಹಾಯ ಮಾಡುತ್ತದೆ'' ಎಂದು ಶಿಲ್ಪಾ ಶೆಟ್ಟಿ ವಿಡಿಯೋದಲ್ಲಿ ಹೇಳಿದ್ದಾರೆ.


Click it and Unblock the Notifications











