ಬಿಗ್ ಬಾಸ್ಗೆ ಹೋಗುತ್ತಾರಾ ರಕ್ಷ್?: ಕಿರುತೆರೆ ಬಗ್ಗೆ 'ಪುಟ್ಟಗೌರಿ ಮದುವೆ' ಮಹೇಶ ಹೇಳಿದ್ದೇನು?
'ಪುಟ್ಟಗೌರಿ ಮದುವೆ', 'ಗಟ್ಟಿಮೇಳ' ಧಾರಾವಾಹಿಗಳ ಮೂಲಕ ಜನರಿಗೆ ಹತ್ತಿರವಾಗಿರುವ ನಟ ರಕ್ಷ್ ತಮ್ಮ ಸಿನಿಮಾ ಕನಸುಗಳ ಬಗ್ಗೆ 'ಫಿಲ್ಮಿಬೀಟ್'ನ ಫೇಸ್ ಬುಕ್ ಲೈವ್ ವೇಳೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿರುವ ಅವರು, ಇದೇ ಮೊದಲ ಬಾರಿ ಫೇಸ್ಬುಕ್ನಲ್ಲಿ ಲೈವ್ ಬಂದಿದ್ದರು.
Recommended Video
ಲಾಕ್ಡೌನ್ ಸಮಯದಲ್ಲಿ ಧಾರಾವಾಹಿಗಳಿಲ್ಲದೆ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಧಾರಾವಾಹಿ, ಸಿನಿಮಾ, ಬಿಗ್ ಬಾಸ್ ಮುಂತಾದವುಗಳ ಕುರಿತ ಅಭಿಮಾನಿಗಳ ಕುತೂಹಲಗಳನ್ನು ತಣಿಸಿದರು.
ಸುದೀರ್ಘ ಕಾಲ ಮಾತುಕತೆ ನಡೆಸಿದ ಅವರು, ಚಿತ್ರರಂಗದಲ್ಲಿ ಹೀರೋ ಆಗಿ ಜನರಿಗೆ ಹತ್ತಿರವಾಗಬೇಕು ಎಂಬ ತಮ್ಮ ಮೂಲ ಕನಸನ್ನು ಹಂಚಿಕೊಂಡರು. ಅಭಿಮಾನಿಗಳ ಪ್ರಶ್ನೆಗಳಿಗೆ ರಕ್ಷ್ ಯಾವ ಯಾವ ಉತ್ತರ ನೀಡಿದರು? ಅವರ ಮಾತುಕತೆಯ ಆಯ್ದ ಭಾಗ ಇಲ್ಲಿದೆ. ಮುಂದೆ ಓದಿ...

ಲಾಕ್ಡೌನ್ ಬಳಿಕ ಮುಂದೇನು?
ಲಾಕ್ಡೌನ್ಗೂ ಮುನ್ನ ಬಿಡುಗಡೆಯಾಗಿದ್ದ ಸಿನಿಮಾಗಳಿಗೆ ಆದ್ಯತೆ ನೀಡಬೇಕು. ಅವುಗಳನ್ನು ಮೊದಲು ಬಿಡುಗಡೆ ಮಾಡಬೇಕು. ಉಳಿದ ಸಿನಿಮಾಗಳ ಬಿಡುಗಡೆ ತಡವಾಗಿ ಮಾಡಬೇಕು ಎಂದು ಚೇಂಬರ್ನಲ್ಲಿ ತೀರ್ಮಾನ ಮಾಡಲಾಗಿದೆ. ಹೀಗಾಗಿ ಮೊದಲ ಆದ್ಯತೆ ರನ್ನಿಂಗ್ನಲ್ಲಿ ಇರುವ ಸಿನಿಮಾಗಳಿಗೇ ನೀಡುತ್ತಾರೆ. ಜನ ಹೆದರಿಕೊಂಡಿದ್ದಾರೆ. ಲಾಕ್ಡೌನ್ ತೆಗೆದ ಕೂಡಲೇ ಚಿತ್ರಮಂದಿರಕ್ಕೆ ಬರುವುದಿಲ್ಲ. ರಿಸ್ಕ್ ಅದು. ಒಳ್ಳೆಯ ಸಿನಿಮಾ ಮಾಡಿದ್ದೀವಿ. ಜನರು ಎಲ್ಲ ಸುರಕ್ಷತಾ ಕ್ರಮದೊಂದಿಗೆ ಲಾಕ್ಡೌನ್ ಮುಗಿದ ಬಳಿಕ ಸಿನಿಮಾ ನೋಡಲು ಬರಬೇಕು ಎಂದು ಮನವಿ ಮಾಡಿದರು.

ನಾಲ್ಕು ಗೋಡೆ ಮಧ್ಯೆ ಇರಲಾರೆ
ಬಿಗ್ ಬಾಸ್ಗೆ ಹೋಗ್ತೀರಾ? ಎಂಬ ಪ್ರಶ್ನೆ ಅವರಿಗೆ ಎದುರಾಯಿತು. 'ನಾನು ಹೋಗಲು ಇಷ್ಟಪಡೊಲ್ಲ. ಏಕೆಂದರೆ ನಾಲ್ಕು ಐದು ಗೋಡೆ ಒಳಗೆ ನಮ್ಮನ್ನು ನಾವು ತುಂಬಾ ಒಳ್ಳೆಯವರು, ಹೇಳಿದ ಮಾತು ಕೇಳ್ತೇವೆ ಎಂದು ಅಲ್ಲಿಗೆ ಹೋಗಿ ತೋರಿಸುವ ಮೆಂಟಾಲಿಟಿ ನನಗಿಲ್ಲ. ಬಿಗ್ ಬಾಸ್ ಹೋಗಿಬಂದ ಸ್ಪರ್ಧಿಗಳಲ್ಲಿ ನನಗೆ ಅನೇಕರು ಕ್ಲೋಸ್ ಫ್ರೆಂಡ್ಸ್. ಸಾಕಷ್ಟು ಜನಕ್ಕೆ ಒಳ್ಳೆಯದೂ ಆಗಿದೆ. ತುಂಬಾ ಜನ ಒಳ್ಳೆ ಒಳ್ಳೆ ಸ್ಥಾನಗಳಲ್ಲಿದ್ದಾರೆ. ನನಗೆ ಶೋ ಬಗ್ಗೆ ಅಪಾರ ಗೌರವ ಇದೆ. ಆದರೆ ನನಗೆ ನಾಲ್ಕು ಐದು ಗೋಡೆ ಮಧ್ಯೆ ನಿಲ್ಲಿಸಿ ಇಲ್ಲೇ ಇರು ಎಂದರೆ ನನಗೆ ಇರಲು ಆಗೊಲ್ಲ. ಏಕೆಂದರೆ ನಾನು ಚಿಕ್ಕವಯಸ್ಸಿನಿಂದಲೂ ಊರು, ಕಾಡುಗಳಲ್ಲಿ ಓಡಾಡಿಕೊಂಡಿದ್ದವನು. ಕಾಡಿಗೆ ಹೋಗಬೇಕು. ಕ್ವಾರೆಂಟೀನ್ ಇರುವುದರಿಂದ ಮೊದಲ ಬಾರಿ ಹೀಗೆ ಸೈಲೆಂಟ್ ಆಗಿ ಮನೆಯೊಳಗೆ ಇರುವುದು. ಆದರೆ ಲಾಕ್ಡೌನ್ ರೀತಿ ಕೂರುವುದು ನನಗಾಗೊಲ್ಲ.

ದೊಡ್ಡ ಡೈರೆಕ್ಟರ್ ಜತೆ ಸಿನಿಮಾ
ದೊಡ್ಡ ಡೈರೆಕ್ಟರ್ ಒಬ್ಬರ ಜತೆ ಸಿನಿಮಾ ಲೈನ್ ಅಪ್ ಆಗಿದೆ. ಆದರೆ ಅದರ ಕುರಿತು ಅಫಿಷಿಯಲ್ ಆಗಿ ನಾನು ಈಗ ಹೇಳಲು ಆಗುವುದಿಲ್ಲ. ಲಾಕ್ಡೌನ್ ಮುಗಿದ ಬಳಿಕ ನನಗೆ ಇನ್ನೊಂದು ಜವಾಬ್ದಾರಿ ಇದೆ. 'ನರಗುಂದ ಬಂಡಾಯ'ದ ಪ್ರಮೋಷನ್ ಇದೆ, ಅದನ್ನು ಮತ್ತೆ ಬಿಡುಗಡೆ ಮಾಡಬೇಕು. ಅದರ ಕೆಲಸಗಳು ಮುಗಿದ ಬಳಿಕ ಅದರ ನಂತರ ಮಾಡುತ್ತೇನೆ. ಕೊರೊನಾ ಬಂದು ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಮತ್ತೆ ಕೋಆರ್ಡಿನೇಟ್ ಮಾಡಿ ಮುಗಿದ ಬಳಿಕ ಅನೌನ್ಸ್ ಮಾಡುತ್ತೇನೆ ಎಂದರು.

ಟೆಲಿವಿಷನ್ ಬಿಡುತ್ತೀರಾ?
ಸಿನಿಮಾಕ್ಕಾಗಿ ಟಿವಿ ಬಿಟ್ಟು ಬಿಡುತ್ತೀರಾ ಎಂದು ಅಭಿಮಾನಿಯೊಬ್ಬರು ಕೇಳಿದರು. ಗುರುತಿಸಿದ್ದು, ಅನ್ನ ಕೊಟ್ಟಿದ್ದು ಟೆಲಿವಿಷನ್. ಇದಕ್ಕೆ ಬಹಳ ಚಿರರುಣಿ ಆಗಿರುತ್ತೇನೆ, ಖಂಡಿತವಾಗಿಯೂ ಟೆಲಿವಿಷನ್ ಬಿಡುವುದಿಲ್ಲ. ಟಿವಿ ಇದ್ದೇ ಇರುತ್ತದೆ. ಬಹುಶಃ ಮುಂದೆ ಧಾರಾವಾಹಿ ಮಾಡುವಾಗ ಕಥೆಗಳ ವಿಚಾರದಲ್ಲಿ ಚೂಸಿ ಆಗುತ್ತೇನೆ. ಟೆಲಿವಿಷನ್ ಬಗ್ಗೆ ಅಪಾರ ಗೌರವವಿದೆ ಎಂದು ರಕ್ಷ್ ಹೇಳಿದರು.

ಯಾವಾಗಲೂ ಕನ್ನಡಕ ಧರಿಸುವುದೇಕೆ?
ರಕ್ಷ್ ಯಾವಾಗಲೂ ಕನ್ನಡ ಧರಿಸಿರುತ್ತಾರೆ. ಅದು ಯಾಕೆ ಎನ್ನುವುದು ಅಭಿಮಾನಿಗಳ ಕುತೂಹಲ. ಅದಕ್ಕೆ ಕಾರಣ ಚಿತ್ರೀಕರಣದ ವೇಳೆ ಉಂಟಾದ ಅವಘಡ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಫೈಟ್ ಸೀನ್ ಇತ್ತು. ಅದರಲ್ಲಿ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಟ್ಯೂಬ್ ಲೈಟ್ನಿಂದ ಹೊಡೆಯುವ ಸನ್ನಿವೇಶ ಇರಿಸಿದ್ದರು. ಟ್ಯೂಬ್ ಲೈಟ್ ಒಡೆದು ಅದರ ಪುಡಿಗಳು ಕಣ್ಣಿನೊಳಗೆ ಹೊಕ್ಕಿ ರೆಟಿನಾಕ್ಕೆ ಹಾನಿಯಾಗಿತ್ತು. ಅಂದಿನಿಂದ ಬೆಳಕು ಬಿದ್ದಾಗ ಕಣ್ಣು ನೋವಾಗುವುದು, ನೀರು ಬರುವುದು ಆಗುತ್ತದೆ. ಹೀಗಾಗಿ ಅನಿವಾರ್ಯವಾಗಿ ಕನ್ನಡಕ ಬಳಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.


Click it and Unblock the Notifications











