ಕೊಠಾರಿಯನ್ನು ಭಯಭೀತಗೊಳಿಸಿದ ವರ್ಮಾ
''ಅಗ್ಯಾತ್ ಚಿತ್ರೀಕರಣಕ್ಕಾಗಿ ಕಾಡು ಮೇಡು ಅಲೆಯಬೇಕಾಯಿತು. ಆ ಸಮಯದಲ್ಲಿ ವರ್ಮಾ ಕೆಲವು ಘಟನೆಗಳನ್ನು ಜ್ಞಾಪಿಸಿ ನನ್ನನ್ನು ಭಯಭೀತಗೊಳಿಸಿದರು'' ಎನ್ನುತ್ತಾರೆ ಪ್ರಿಯಾಂಕ ಕೊಠಾರಿ. ಇಷ್ಟಕ್ಕೂ ವರ್ಮಾ ಅವರು ಪ್ರಿಯಾಂಕಾಗೆ ಹೇಳಿದ ಘಟನೆಗಳಾದರೂ ಏನು ಎಂದು ಆಲೋಚಿಸುತ್ತಿದ್ದೀರಾ?
ಒಂಬತ್ತು ವರ್ಷಗಳ ಹಿಂದೆ ವರ್ಮಾರ 'ಜಂಗಿಲ್'ಎಂಬ ಚಿತ್ರ ತೆರೆಕಂಡಿತು. ಆ ಚಿತ್ರದಲ್ಲಿ ಫರ್ಧೀನ್ ಖಾನ್, ಊರ್ಮಿಳಾ ಜತೆಯಾಗಿ ಅಭಿನಯಿಸಿದ್ದರು. ಆಗಿನ ಚಿತ್ರೀಕರಣದ ವಿಶೇಷಗಳನ್ನು ವರ್ಮಾ ಹೇಳಿದರಂತೆ! ಇಷ್ಟೇನಾ...ಇದರಲ್ಲೇನಿದೆ ಅಂತ ಭಯಪಡುವ ಸಂಗತಿಗಳು? ಪ್ರಿಯಾಂಕಾ ಅವರ ಮಾತಿನಲ್ಲೇ ಕೇಳಿ...
''ಅಗ್ಯಾತ್ ಚಿತ್ರವನ್ನು ಶ್ರೀಲಂಕಾದ ದಟ್ಟ ಕಾಡುಗಳಲ್ಲಿ ಚಿತ್ರೀಕರಿಸಿದರು. ಅಲ್ಲಿಗೆ ಹೋಗುವ ಮುನ್ನ ವರ್ಮಾರೊಂದಿಗೆ ಸ್ವಲ್ಪ ಸಮಯ ಮಾತನಾಡಿದೆ. ಆ ಸಮಯದಲ್ಲಿ 'ಜಂಗಿಲ್' ಅನುಭವಗಳನ್ನು ಅವರು ಹೇಳಿದರು. ಜಂಗಿಲ್ ಚಿತ್ರವನ್ನು 50 ದಿನಗಳ ಕಾಲ ಕರ್ನಾಟಕದ ಕಾಡುಗಳಲ್ಲಿ ಚಿತ್ರೀಕರಿಸಬೇಕೆಂದು ನಿರ್ಧರಿಸಿದೆವು''.
''ಮೊದಲು ಅಲ್ಲಿಗೆ ಹೋದಾಗ ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಅನ್ನಿಸಿತು. ಯಾವುದಾದರೂ ಕ್ರೂರ ಮೃಗಗಳು ನಮ್ಮ ಬೆನ್ನುಹತ್ತಿವೆ ಎಂದು ಒಬ್ಬರೆಂದರೆ, ದಂತಚೋರ ವೀರಪ್ಪನ್ ಸಹಚರರು ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನವನ್ನು ಮತ್ತೊಬ್ಬರು ವ್ಯಕ್ತಪಡಿಸಿದ್ದರು. ಈ ನಡುವೆ ಒಬ್ಬ ಹುಡುಗಿ ಹನ್ನೆರಡು ಗಂಟೆಗಳ ಕಾಲ ಕಾಣೆಯಾದಳು.ಕಡೆಗೆ ಆಕೆ ಪ್ರತ್ಯಕ್ಷವಾದರೂ ಚಿತ್ರತಂಡದೊಂದಿಗೆ ಏನೂ ಮಾತನಾಡದೆ ಮುಂಬೈಗೆ ಹೊರಟು ಹೋದಳು'' ಎಂದು ಪ್ರಿಯಾಂಕಾ ವಿವರಿಸಿದರು.
''ಆಕೆಗೆ ಏನಾಯಿತು ಎಂದು ಅರ್ಥವಾಗಲಿಲ್ಲ. ಅಲ್ಲಿ ಚಿತ್ರೀಕರಣ ಮಾಡಿದಷ್ಟು ದಿನಗಳೂ ಭಯ ಕಾಡುತ್ತಿತ್ತು. ಈ ಸಂಗತಿಗಳನ್ನು ವರ್ಮಾ ಹೇಳುತ್ತಿದ್ದರೆ ಮೈಯಲ್ಲಾ ಕಂಪಿಸುತ್ತಿತ್ತು. ಅಗ್ಯಾತ್ ಸಹಾ ಅದೇ ರೀತಿ ಭಯಪಡಿಸುವ ರೀತಿಯಲ್ಲಿದೆ. ಶ್ರೀಲಂಕಾದ ದಟ್ಟ ಕಾನನಗಳಲ್ಲಿ ಅಡಿಯಿಟ್ಟ ಕ್ಷಣದಿಂದ ಏನೋ ಭಯ'' ಎಂದು ಸಣ್ಣಗೆ ಕಂಪಿಸುತ್ತಾರೆ ಪ್ರಿಯಾಂಕ ಕೊಠಾರಿ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











