ಕಸ್ತೂರಿ ವಾಹಿನಿಯಲ್ಲಿ ಎರಡು ಹೊಸ ಧಾರಾವಾಹಿಗಳು
ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಮನಗೆದ್ದಿರುವ ಅಪ್ಪಟ ಕನ್ನಡ ಕಸ್ತೂರಿ ವಾಹಿನಿ ಇದೀಗ ಎರಡು ಹೊಸ ಶೈಲಿಯ ಧಾರಾವಾಹಿಗಳನ್ನು ಇದೇ 27 ರಿಂದ ಪ್ರಾರಂಭಿಸುತ್ತಿದೆ.
ಕೆ.ಶಶಿಧರ್ ನಿರ್ಮಾಣ, ನಿರ್ದೇಶನ ಮತ್ತು ಛಾಯಾಗ್ರಹಣದ 'ನೀ ಹಚ್ಚಿದ ಕುಂಕುಮ' ರಾತ್ರಿ 7 ಗಂಟೆಗೆ ಪ್ರಸಾರವಾಗಲಿದೆ. ಕಥೆ-ಸಂಭಾಷಣೆ ಒದಗಿಸಿರುವವರು ಕೇಶವ ಚಂದ್ರ. ಸಮಾಜಸೇವೆಯನ್ನೇ ಗುರಿಯನ್ನಾಗಿಸಿಕೊಂಡಿರುವ ನಾಯಕ, ಬಡತನದಲ್ಲೇ ಹುಟ್ಟಿ ಬೆಳೆದ ನಾಯಕಿ. ಇಬ್ಬರ ಮಧ್ಯೆ ಬರುವ ದುರಹಂಕಾರಿ ಹೆಣ್ಣು. ಮೂವರ ನಡುವಿನ ಕಥೆಯೇ 'ನೀ ಹಚ್ಚಿದ ಕುಂಕುಮ'.

ರಶ್ಮಿ, ಐಶ್ವರ್ಯ, ಕಿರಣ್, ಅಶ್ವಿನ್, ಅಂಬುಜಾ ಮತ್ತು ಶಿಲ್ಪಾ ಪ್ರಮುಖ ತಾರಾಬಳಗದಲ್ಲಿದ್ದಾರೆ. ಇನ್ನೂ ಇಲ್ಲಿಯವರೆಗೂ ಹಲವಾರು ಯಶಸ್ವಿ ಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್ ಹಾಗೂ ರೇಖಾ ರಾಣಿ ದಂಪತಿಯ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿ 'ಪ್ರೇಮ ಪಲ್ಲವಿ'.
'ಪ್ರೇಮ ಪಲ್ಲವಿ' ಇದೇ 27 ರಿಂದ ಪ್ರತಿ ದಿನ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಹಳ್ಳಿ ಸೊಗಡಿನಲ್ಲಿ ನಡೆಯುವಂಥ ಕಥೆ ಇದಾಗಿದ್ದು ನಾಯಕಿಯ ಜೊತೆಗೆ ಎಲ್ಲಾ ಪಾತ್ರಗಳಿಗೂ ಒಂದೇ ರೀತಿಯ ಮಹತ್ವ ನೀಡಲಾಗಿದೆ.

'ಪ್ರೇಮ ಪಲ್ಲವಿ'ಗೆ ಇಬ್ಬರು ಸಂಚಿಕೆ ನಿರ್ದೇಶಕರಿದ್ದು ಮುಖ್ಯ ನಿರ್ದೇಶಕಿಯಾಗಿ ರೇಖಾರಾಣಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕಥೆ-ಚಿತ್ರಕಥೆ-ಸಂಭಾಷಣೆಯ ಜವಾಬ್ದಾರಿ ಕೂಡ ಅವರೇ ವಹಿಸಿಕೊಂಡಿದ್ದಾರೆ. [ವೈಟ್ ಹಾರ್ಸ್ ಬೆನ್ನೇರಿದ ಕನ್ನಡದ ಕಸ್ತೂರಿ ವಾಹಿನಿ]
ಹಲವಾರು ಧಾರಾವಾಹಿ ಮತ್ತು ನಾಟಕಗಳಲ್ಲಿ ಅಭಿನಯಿಸಿರುವ ಮಂಡ್ಯ ಜಯರಾಮ್, ಕವಿತಾ ರೈ, ನಾಗೇಂದ್ರ ಷಾ, ಶಶಿಕಲಾ ಉಳಿದ ತಾರಾಬಳಗದಲ್ಲಿದ್ದಾರೆ. ಅಶೋಕ್ ಕಶ್ಯಪ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಇವಿಷ್ಟೇ ಅಲ್ಲದೇ, ಸದ್ಯದಲ್ಲೇ ಹಲವಾರು ರಿಯಾಲಿಟಿ ಶೋಗಳನ್ನ ಕಸ್ತೂರಿ ವಾಹಿನಿಯಲ್ಲಿ ನಿರೀಕ್ಷಿಸಬಹುದಾಗಿದೆ.


Click it and Unblock the Notifications











