ಅಕ್ಷಯ್ ಗೆ ಭೂಗತ ಜಗತ್ತಿನಿಂದ ಬೆದರಿಕೆ ಕರೆ ಏಕೆ?
ಬಾಲಿವುಡ್ ಗೂ ಭೂಗತ ಜಗತ್ತಿಗೂ ಸಿಹಿ ಕಹಿ ಸಂಬಂಧ ಎಂದಿನಿಂದಲೋ ಇದ್ದೇ ಇದೆ. ಆಗಾಗ ನಾಯಕ ನಟ, ನಿರ್ಮಾಪಕರಿಗೆ ಕೆಲವೊಮ್ಮೆ ನಿರ್ದೇಶಕರಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆಗಳು ಬರುವುದು ಮಾಮೂಲಿಯಾಗಿದೆ.
ಆದರಲ್ಲೂ ಭೂಗತ ಜಗತ್ತಿನ ಕಥೆಯುಳ್ಳ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಾಯಕ ನಟ ಹಾಗೂ ನಿರ್ಮಾಪಕರಿಗೆ ಬೆದರಿಕೆ ಕರೆ ಮಾಮೂಲಿ. ಇತ್ತೀಚೆಗಷ್ಟೇ ಚಿತ್ರಕರ್ಮಿ ರಾಮ್ ಗೋಪಾಲ್ ವರ್ಮಾ ಅವರಿಗೆ ಬೆದರಿಕೆ ಬಂದಿತ್ತು. ಈಗ ಕಿಲಾಡಿ ಅಕ್ಷಯ್ ಕುಮಾರ್ ಗೂ ಬೆದರಿಕೆ ಕರೆ ಬಂದಿದೆ.
ಬಾಲಿವುಡ್ ನಟ ನಟಿಯರ ಜತೆ ಭೂಗತ ಜಗತ್ತಿನ ಮಂದಿ ಬಿಂದಾಸ್ ಗಾಗಿ ಪಾರ್ಟಿ ಮಾಡುವ ವಿಡಿಯೋಗಳು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಸ್ಟಾರ್ ಗಳ ಜತೆ ಅಸಲಿ ಡಾನ್ ಗಳು ಸಂಪರ್ಕ ಇಟ್ಟುಕೊಂಡಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ಬೆದರಿಕೆ ಕರೆ ಬಂದಾಗ ಎಂಥಾ ನಟ, ನಟಿಯಾದರೂ ಬೆಚ್ಚಿಬೀಳುತ್ತಾರೆ.
ಬೆದರಿಕೆ ಕರೆ ಬಂದ ತಕ್ಷಣ ಅಕ್ಷಯ್ ಕುಮಾರ್ ಅವರು ಜುಹು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಕ್ಟೋಬರ್ 22 ರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅಕ್ಷಯ್ ಕುಮಾರ್ ದೂರು ನೀಡಿದ ಮೇಲೆ ಪೊಲೀಸರು ಅಕ್ಷಯ್ ಗೆ ಸೂಕ್ತ ಭದ್ರತೆ ಒದಗಿಸಿದ್ದಾರೆ.
ಅಕ್ಷಯ್ ಟಾರ್ಗೆಟ್ ಏಕೆ?: ಅಕ್ಷಯ್ ಅವರು ಇತ್ತೀಚೆಗೆ ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ ದೊಬಾರಾ ಚಿತ್ರದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜತೆಗೆ ಅಕ್ಷಯ್ ಇತ್ತೀಚೆಗೆ ಮೋದಿ ಅವರ ಜತೆ ಕಾಣಿಸಿಕೊಂಡಿದ್ದು ಅವರ ವಿರುದ್ಧ ಹಲವು ತಿರುಗಿ ಬೀಳುವಂತೆ ಮಾಡಿದೆ.
ಮೋದಿ ಜತೆ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಾಜಿ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರ ಮೇಲೆ ವೃಥಾ ಆರೋಪಗಳು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಅಕ್ಷಯ್ ಕೂಡಾ ಇದೇ ರೀತಿ ತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.

ಹಣ ಕೀಳಲು ನಿರ್ಧಾರ
ಇತ್ತೀಚೆಗೆ ಹಲವು ಚಿತ್ರಗಳು ಹಿಟ್ ಆಗಿರುವುದರಿಂದ ಅಕ್ಷಯ್ ಗಳಿಕೆ ಕೂಡಾ ಹೆಚ್ಚಾಗಿದೆ. ಹೀಗಾಗಿ ಅಕ್ಷಯ್ ಅವರಿಂದ ಹಣ ಕೀಳಲು ಭೂಗತ ಜಗತ್ತು ನಿರ್ಧರಿಸಿದೆ ಎನ್ನಲಾಗಿದೆ. ಅಕ್ಷಯ್ ದುಡ್ಡು ನೀಡದಿದ್ದರೆ ತಲೆ ತೆಗೆಯುವುದಾಗಿ ಬೆದರಿಕೆ ಒಡ್ಡಲಾಗಿದೆ. ಇದರ ಜತೆಗೆ ಅಕ್ಷಯ್ ಇತ್ತೀಚೆಗೆ ಮೋದಿ ಅವರ ಜತೆ ಕಾಣಿಸಿಕೊಂಡಿದ್ದು ಅವರ ವಿರುದ್ಧ ಹಲವು ತಿರುಗಿ ಬೀಳುವಂತೆ ಮಾಡಿದೆ.
ಭೂಗತ ಜಗತ್ತಿನ ಕಥೆ ಆಧಾರಿತ ಸತ್ಯ, ಸತ್ಯ 2, ಒನ್ಸ್ ಅಪನ್ ಎ ಟೈಮ್ ಇನ್ ಮುಂಬೈ, ಕಂಪನಿ ಸೇರಿದಂತೆ ಹಲವು ಚಿತ್ರಗಳ ನಿರ್ಮಾಪಕರು, ನಟರಿಗೆ ಇದೇ ರೀತಿ ಬೆದರಿಕೆ ಕರೆಗಳು ಬಂದಿವೆ.

ಮೋದಿ ಜತೆ ಆಪ್ತತೆ
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಅಕ್ಟೋಬರ್ ತಿಂಗಳ ಮೊದಲ ಬಾರಿ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಭೇಟಿಯಾಗಿದ್ದರು.
ಗುಜರಾತಿನಲ್ಲಿ ಕ್ರೀಡೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಆಗಬೇಕಿರುವ ಸುಧಾರಣೆಗಳ ಬಗ್ಗೆ ನರೇಂದ್ರ ಮೋದಿ ಅವರು ಇಬ್ಬರು ನಟರಿಗೆ ವಿವರಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ತಮ್ಮ ಕೈಲಾಗುವ ನೆರವು ನೀಡಲು ಒಪ್ಪಿಕೊಂಡಿದ್ದರು.

ಕ್ರೀಡೆ ಜತೆ ಯೋಗ
ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆ ಜತೆಗೆ ಯೋಗ ವಿಶ್ವವಿದ್ಯಾಲಯ ಸ್ಥಾಪನೆ ಬಗ್ಗೆ ಕೂಡಾ ಅಕ್ಷಯ್ ಹಾಗೂ ಪರೇಶ್ ಜತೆ ಮೋದಿ ಅವರು ಮಾತುಕತೆ ನಡೆಸಿದ್ದರು.
ಮೋದಿ ಅವರ ಜತೆ ಆಪ್ತತೆ ಬೆಳೆಸಿಕೊಂಡವರಿಗೂ ಉಗ್ರರು ಹಾಗೂ ಭೂಗತ ಜಗತ್ತಿನಿಂದ ಅಪಾಯವಿದೆ ಎಂದು ಗುಪ್ತಚರ ಇಲಾಖೆ ಸೂಚನೆ ನೀಡು ಬಹಳ ದಿನಗಳಾಗಿವೆ.

ಅಕ್ಷಯ್ ಆಯ್ಕೆ ಏಕೆ?
ದೇಶದ ಅನೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಕ್ರೀಡೆಗೆ ಮಹತ್ವ ನೀಡುವಂತೆ ಮಾಡಲು ಅಕ್ಷಯ್ ಅಭಿಯಾನ ನಡೆಸಿದ್ದಾರೆ. ಅದರಲ್ಲೂ martial art ವಿಭಾಗಕ್ಕೆ ಸೇರುವ ಕರಾಟೆ, ಕುಂಗು ಫು ಜತೆಗೆ ಟೇಕ್ವಾಂಡೋ, ಕಿಕ್ ಬಾಕ್ಸಿಂಗ್, ಮುಂತಾದ ಸಮರ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಚಿತ್ರರಂಗಕ್ಕೆ ಕಾಲಿಡುವ ಮುನ್ನ ಕರಾಟೆ ಕಲೆ ಹೇಳಿಕೊಡುವ ಶಿಕ್ಷಕರಾಗಿ ಅನುಭವ ಹೊಂದಿರುವ ಅಕ್ಷಯ್ ಕುಮಾರ್ ಅವರು ಜ್ಯೂಡೋ ಹಾಗೂ ಕರಾಟೆ ಕ್ರೀಡೆಗಳ ಅಭಿವೃದ್ಧಿಗೆ ಶ್ರಮಿಸಲು ಪಣ ತೊಟ್ಟಿದ್ದಾರೆ. ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶಕ್ಕೆ ಇದು ಪೂರಕವಾಗಲಿದೆ ಎಂದು ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications










