ಶತಕದ ಸಂಭ್ರಮದಲ್ಲಿ ಉದಯ ವಾಹಿನಿಯ ಜನಪ್ರಿಯ ಧಾರಾವಾಹಿ “ಅವಳು”
ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗ್ತಿರೋ ಧಾರಾವಾಹಿ 'ಅವಳು-ಕಥೆಯಾದವಳು' ಈಗಾಗಲೇ ಜನಮೆಚ್ಚುಗೆ ಪಡೆದಿದೆ.
ಹಲವಾರು ತಿರುವುಗಳಿಂದ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಧಾರಾವಾಹಿಗೆ ಈಗ ನೂರನೇ ಸಂಚಿಕೆಯ ಸಂಭ್ರಮ. ಗುರುರಾಜ್ ಕುಲಕರ್ಣಿ ನಿರ್ಮಾಣದ, ನಾಗರಾಜ್ ಉಪ್ಪುಂದ ನಿರ್ದೇಶನದ ಈ ಧಾರಾವಾಹಿಯಲ್ಲಿ ಪ್ರಸಿದ್ಧ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಮೇಘನಾ, ಹೆಸರಾಂತ ಸಂಗೀತಗಾರ ಪ್ರವೀಣ್ ಡಿ ರಾವ್, ಪದ್ಮಜಾ ರಾವ್, ದೀಪಾ ಸ್ವಾಮಿ, ಶೋಭಾ ರೈ, ರಾಕೇಶ್ ಮಯ್ಯ ಮುಂತಾದ ಕಲಾವಿದ ಭಾವಪೂರ್ಣ ಅಭಿನಯ, 'ಅವಳು' ಧಾರಾವಾಹಿಯನ್ನ ಜನ ಮೆಚ್ಚಲು ಪ್ರಮುಖ ಕಾರಣ.
ತನ್ನ ತಂಗಿಯ ಹಿತಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿರುವ ಮಾನಸಾಳ ತ್ಯಾಗಮಯ ಜೀವನವೇ 'ಅವಳು-ಕಥೆಯಾದವಳು'. ತಂಗಿ ಶ್ವೇತಾಳ ಮದುವೆ ಮಾಡಿಸೋ ಸಲುವಾಗಿ, ತನ್ನ ಜೀವನದ ಆಸೆಯನ್ನು ಬಲಿ ಕೊಟ್ಟು ಪದ್ಮಾಳ ಗಂಡ ಮಧುಸೂದನನ್ನು ಮದ್ವೆಯಾಗುತ್ತಾಳೆ ಮಾನಸ. ಇಷ್ಟೇ ಅಲ್ಲದೇ ಮಯೂರಿಯ ಆಸ್ತಿ ದುರಾಸೆಗೆ ಮಾನಸ ತನ್ನ ತಾಯ್ತಾನವನ್ನೇ ತ್ಯಾಗ ಮಾಡಲು ನಿರ್ಧರಿಸಿ ತನ್ನ ಗರ್ಭಕೋಶವನ್ನೇ ತೆಗೆಸುತ್ತಾಳೆ. ಇಂತಹ ಆಕಸ್ಮಿಕ ಘಟನೆಯ ನಂತರ ಮಾನಸಾಳ ಬದುಕು ಹೇಗೆ ಬದಲಾಗುತ್ತದೆ. ಆಕೆ ತನ್ನ ಸ್ವಂತ ತಂಗಿಯ ವಿರೋಧವನ್ನು ಕಟ್ಟಿಕೊಳ್ಳಬೇಕಾಗಿ ಬಂದರೂ ಹೇಗೆ ಈ ಸನ್ನಿವೇಶಗಳನ್ನು ನಿಭಾಯಿಸುತ್ತಾಳೆ.. ಮುಂತಾದ ಕುತೂಹಲಕರ ತಿರುವುಗಳೊಂದಿಗೆ ಧಾರಾವಾಹಿಯು ಮುಂದೆ ಸಾಗಲಿದೆ.
'ಅವಳು' ನಿರ್ಮಾಪಕ ಗುರುರಾಜ್ ಕುಲಕರ್ಣಿಯವರ ಪ್ರಕಾರ, ಪ್ರಾಮಾಣಿಕ ಪ್ರಯತ್ನ, ಉತ್ತಮ ಕಥೆ ಮತ್ತು ಅಭಿನಯವೇ 'ಅವಳು' ಧಾರಾವಾಹಿಯ ಯಶಸ್ಸಿಗೆ ಕಾರಣವಾಗಿದ್ದು, ಇನ್ನು ಮುಂದೆ ಕೂಡ ಒಳ್ಳೆಯ ಗುಣಮಟ್ಟವನ್ನು ಕಾಪಾಡಿಕೊಂಡು, ನೋಡುಗರಿಗೆ ಮನರಂಜನೆಯ ಮಹಾಪೂರವನ್ನು ಹರಿಸುವ ಭರವಸೆಯನ್ನ ನೀಡುತ್ತಾರೆ.
ಕಲಾವಿದರ ಪ್ರಬುದ್ಧ ನಟನೆ, ಉತ್ತಮ ಚಿತ್ರಕಥೆ ಹಾಗೂ ಯಾವುದೇ ಸಂದರ್ಭದಲ್ಲೂ ರಾಜಿ ಇಲ್ಲದ ನಿರ್ಮಾಣ ಈ ಯಶಸ್ಸಿಗೆ ಕಾರಣವಾಗಿದೆ ಎಂದು ನಿರ್ದೇಶಕ ನಾಗರಾಜ್ ಉಪ್ಪುಂದ ಹೇಳುತ್ತಾರೆ.
ಧ್ರುವ್ ಮೀಡಿಯಾ ಸಂಸ್ಥೆ ತನಗೊಂದು ಮುಖ್ಯ ಪಾತ್ರ ಕೊಟ್ಟು ತನ್ನ ಪ್ರತಿಭೆಯನ್ನು ಅನಾವರಣ ಮಾಡಲು ಒಳ್ಳೆಯ ವೇದಿಕೆ ಕಲ್ಪಿಸಿದೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಉದಯ ವಾಹಿನಿಗೆ ತಾನು ಚಿರಋಣಿ ಎಂದು ಧನ್ಯತಾಪೂರ್ವಕವಾಗಿ ನಟ ರಾಕೇಶ್ ಮಯ್ಯ ಹೇಳಿದರು.


Click it and Unblock the Notifications











