BBK 9 : ಕನ್ನಡಪರ ಹೋರಾಟಗರರ ಬಗ್ಗೆ ಮಾತು: ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರತಿಭಟನೆ!
ಬಿಗ್ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ಕನ್ನಡಪರ ಸಂಘಟನೆ ಹೋರಾಟಗಾರ ರೂಪೇಶ್ ರಾಜಣ್ಣ ನಡುವೆ ಆಗಾಗ್ಗೆ ಜಗಳ ನಡೆಯುವುದು ಸಾಮಾನ್ಯ. ಜಗಳವಾದಾಗ ವೈಕ್ತಿಕ ವಿಷಯಗಳನ್ನು ಎಳೆತರುವುದರಲ್ಲಿ ನಿಸ್ಸೀಮರಾಗಿರುವ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ ಅವರ ಕನ್ನಡಪರ ಹೋರಾಟದ ಬಗ್ಗೆ ಅನುಮಾನ ವ್ಯಕ್ತವಾಗುವ ರೀತಿಯಲ್ಲಿ ಮಾತನಾಡಿದ್ದರು. ಕೆಲವು ಸಂದರ್ಭದಲ್ಲಿ ಗೇಲಿ ಸಹ ಮಾಡಿದ್ದರು.
ಇತ್ತೀಚಿನ ಎಪಿಸೋಡ್ ಒಂದರಲ್ಲಿ ಮತ್ತೆ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಮತ್ತೆ ಜಗಳವಾಗಿತ್ತು. ಆಗ ರೂಪೇಶ್ ರಾಜಣ್ಣ ಬಗ್ಗೆ ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಜೊತೆ ಮಾತನಾಡುತ್ತಾ, ''ನಾನು ಬಹಳ ಕನ್ನಡ ಹೋರಾಟ ಮಾಡಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ. ಪತ್ರಗಳಿವೆ, ಇಮೇಲ್ಗಳಿವೆ. ಎಲ್ಲ ದಾಖಲೆಗಳು ಇವೆ'' ಎನ್ನುತ್ತಾರೆ.
ಮುಂದುವರೆದು, ''ರೂಪೇಶ್, ದೊಡ್ಡ ದೊಡ್ಡ ಮಾತುಗಳನ್ನಾಡಿ, ತನ್ನನ್ನು ತಾನು ಬುದ್ಧಿವಂತ ಎಂದುಕೊಂಡಿದ್ದಾನೆ. ಅಂಥಹವರನ್ನೆಲ್ಲ ನಾನು ನೋಡಿದ್ದೇನೆ, ಈಗೇನು ಮಾಡಲ್ಲ, ಹೊರಗೆ ಹೋದ ಮೇಲೆ ನೋಡ್ಕೋತೀನಿ. ನಾನು ನನ್ನ ಜೀವನದಲ್ಲಿ ಎಲ್ಲ ಕನ್ನಡ ಹೋರಾಟಗಾರರಿಗೂ ಬಿಸಿ ಮುಟ್ಟಿಸಿದ್ದೀನಿ. ಒಬ್ಬರನ್ನೂ ಬಿಟ್ಟಿಲ್ಲ, ಸರಿಯಾಗಿ ಬಿಸಿ ಮುಟ್ಟಿಸಿದ್ದೀನಿ'' ಎನ್ನುತ್ತಾರೆ.

ಅದೇ ಸಮಯಕ್ಕೆ ಅಲ್ಲಿಗೆ ಬರುವ ರೂಪೇಶ್ ರಾಜಣ್ಣ, ಪ್ರಶಾಂತ್ ಮುಂದೆ ತೊಡೆ ತಟ್ಟಿ, ತಾಕತ್ ಇದ್ದರೆ ನನ್ನ ಮುಂದೆ ನಿಲ್ಲಬೇಕು. ಅದು ನಿಜವಾದ ತಾಕತ್ ಎಂದ್ರೆ'' ಎಂದು ಸವಾಲು ಹಾಕುತ್ತಾರೆ.
ಪ್ರಶಾಂತ್ ಸಂಬರ್ಗಿಯು, 'ಎಲ್ಲ ಕನ್ನಡ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದ್ದೇನೆ' ಎಂದು ನೀಡಿರುವ ಹೇಳಿಕೆ ಖಂಡಿಸಿ ಕೆಲವು ಕನ್ನಡಪರ ಸಂಘಟನೆಗಳ ಸದಸ್ಯರು ಒಟ್ಟು ಸೇರಿ ಪ್ರತಿಭಟನೆ ನಡೆಸಿದ್ದಾರೆ. 'ಬಿಗ್ಬಾಸ್' ಮನೆಯ ಸೆಟ್ ಹಾಕಿರುವ ಬಿಡದಿ ಬಳಿಯ ಇನ್ನೋವೇಟಿವ್ ಫಿಲಂ ಸಿಟಿ ಮುಂದೆ ಪ್ರತಿಭಟನೆ ನಡೆಸಿರುವ ಕನ್ನಡಪರ ಸಂಘಟನೆ ಕಾರ್ಯಕರ್ತರು, ಪ್ರಶಾಂತ್ ಸಂಬರ್ಗಿ ಹಾಗೂ ಕಲರ್ಸ್ ವಾಹಿನಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಕನ್ನಡ ಪರ ಸಂಘಟನೆಗಳು ಹಿಂದಿ ಏರಿಕೆ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾಗ ಪ್ರಶಾಂತ್ ಸಂಬರ್ಗಿ, ಕನ್ನಡ ಪರ ಸಂಘಟನೆ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ವ್ಯಂಗ್ಯವಾಗಿ ಮಾತನಾಡಿದ್ದರು. ಆಗಲೂ ಸಹ ಕನ್ನಡಪರ ಸಂಘಟನೆಗಳು ಪ್ರಶಾಂತ್ ಸಂಬರ್ಗಿ ವಿರುದ್ಧ ಹರಿಹಾಯ್ದಿದ್ದವು. ಈಗ ಬಿಗ್ಬಾಸ್ ಮನೆಯಲ್ಲಿ ಕೂತು ಕನ್ನಡ ಪರ ಸಂಘಟನೆಗಳ ಬಗ್ಗೆ ಮಾತನಾಡಿರುವುದು ಸಂಘಟನೆಯ ಸದಸ್ಯರಿಗೆ ಇನ್ನಷ್ಟು ಸಿಟ್ಟು ಭರಿಸಿದೆ.


Click it and Unblock the Notifications











