ಕನ್ನಡದ ಸಿನಿ ಮಕ್ಕಳಿಗೆ ಶಾರುಖ್ ಖಾನ್ ಪಾಠ

ಇದೇ ವಿಷಯವಾಗಿ ಮೊನ್ನೆ ಹಿಂದಿಯ ನಟ ಶಾರೂಖ್ ಖಾನ್ ಬೆಂಗಳೂರಿಗೆ ತಮ್ಮ ರಾ-ವನ್ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಇವರೆಲ್ಲರಿಗೂ ತಮ್ಮ ಪ್ರೈಮರಿ ಮಾರುಕಟ್ಟೆ ಬಿಟ್ಟು ಬೇರೆ ರಾಜ್ಯಗಳಲ್ಲಿಯೂ ಮಾರುಕಟ್ಟೆಯನ್ನು ವಿಸ್ತರಿಸುವ ಆಸಕ್ತಿ, ಮುನ್ಸೂಚನೆ ಇದೆ. ಹಾಗಾಗಿಯೇ ಇವತ್ತು ತಮಿಳು, ತೆಲುಗು, ಹಿಂದಿ ಚಿತ್ರರಂಗಗಳು ವರ್ಶಕ್ಕೆ 600-700 ಕ್ಕಿಂತ ಹೆಚ್ಚು ಕೋಟಿಗಟ್ಟಲೆ ಮಾರುಕಟ್ಟೆಯ ಹಿಡಿತ ಹೊಂದಿರಲು ಸಾಧ್ಯವಾಗಿದೆ.
ಆದರೆ ಯಾವೊಬ್ಬ ಕನ್ನಡ ನಟನೂ ಕನ್ನಡಿಗರು ಲಕ್ಷಾಂತರ ಜನ ವಾಸವಿರುವ ಚೆನೈ, ಹೈದ್ರಾಬಾದ್, ಮುಂಬಯಿ, ಕೊಯಮತ್ತೂರು, ಊಟಿ, ಸಿಂಗಾಪುರ್, ಅಮೆರಿಕ, ಯೂರೋಪ್ ಮುಂತಾದೆಡೆ ಹೋಗಿ ತಮ್ಮ ಚಿತ್ರಗಳ ಬಗ್ಗೆ ಪ್ರಚಾರವನ್ನು ಅಲ್ಲಿರುವ ಕನ್ನಡಿಗರಿಗೆ ತಲುಪಿಸುವ ಪ್ರಯತ್ನವನ್ನು ನಾನಂತೂ ನೋಡಿಲ್ಲ.
ತಮ್ಮ ಚಿತ್ರದ ಬಗ್ಗೆ ಇವರಿಗೇ ನಂಬಿಕೆ ಇಲ್ಲವೋ ಅಥವಾ ಕರ್ನಾಟಕದ ಆಚೆಗೆ ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವುದು ಬೇಡ ಅಂತ ಇವರ ಮನಸ್ಸಿನಲ್ಲಿ ಇದೆಯೋ ಗೊತಿಲ್ಲ.
ಇದು ನಮ್ಮ ದೌರ್ಬಲ್ಯವೇ?: ಇದೆಲ್ಲಕ್ಕಿಂತ ಅಪಾಯಕಾರಿ ಹಾಗು ಕೀಳು ಮನೋಭಾವದ ಬೆಳವಣಿಗೆ ಅಂದರೆ, ಕನ್ನಡ ಚಿತ್ರರಂಗದಲ್ಲೇ ವಿವಿಧ ಹಂತಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಲವು ತಂತ್ರಜ್ಞರು, ನಿರ್ದೇಶಕರು, ನಿರ್ಮಾಪಕರು, ವಿತರಕರು ತಾವೇ ಖುದ್ದಾಗಿ ಹೋಗಿ ಈ ಪರಭಾಷಾ ನಟರನ್ನು ಬರಮಾಡಿಕೊಂಡು ಕರ್ನಾಟಕದಲ್ಲಿ ತಮ್ಮ ಚಿತ್ರಗಳ ಬಿಡುಗಡೆಗೆ ಎಲ್ಲ ರೀತಿಯ ಸಹಾಯವನ್ನೂ ಮಾಡುತ್ತಾರೆ.
ಒಬ್ಬೊಬ್ಬರು ತಮ್ಮ ಒಡೆತನದಲ್ಲಿರುವ ಚಿತ್ರಮಂದಿರದಲ್ಲಿ ಪರಭಾಷೆ ಚಿತ್ರಗಳನ್ನು ಪ್ರಸಾರ ಮಾಡಿದರೆ, ಇನ್ನೊಬ್ಬರು ಪರಭಾಷೆ ಚಿತ್ರ ಬೆಂಗಳೂರಿನಲ್ಲಿ 50 ದಿನ, 100 ದಿನ ಒಡಿದ ಖುಶಿಗೆ ಆ ಚಿತ್ರದ ಸಂತೋಷಕೂಟದಲ್ಲಿ ಭಾಗವಹಿಸಿ ಶುಭ ಹಾರೈಸಿದರೆ, ಮತ್ತೊಬ್ಬರು ತಮಿಳು, ತೆಲುಗು ನಟರಿಗೆ ಪ್ರಚಾರಕ್ಕಷ್ಟೇ ಅಲ್ಲ, ನಿಮ್ಮ ಚಿತ್ರದ ಶತಮಾನೋತ್ಸವ ಕಾರ್ಯಕ್ರಮವನ್ನೂ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮಾಡಿ ಅಂತ ಬೇಡಿಕೊಳ್ಳುತ್ತಾರೆ.
ಕನ್ನಡ ಚಿತ್ರರಂಗವೂ ಒಂದು ಉದ್ಯಮ. ನಾವು ಇಲ್ಲ ಕ್ರಿಯಾತ್ಮಕವಾಗಿ, ಶ್ರುಜನಶೀಲತೆಯಿಂದ ಚಿತ್ರಗಳನ್ನು ಮಾಡಿ ಅದನ್ನು ಎಲ್ಲ ವರ್ಗಗಳ, ಎಲ್ಲ ಕಡೆ ನೆಲೆಸಿರುವ ಕನ್ನಡಿಗರಿಗೆ ತಲುಪಿಸಿದರೆ, ನಾವು ಉದ್ಧಾರವಾಗಿತ್ತೇವೆ.
ಕನ್ನಡ ಚಿತ್ರರಂಗದ ಏಳಿಗೆಯೂ ಆಗುತ್ತದೆ ಅನ್ನುವ ದೂರದೃಷ್ಟಿ ಯಾರೊಬ್ಬರಿಗೂ ಇದ್ದಂತಿಲ್ಲ. ಒಂದು ಖಾಸಗಿ ಉದ್ಯಮ ನಡೆಸಲು ಬೇಕಿರುವ ಚಾಣಾಕ್ಷತನ ಹಾಗು ವೃತ್ತಿಪರತೆ ಯಾವಾಗ ಕಲೆತುಕೊಳ್ಳುತ್ತಾರೆ ಅನ್ನೋದು ಊಹೆಗೂ ಮೀರಿದ ಮಾತಾಗಿದೆ.
ಕನ್ನಡ ಚಿತ್ರರಂಗದ ಗಣ್ಯರು ಒಟ್ಟಿನಲ್ಲಿ ಪರಭಾಷೆ ಚಿತ್ರಗಳಿಗೆ ದಲ್ಲಾಳಿಗಳಾಗಿ ವರ್ತಿಸಿವುದನ್ನು ಬಿಟ್ಟು ಕನ್ನಡ ಚಿತ್ರಗಳ ಏಳಿಗೆಯತ್ತ ದುಡಿಯಲಿ ಅನ್ನುವುದೊಂದೇ ಸಾಮಾನ್ಯ ಕನ್ನಡಿಗರ ಆಶಯ.


Click it and Unblock the Notifications











