ಮೈಸೂರಿನಲ್ಲಿ ನಾಳೆ 'ಉದಯ ಸಖಿ' ಪ್ರಾರಂಭ.!
25 ವರ್ಷಗಳಿಂದ ಕರ್ನಾಟಕದಲ್ಲಿ ಛಾಪು ಮೂಡಿಸಿರುವ ಚಾನೆಲ್ ಉದಯ ಟಿವಿ. ಅನೇಕ ಮೆಚ್ಚುವ ಧಾರಾವಾಹಿಗಳನ್ನು, ಅನೇಕ ರಿಯಾಲಿಟಿ ಶೋಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿಯು ಇಂದಿಗೂ ಕೂಡ ವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಗಿದೆ.
ಉದಯ ಟಿವಿ ತನ್ನ ಬೆಳ್ಳಿ ಮಹೋತ್ಸದ ಸುಸಂದರ್ಭದಲ್ಲಿ ಈಗ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ನೀಡುವುದಕ್ಕೆ ಮುಂದಾಗಿದೆ. ಕರ್ನಾಟಕದ ಮಹಿಳೆಯರಿಗಾಗಿ, ಮಹಿಳೆಯರಿಗೋಸ್ಕರ ಅವರಲ್ಲಿರುವ ನೈಪುಣ್ಯತೆಯನ್ನು ರಾಜ್ಯದ ತುಂಬೆಲ್ಲಾ ಪ್ರದರ್ಶಿಸಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಉದಯ ಟಿವಿ ಹೆಮ್ಮೆಯಿಂದ ಪ್ರಾರಂಭಿಸುತ್ತಿರುವ ಮಹಿಳಾ ವೇದಿಕೆ 'ಉದಯ ಸಖಿ'.

ಮೊದಲ 'ಉದಯ ಸಖಿ'ಯನ್ನು ಸಾಂಸ್ಕೃತಿಕ ನಾಡು, ವಿಶ್ವ ವಿಖ್ಯಾತ ಮೈಸೂರಿನಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಇದೇ ಫೆಬ್ರವರಿ 14 (ಗುರುವಾರ) ಬೆಳಗ್ಗೆ 10 ಗಂಟೆಗೆ ಅಶೋಕ ನಗರದ 'ಸೌಗಂಧಿಕ ಪಾರ್ಕ್' ನಲ್ಲಿ ವರ್ಣರಂಜಿತ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದೆ.
ಅಂದು ಬೆಳಗ್ಗೆ ಯೋಗಾನರಸಿಂಹ ದೇವಸ್ಥಾನದ ಸಂಸ್ಥಾಪಕರಾದ ಪೂಜ್ಯ ಭಾಷ್ಯಂ ಸ್ವಾಮೀಜಿಯವರ ಘನ ಉಪಸ್ಥಿತಿಯಲ್ಲಿ ಸಂಸದರಾದ ಪ್ರತಾಪ್ ಸಿಂಹ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ನಂತರ ಶ್ರೀಯುತರು 'ಉದಯ ಸಖಿಯ' ಲಾಂಛನವನ್ನು ಸ್ಕ್ರೀನಿಂಗ್ ಮಾಡುವುದರ ಮೂಲಕ ಉದ್ಘಾಟಿಸುತ್ತಾ ಕರ್ನಾಟಕಕ್ಕೆ ಸಮರ್ಪಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉದಯ ಟಿವಿಯ ಹೆಸರಾಂತ ಧಾರಾವಾಹಿ 'ಕಾವೇರಿ'ಯ ನಟ-ನಟಿಯರು ಭಾಗವಹಿಸಲಿದ್ದಾರೆ. ಅಲ್ಲದೇ 'ಉದಯ ಸಖಿ'ಯರಿಂದ ವಿವಿಧ ರೀತಿಯ ಮನರಂಜನೆ ನಡೆಯಲಿದೆ.


Click it and Unblock the Notifications











