ಅಶ್ವಿನಿ ನಕ್ಷತ್ರ ಕಥೆ ಹೇಳುತ್ತಾರಂತೆ ರಮ್ಯಾ
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಈಗಿನ ದೊಡ್ಡ ಸುದ್ದಿ, ಪವರ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್ ನಂತರ ಕಿರುತೆರೆಯಲ್ಲಿ ಇನ್ನೊಂದಿಷ್ಟು 'ಕಲರ್ ' ತುಂಬಲು ದಿವ್ಯ ಸ್ಪಂದನ ಎಂಟ್ರಿ ಕೊಡುತ್ತಿದ್ದಾರೆ.
ಜೆಕೆ ಎಂಬ ದುರಹಂಕಾರದ ಸೂಪರ್ ಸ್ಟಾರ್ ಹಾಗೂ ಅಶ್ವಿನಿ ಎಂಬ ಸ್ವಾಭಿಮಾನದ ಹುಡುಗಿಯ ನಡುವೆ ನಡೆಯುವ ಸಮರ, ಪ್ರೇಮ ಕಥೆ ತಪ್ಪದೇ ನೋಡಿ ಎಂದು ಈ ಟಿವಿ ಕನ್ನಡದಲ್ಲಿ ಈಗಾಗಲೇ ತಿಂಗಳಿನಿಂದ ಜಾಹೀರಾತು ಪ್ರಸಾರವಾಗುತ್ತಲೇ ಇದೆ.
ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳನ್ನು ಪರಿಚಯಿಸುವ ಪ್ರೇಕ್ಷಕರಿಗೆ ಕಥೆಯನ್ನು ಹೇಳುವ ಸೂತ್ರಧಾರಿಯಾಗಿ ರಮ್ಯಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಫಿಕ್ಷನ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಹೇಳಿದ್ದಾರೆ.
ರಮ್ಯಾ ಅವರ ನಿರೂಪಣಾ ಶೈಲಿ ವಿಭಿನ್ನವಾಗಿರಲಿದೆ. ನಾಯಕ ಜೆಕೆ ಹಾಗೂ ನಾಯಕಿ ಅಶ್ವಿನಿ ಮೊದಲ ಭೇಟಿ ಬಗ್ಗೆ ರಮ್ಯಾ ತಿಳಿಸಲಿದ್ದಾರೆ. ದಿನದ ಎಪಿಸೋಡುಗಳ ಕೊನೆಗೆ ಮುಂದಿನ ಎಪಿಸೋಡಿನ ಬಗ್ಗೆ ತಿಳಿಸುವುದು ಮುಂತಾದ ಕೆಲಸ ರಮ್ಯಾ ಅವರ ಮೇಲಿದೆ. ಸಿನಿಮಾ ಜಗತ್ತಿನ ಜೊತೆ ಈ ಸೀರಿಯಲ್ ಕಥೆ ಸೇರಿರುವುದರಿಂದ ರಮ್ಯಾ ಅವರಿಗೆ ಕಥೆ ಇಷ್ಟವಾಗಿದೆಯಂತೆ ರಮ್ಯಾ ಏನು ಕಮಾಲ್ ಮಾಡುತ್ತಾರೆ ಕಾದು ನೋಡಬೇಕಿದೆ..

ಅಶ್ವಿನಿ ನಕ್ಷತ್ರ ಮುನ್ನೋಟ
ಅರೂರು ಜಗದೀಶ್ ನಿರ್ದೇಶಿಸುತ್ತಿರುವ ಈ ಧಾರಾವಾಹಿ ಜೂ.17ರಿಂದ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.

ಅಶ್ವಿನಿ ನಕ್ಷತ್ರ ಧಾರಾವಾಹಿ
ಕೆಲವು ಸಿನಿಮಾಗಳಲ್ಲಿ, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕ ಬುಲ್ಡೋಡಜರ್ಸ್ ಆಟಗಾರ ಕಾರ್ತಿಕ್ ಅವರು ಈ ಧಾರಾವಾಹಿಯಲ್ಲಿ ಜೆಕೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ ಮೂಲದ ಮಯೂರಿ ಅವರು ಅಶ್ವಿನಿಯಾಗಿದ್ದಾರೆ.

ಇದೇನು ಹೊಸ ಕಥೆಯೇ?
ಹಿಂದಿ ಅವೃತ್ತಿಯ ಬಿಗ್ ಬಾಸ್ ನ ಯಥಾವತ್ತು ನಕಲು ಮಾಡಿದ ಮೇಲೆ ಈ ಟಿವಿ ಕನ್ನಡ ಈಗ ಕಲರ್ಸ್ ವಾಹಿನಿಯ ಜನಪ್ರಿಯ ಧಾರಾವಾಹಿ 'ಮಧುಬಾಲಾ' ಅವನ್ನು ಕನ್ನಡಕ್ಕೆ ಅಶ್ವಿನಿ ನಕ್ಷತ್ರ ರೂಪದಲ್ಲಿ ತರುತ್ತಿದೆ. ಪತಕರ್ತ ಶ್ರೀನಿಧಿ ಡಿಎಸ್ ಅವರು ಈ ಧಾರಾವಾಹಿಗೆ ಸಂಭಾಷಣೆ ಬರೆದಿದ್ದಾರೆ.

ಕಿರುತೆರೆಯಲ್ಲಿ ಸ್ಟಾರ್ ವಾರ್
ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್, ಕನ್ನಡದ ಕೋಟ್ಯಾಧಿಪತಿಯಲ್ಲಿ ಪುನೀತ್ ರಾಜ್ ಕುಮಾರ್ ದರ್ಶನದ ಜೊತೆಗೆ ಈಗ ರಮ್ಯಾ ಸಿರೀಯಲ್ ಪ್ರಚಾರಕ್ಕಾಗಿ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ.
ರಮ್ಯಾ ನಿರೂಪಣೆ ಹೇಗಿರಬಹುದು ಎಂಬುದು ಅಭಿಮಾನಿಗಳಿಗೆ ಆಕರ್ಷಣೆಯೇ ಹೊರತು, ಕಥೆ ಹೇಳುವ ಶೈಲಿ ಅಥವಾ ಸೂತ್ರಧಾರಿ ಪಾತ್ರವಾಗಲಿ ರಮ್ಯಾ ಅವರಿಗೆ ಅಥವಾ ಅವರು ಮಾತನಾಡುವ ಕನ್ನಡಕ್ಕೆ ತುಂಬಾ ಹೊಸತು.
ರಮ್ಯಾ ನಡೆ ನಿಗೂಢ
ಕಿಚ್ಚ ಸುದೀಪ್ ಹಾಗೂ ರಮ್ಯಾ ನಡುವಿನ ಕೋಳಿ ಜಗಳ ಎಲ್ಲರಿಗೂ ಗೊತ್ತ್ತಿರುವ ವಿಷಯ. ಅದರೆ, ಇತ್ತೀಚೆಗೆ ಸುದೀಪ್ ಅವರು ತಮ್ಮ ನಿರ್ದೇಶನದ ಚಿತ್ರಕ್ಕೆ ರಮ್ಯಾ ಅವರನ್ನು ಆಯ್ಕೆ ಮಾಡಿ ಕರೆ ಮಾಡಿ ಕೇಳಿದಾಗ ರಮ್ಯಾ ಇಲ್ಲ ಎನ್ನಲಿಲ್ಲವಂತೆ.
ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ನಮ್ಮ ಜೋಡಿ ಹೊಂದಾಣಿಕೆ ಚೆನ್ನಾಗಿತ್ತು. ಒಟ್ಟಿಗೆ ಕೆಲಸ ಮಾಡಿ ಮೂರು ವರ್ಷ ಆಯಿತು. ನಮ್ಮ ನಡುವಿನ ಮನಸ್ತಾಪಗಳನ್ನು ಬದಿಗೊತ್ತಿ ಅಭಿಮಾನಿಗಳಿಗಾಗಿ, ಕಲೆಗಾಗಿ ನಾವು ಉತ್ತಮ ಚಿತ್ರ ನೀಡಲು ಸಿದ್ಧರಾಗುತ್ತಿದ್ದೇವೆ. ಎಂದಿರುವ ರಮ್ಯಾ ಅವರು ಸುದೀಪ್ ಜೊತೆ ಪೈಪೋಟಿಗೆ ಬಿದ್ದು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರಾ? ಗೊತ್ತಿಲ್ಲ.


Click it and Unblock the Notifications











