'ರಿಹಾನ್ನ ಪರಿಣಾಮ', ಅಖಾಡಕ್ಕಿಳಿದ ಬಾಲಿವುಡ್ ಸೆಲೆಬ್ರಿಟಿಗಳು: ಡ್ಯಾಮೇಜ್ ಕಂಟ್ರೋಲ್?
ಅಂತರಾಷ್ಟ್ರೀಯ ಪಾಪ್ ಗಾಯಕಿ, ನಟಿ ರಿಹಾನ್ನ ನಿನ್ನೆಯಷ್ಟೆ ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ಭಾರಿ ಚರ್ಚೆ ಎಬ್ಬಿಸಿದೆ. ರಿಹಾನ್ನ ಜೊತೆಗೆ ಮಿಲಾ ಖಲೀಫಾ, ಗ್ರೆಟಾ ಥೆನ್ಬರ್ಗ್ ಇನ್ನೂ ಹಲವು ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ದೆಹಲಿ ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತ ಪ್ರತಿಭಟನೆಗೆ ರಿಹಾನ್ನ ಬೆಂಬಲ ಸೂಚಿಸಿದ ಬೆನ್ನ್ಲ್ಲೇ ಕೇಂದ್ರ ವಿದೇಶಾಂಗ ಇಲಾಖೆಯು ಅಧಿಕೃತ ಹೇಳಿಕೆಯೊಂದನ್ನು ಹೊರಡಿಸಿದ್ದು, 'ಸಣ್ಣ ಸಂಖ್ಯೆಯ ಗುಂಪು ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು, ಪಟ್ಟಭದ್ರ ಹಿತಾಸಕ್ತಿಯುಳ್ಳ ಕೆಲವರು, ಭಾರತದ ವಿರುದ್ಧ ಅಂತರರಾಷ್ಟ್ರೀಯ ಸಹಾಯವನ್ನು ಸಹ ಪಡೆದಿದ್ದಾರೆ' ಎಂದು ಪ್ರಕಟಣೆಯಲ್ಲಿ ಹೇಳಿದೆ. ಹೇಳಿಕೆಯ ಕೊನೆಗೆ 'ಇಂಡಿಯಾ ಟುಗೆದರ್' 'ಇಂಡಿಯಾ ಅಗೇನ್ಸ್ಟ್ ಪ್ರೊಪೆಗಾಂಡಾ' ಹ್ಯಾಷ್ ಟ್ಯಾಗ್ ಅನ್ನು ಬಳಸಿದೆ.
ರೈತ ಪ್ರತಿಭಟನೆ ಬಗ್ಗೆ ಇಷ್ಟು ದಿನ ತುಟಿಬಿಚ್ಚಿರದಿದ್ದ ಹಲವು ಬಾಲಿವುಡ್ ಸೆಲೆಬ್ರಿಟಿಗಳು ವಿದೇಶಾಂಗ ಇಲಾಖೆಯ ಹೇಳಿಕೆ ಹೊರಬಿದ್ದ ಕೂಡಲೇ ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಇಲಾಖೆ ಬಳಿಸಿದ್ದ 'ಇಂಡಿಯಾ ಟುಗೆದರ್' 'ಇಂಡಿಯಾ ಅಗೇನ್ಸ್ಟ್ ಪ್ರೊಪೆಗಾಂಡಾ' ಹ್ಯಾಷ್ ಟ್ಯಾಗ್ ಅನ್ನು ಬಳಸಿ 'ನಾವೆಲ್ಲರೂ ಒಂದೇ' ಎಂಬರ್ಥದ ಟ್ವೀಟ್ಗಳನ್ನು ಮಾಡಿದ್ದಾರೆ.
ಬಾಲಿವುಡ್ ಸ್ಟಾರ್ಗಳ ಟ್ವೀಟ್ಗೆ ಹಲವು ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದು, 'ಎರಡು ತಿಂಗಳಿನಿಂದಲೂ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಏಕೆ ಮಾತನಾಡಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದ ರೈತರ ಮೇಲೆ ಜಲಫಿರಂಗಿ ದಾಳಿ ಮಾಡಿದಾಗ ಏಕೆ ಮೌನವಾಗಿದ್ದಿರಿ? ರೈತರ ಮೇಲೆ ಲಾಠಿ ಪ್ರಹಾರ ಆದಾಗ ಏಕೆ ಸುಮ್ಮನಿದ್ದಿರಿ, ರೈತರ ಹಾದಿಗೆ ಮುಳ್ಳು ನೆಟ್ಟಾಗ ಏಕೆ ಮಾತನಾಡಲಿಲ್ಲ' ಎಂದು ಬಾಲಿವುಡ್ ನಟರನ್ನು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು.

ಮೊದಲ ಬಾರಿಗೆ ರೈತ ಪ್ರತಿಭಟನೆ ಬಗ್ಗೆ ಅಕ್ಷಯ್ ಟ್ವೀಟ್
'ರೈತರು ನಮ್ಮ ದೇಶದ ಬಹುಮುಖ್ಯ ಭಾಗ. ಅವರ ಸಮಸ್ಯೆಗಳನ್ನು ಪರಿಹರಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳು ಸ್ಪಷ್ಟವಾಗಿವೆ. ನಮ್ಮ್ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸುವವರ ಬಗ್ಗೆ ಗಮನ ಕೊಡದೇ ಇರೋಣ, ಸೌಹಾರ್ದತೆಯನ್ನು ಬೆಂಬಲಿಸೋಣ' ಎಂದು ಟ್ವೀಟ್ ಮಾಡಿದ್ದಾರೆ ನಟ ಅಕ್ಷಯ್ ಕುಮಾರ್. ಅಂದಹಾಗೆ ಎರಡು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿರುವ ರೈತ ಪ್ರತಿಭಟನೆ ಬಗ್ಗೆ ಅಕ್ಷಯ್ ಕುಮಾರ್ ಮಾಡಿರುವ ಮೊದಲ ಟ್ವೀಟ್ ಇದು!

ಸುಳ್ಳು ಪ್ರಚಾರಕ್ಕೆ ಬಲಿಯಾಗಬೇಡಿ: ಅಜಯ್ ದೇವಗನ್
'ಸಿಂಘಂ' ಖ್ಯಾತಿಯ ನಟ ಅಜಯ್ ದೇವಗನ್ ಸಹ ಟ್ವೀಟ್ ಮಾಡಿದ್ದು, 'ಭಾರತ ಅಥವಾ ಭಾರತೀಯ ನೀತಿಗಳ ವಿರುದ್ಧ ಯಾವುದೇ ಸುಳ್ಳು ಪ್ರಚಾರಕ್ಕಾಗಿ ಬಲಿಯಾಗಬೇಡಿ. ಇಂಥಹಾ ಸಮಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದಿದ್ದಾರೆ ಅಜಯ್ ದೇವಗನ್. ರೈತ ಪ್ರತಿಭಟನೆ ಬಗ್ಗೆ ಅಜಯ್ ದೇವಗನ್ ಅವರ ಮೊದಲ ಟ್ವೀಟ್ ಇದು.

ಕಮೆಂಟ್ ಬ್ಲಾಕ್ ಮಾಡಿ ಟ್ವೀಟ್ ಮಾಡಿದ ಕರಣ್ ಜೋಹರ್
ಇನ್ನು ಸುಶಾಂತ್ ಸಾವಿನ ನಂತರ ಕತ್ತಲೆ ಕೋಣೆ ಸೇರಿಕೊಂಡಿದ್ದ, ಸಾಮಾಜಿಕ ಜಾಲತಾಣದಿಂದಲೂ ಬಹುಪಾಲು ದೂರವೇ ಉಳಿದಿದ್ದ ಕರಣ್ ಜೋಹರ್ ಸಹ ಟ್ವೀಟ್ ಮಾಡಿದ್ದು, 'ನಾವು ಬಹಳ ಪ್ರಕ್ಷುಬ್ದ ಕಾಲದಲ್ಲಿ ವಾಸಿಸುತ್ತಿದ್ದೇವೆ. ನಾವುಗಳು ಒಟ್ಟಾಗಿ ಸಮಸ್ಯೆಗೆ ಪರಿಹಾರ ಹುಡುಕುವ ಕಾರ್ಯ ಈಗ ಮಾಡಬೇಕಿದೆ, ರೈತರು ನಮ್ಮ ದೇಶದ ಬೆನ್ನೆಲುಬು, ಬೇರೆಯವರು ನಮ್ಮನ್ನು ಒಡೆಯದಿರುವಂತೆ ನೋಡಿಕೊಳ್ಳೋಣ' ಎಂದಿದ್ದಾರೆ. ತಮ್ಮ ಟ್ವೀಟ್ಗೆ ಯಾರೂ ಕಮೆಂಟ್ ಮಾಡದಂತೆ ಬ್ಲಾಕ್ ಮಾಡಿ ಟ್ವೀಟ್ ಮಾಡಿದ್ದಾರೆ ಕರಣ್ ಜೋಹರ್.
Recommended Video

ಸುನಿಲ್ ಶೆಟ್ಟಿ ಸಹ ಟ್ವೀಟ್ ಮಾಡಿದ್ದಾರೆ
ನಟ ಸುನೀಲ್ ಶೆಟ್ಟಿ ಹಾಗೂ ಇನ್ನೂ ಕೆಲವರು ಇದೇ ವಿಷಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ಬಾಲಿವುಡ್ ನಟರ ಟ್ವೀಟ್ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಮಾಡಿದ್ದಕ್ಕೆ ಬಿಜೆಪಿ ಐಟಿ ಸೆಲ್ನಿಂದ ನಿಮ್ಮ ಖಾತೆಗೆ 2 ರು ಪಾವತಿಯಾಯಿತೆ ಎಂದು ಪ್ರಶ್ನಿಸಿದ್ದಾರೆ. ಎರಡು ತಿಂಗಳಿನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಆಗ ಏಕೆ ಮಾತನಾಡಲಿಲ್ಲ ಎಂದೂ ಸಹ ಹಲವರು ಪ್ರಶ್ನಿಸಿದ್ದಾರೆ.


Click it and Unblock the Notifications











