Shrirasthu Shubhamasthu: ತಾತನ ಮೇಲೆ ಕೂಗಾಡಿದ ಸಮರ್ಥ್: ಮಾಧವನ ಮೇಲೆ ಅವಿ ಪರಾಕ್ರಮ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವನ ಮನೆಯಲ್ಲಿ ಪೂರ್ಣಿಮಾಳ ಸೀಮಂತವನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಪೂರ್ಣಿಗೆ ಇಷ್ಟವಾಗುವಂತೆ ಅವಿ ಕೂಡ ಸಮಾಧಾನವಾಗಿ ನಡೆದುಕೊಳ್ಳುತ್ತಾನೆ.
ಪೂರ್ಣಿಮಾ ಕೂಡ ಮಾವ ಮತ್ತು ತಂದೆಯನ್ನು ಒಂದೇ ರೀತಿಯ ಉಡುಗೆಯಲ್ಲಿ ನೋಡಿ ಸಂತಸ ಪಡುತ್ತಾಳೆ. ತನ್ನ ಹೊಟ್ಟೆಯಲ್ಲಿರುವ ಮಗುವಿನಿಂದಲಾದರೂ ಅಪ್ಪ-ಮಗ ಒಂದಾಗಲಿ ಎಂದು ಬಯಸುತ್ತಾಳೆ.
ಈ ಸಂಭ್ರಮದಲ್ಲಿ ಮಾಧವನ ಖುಷಿಯೂ ಡಬಲ್ ಆಗಿರುತ್ತದೆ. ನನ್ನ ಮಗ ನನ್ನನ್ನು ಒಪ್ಪಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿರುತ್ತಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿರುತ್ತಾರೆ.

ಇದಕ್ಕೆಲ್ಲಾ ಶರಾವರಿ ಕಾರಣ
ಮನೆಯಲ್ಲಿ ಸಂಭ್ರಮ ಪಡುವಾಗಲೇ ಎಡವಟ್ಟು ಆಗಿರುತ್ತದೆ. ಅವಿ ಕೆಲಸದ ನಿಮಿತ್ತ ಆಫೀಸಿಗೆ ಹೋಗಿರುತ್ತಾನೆ. ಇದೇ ಸಂದರ್ಭದಲ್ಲಿ ಪೂರ್ಣಿಗೆ ಹೊಟ್ಟೆ ನೋವು ಬರುತ್ತದೆ. ಮಾಧವ ಪೂರ್ಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೆ ಅಲ್ಲಿ ಅವಳಿಗೆ ಆಪರೇಷನ್ ಮಾಡಬೇಕು. ಮಗು ಇದ್ದರೆ, ಪೂರ್ಣಿ ಜೀವಕ್ಕೆ ಅಪಾಯ ಎನ್ನುತ್ತಾರೆ. ಮಾಧವ ಒಪ್ಪುತ್ತಾನೆ. ಇದಕ್ಕೆಲ್ಲಾ ಶರಾವರಿಯೇ ಕಾರಣ. ಅವಳೇ ಬೇಕಂತಲೇ ಪೂರ್ಣಿ ತೆಗೆದುಕೊಳ್ಳುವ ಮಾತ್ರೆಗಳನ್ನು ಹೆಚ್ಚಿಸಿರುತ್ತಾಳೆ. ಮಾಧವ ಫೋನ್ ಮಾಡಿದರೂ ತೆಗೆಯುವುದಿಲ್ಲ. ಭಾವ ಹಾಗೂ ಅವರ ಮಕ್ಕಳು ಸುಖವಾಗಿರಬಾರದು ಎಂದು ಹೀಗೆ ಮಾಡಿರುತ್ತಾಳೆ.

ತಾತನ ಜೊತೆ ದಂಡಪಿಂಡನ ಜಗಳ
ಇತ್ತ ದತ್ತ ತಾತ ಮನೆಯವರೆಲ್ಲರನ್ನೂ ದೇವಸ್ಥಾನಕ್ಕೆ ಕರೆದುಕೊಂಡು ಬಂದಿರುತ್ತಾನೆ. ಸಮರ್ಥ್ ಹಾಗೂ ಸಿರಿ ಇಬ್ಬರೂ ಒಟ್ಟಿಗೆ ಇರಲು ತಾತ ಬಿಡುತ್ತಿರುವುದಿಲ್ಲ. ಹಾಗಾಗಿ ಸಮರ್ಥ್ ಸಪರೇಟ್ ರೂಮ್ ಮಾಡಿರುತ್ತಾನೆ. ಆದರೆ ತಾತ ರೂಮ್ ಅನ್ನು ಕ್ಯಾನ್ಸಲ್ ಮಾಡಿರುತ್ತಾರೆ. ಈ ವಿಚಾರ ತಿಳಿದ ಕೂಡಲೇ ಸಮರ್ತ್ ಗೆ ಕೋಪ ಬರುತ್ತದೆ. ತಾತನ ಮೇಲೆ ಕೂಗಾಡುತ್ತಾನೆ. ನೀನಿರುವುದರಿಂದ ಎಲ್ಲರಿಗೂ ಸಮಸ್ಯೆ. ಯಾರನ್ನೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ನಿನ್ನಿಂದ ಎಲ್ಲರಿಗೂ ಕಷ್ಟ. ಎಷ್ಟು ಕಾಟ ಕೊಡುತ್ತೀಯಾ ಎಂದು ಕೂಗಾಡುತ್ತಾನೆ. ಇದರಿಂದ ತಾತನಿಗೆ ಬೇಸರವಾಗುತ್ತದೆ. ನಂತರ ಸಮರ್ಥ್ ಹೋಗಿ ಕ್ಷಮೆ ಕೇಳುತ್ತಾನೆ.

ಅವಿ ಬಳಿ ಚಾಡಿ ಹೇಳಿದ ಶರಾವರಿ
ಅವಿ ಮೀಟಿಂಗ್ನಲ್ಲಿದ್ದ ಕಾರಣ ಯಾರ ಫೋನ್ ಅನ್ನು ತೆಗೆದಿರುವುದಿಲ್ಲ. ಅಲ್ಲದೇ, ಮಾಧವನ ಫೋನ್ ಅನ್ನು ಯಾವತ್ತೂ ರಿಸೀವ್ ಮಾಡುವುದಿಲ್ಲ. ಪೂರ್ಣಿಗೆ ಆಪರೇಷನ್ ಮಾಡಬೇಕು ಎಂಬ ವಿಚಾರವನ್ನು ಹೇಳಲು ಮಾಧವ ಎಷ್ಟು ಫೋನ್ ಮಾಡಿದ್ದರೂ ಅವಿ ತೆಗೆದಿರುವುದಿಲ್ಲ. ಆಫಿಸಿಗೆ ನೇರವಾಗಿ ಬಂದ ಶರಾವರಿ ಅವಿ ಬಳಿ ಚಾಡಿ ಹೇಳುತ್ತಾಳೆ. ನಿಮ್ಮ ತಂದೆ ಪೂರ್ಣಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಏನಾಗಿದೆಯೋ ಗೊತ್ತಿಲ್ಲ ಎಂದು ಅವಿ ಕಿವಿ ಊದುತ್ತಾಳೆ. ಆಸ್ಪತ್ರೆಗೆ ಬರುವ ಅವಿ ಮಾಧವನ ಜೊತೆಗೆ ಜಗಳ ಮಾಡುತ್ತಾನೆ. ಇಲ್ಲಿಂದ ಹೊರಟು ಹೋಗು ಎಂದು ಕಳಿಸುತ್ತಾನೆ. ಮಾಧವನ ಮಾತನ್ನು ಕೊಂಚವೂ ಕೇಳುವುದಿಲ್ಲ.

ಸತ್ಯ ತಿಳಿದು ಕಣ್ಣೀರು
ಅವಿಗೆ ತನ್ನ ತಾಯಿ ಪೂರ್ಣಿ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬರುತ್ತಾಳೆ ಎಂಬ ನಂಬಿಕೆ ಇತ್ತು. ಆದರೆ, ಮಗು ಹೋಗಿದ್ದಕ್ಕೆ ದುಃಖವಾಗಿರುತ್ತದೆ. ಪೂರ್ಣಿಗೆ ಏನು ಹೇಳುವುದು ಎಂಬುದು ಗೊತ್ತಾಗುವುದಿಲ್ಲ. ಪೂರ್ಣಿ, ಅವಿ ಎಂದು ಕನವರಿಸುತ್ತಿರುತ್ತಾಳೆ. ಆಗ ಅವಿ ಪೂರ್ಣಿಯನ್ನು ಮಾತನಾಡಿಸುತ್ತಾನೆ. ಪೂರ್ಣಿಗೆ ಮಗು ಹೋಯ್ತು ಎಂಬ ವಿಚಾರ ತಿಳಿದು ಕಣ್ಣೀರು ಹಾಕುತ್ತಾಳೆ. ಇನ್ನು ಅವಿ ಕೋಪದಲ್ಲಿದ್ದು, ಮಾಧವನನ್ನು ಮನೆಯಿಂದಲೇ ಆಚೆ ಹಾಕುತ್ತಾನಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











