ಸುವರ್ಣ ನ್ಯೂಸ್ಗೆ ಹಮೀದ್ ಪಾಳ್ಯ ರಾಜೀನಾಮೆ

ದೇಶದ ನಾನಾ ಮೂಲೆಗಳಿಂದ ಸಿಕ್ಕಾಪಟ್ಟೆ ವರದಿಯಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಆಧರಿಸಿ ಮಂಗಳವಾರ ಸಂಜೆ ನಡೆಸಿಕೊಟ್ಟ "ದೊಡ್ಡವರೆಲ್ಲ ದಡ್ಡವರಲ್ಲ" ಅವರ ಕೊನೆಯ ಕಾರ್ಯಕ್ರಮ.
ಕಳೆದ ಮೂರು ವರ್ಷಗಳಿಂದ ಸುವರ್ಣದಲ್ಲಿ ಕೆಲಸ ಮಾಡುತ್ತಿದ್ದ ಹಮೀದ್ "ಬಿಗ್ ಫೈಟ್", "ಟಾರ್ಗೆಟ್" ಕಾರ್ಯಕ್ರಮಗಳ ಮೂಲಕ ವಾಹಿನಿಯ ವೀಕ್ಷಕರಿಗೆ ಚೆನ್ನಾಗಿ ಪರಿಚಿತರು. ಭೂಗತ ಜಗತ್ತಿನ ಹಳೆಯ ಕೆಂಪು ಹಾಳೆಗಳನ್ನು ತೆರೆಯ ಮೇಲೆ ತಿರುವಿಹಾಕುವ 55 ಕಂತುಗಳ "ಅಂಡರ್ ವರ್ಲ್ಡ್ ಫ್ಲ್ಯಾಷ್ ಬ್ಯಾಕ್" ಅವರ ಇನ್ನೊಂದು ಜನಪ್ರಿಯ ಕಾರ್ಯಕ್ರಮವಾಗಿತ್ತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮೆ ಪ್ರಶಸ್ತಿಗೆ ಭಾಜನರಾಗಿರುವ ಹಮೀದ್ ವಿದ್ಯುನ್ಮಾನ ಪತ್ರಿಕೋದ್ಯಮದಲ್ಲಿ ಅನುಭವಿ ಪತ್ರಕರ್ತ. ಈಟಿವಿ ವಾಹಿನಿಯ ಸುದ್ದಿ ವಿಭಾಗದಲ್ಲಿ ಆರು ವರ್ಷ, ನಂತರ ಟಿವಿ9ನಲ್ಲಿ ಐದು ವರ್ಷ ದುಡಿದ ಅವರು ತದನಂತರ ಮೂರು ವರ್ಷಗಳ ಕಾಲ ಸುವರ್ಣದಲ್ಲಿ ಕೆಲಸ ಮಾಡಿದರು. ಮುಂದೇನು?
"ನಾನಾ ಹುದ್ದೆಗಳಲ್ಲಿ ಹದಿನೈದು ವರ್ಷ ದುಡಿದಿದ್ದೇನೆ. ಇನ್ನೂ ಹೆಚ್ಚಿನ ಜವಾಬ್ದಾರಿ ಮತ್ತು ಸವಾಲು ಒಡ್ಡುವ ಹೊಸ ಕನ್ನಡ ಸುದ್ದಿ ಚಾನೆಲ್ ಗೆ ಸೇರಿಕೊಂಡಿದ್ದೇನೆ. The Raj Television Network ಆರಂಭಿಸುತ್ತಿರುವ 24x7 ರಾಜ್ ನ್ಯೂಸ್ ಕನ್ನಡ ವಾಹಿನಿಗೆ ಎಡಿಟರ್ ಇನ್ ಚೀಫ್ ಆಗಿ ನೇಮಕಗೊಂಡಿದ್ದೇನೆ" ಎಂದು ಹಮೀದ್ ಒನ್ಇಂಡಿಯ ಕನ್ನಡಕ್ಕೆ ತಿಳಿಸಿದರು.
ಹೊಸ ಚಾನಲ್ ತೆರೆಯ ಮೇಲೆ ಇಣುಕುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಆದರೆ, ಬರಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ತಮ್ಮ ವಾಹಿನಿ ಉದ್ಘಾಟನೆ ಆಗುವುದು ನಿಶ್ಚಿತ ಎಂದು ಹಮೀದ್ ಪಾಳ್ಯ ಹೇಳಿದರು. ಅವರು ತಮ್ಮ ಬಗ್ಗೆ ಹೇಳಿಕೊಂಡರಷ್ಟೇ ವಿನಾ ತಮ್ಮ ತಂಡದ ರೂಪರೇಷೆ, ವಿನ್ಯಾಸದ ಬಗ್ಗೆ ಹೆಚ್ಚಿನ ವಿವರಗಳನ್ನು ಈಗಲೇ ನೀಡಲು ನಿರಾಕರಿಸಿದರು.
ಅಂತೂ, ಕನ್ನಡ ಟಿವಿ ಸುದ್ದಿ ಮೈದಾನಕ್ಕೆ ಇನ್ನೊಂದು ವಾಹಿನಿ ಸೇರ್ಪಡೆಯಾಗುತ್ತಿರುವುದು ಖಾತ್ರಿ ಆಯಿತು. ಟಿವಿ9, ಸುವರ್ಣ ನ್ಯೂಸ್, ಕಸ್ತೂರಿ ನ್ಯೂಸ್, ಪಬ್ಲಿಕ್ ಟಿವಿ, ಸಮಯ ಹಾಗೂ ಜನಶ್ರೀ ಚಾನಲ್ ವಾಹಿನಿಗಳ ಸಾಲಿಗೆ ಮತ್ತೊಂದು ಸೇರಿಕೊಳ್ಳುವ ಕಾಲ ಕೂಡಿಬಂತು.


Click it and Unblock the Notifications











