'ಅಯ್ಯ' ಎನ್ನುತ್ತಾ ಬಂದ ಬಾಲಿವುಡ್ ಪ್ರತಿಭೆ
ನಿಂಬೆಹುಳಿ ಕನ್ನಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿದ್ದ ಹಿಂದಿ ಚಿತ್ರರಂಗದ ಅದ್ಭುತ ಪ್ರತಿಭೆ ಅನುಪಮ್ ಖೇರ್ ಅವರು ಈಗ 'ಅಯ್ಯ' ಎನ್ನುತ್ತಾ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅನುಪಮ್ ಖೇರ್ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂಬುದರ ಬಗ್ಗೆ ಗಾಂಧಿನಗರದಲ್ಲಿ ಭಾರಿ ಚರ್ಚೆಯಂತೂ ನಡೆದಿದೆ.
ಸುಭಾಷ್ ಘಾಯ್ ಅವರ ಮುಕ್ತಾ ಆರ್ಟ್ ನಿರ್ಮಾಣ ಮೊದಲ ಕನ್ನಡ ಚಿತ್ರ ನಿಂಬೆಹುಳಿಯಲ್ಲೇ ನಟಿಸುವ ಅವಕಾಶ ವಂಚಿತ ಅನುಪಮ್ ರನ್ನು ಮತ್ತೆ ಯಾರಪ್ಪ ಕನ್ನಡ ಚಿತ್ರಕ್ಕೆ ಕರೆ ತಂದಿದ್ದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಎದುರಿಗೆ ಸಿಗುವುದೇ ಯಶಸ್ವಿ ನಿರ್ದೇಶಕ ಓಂ ಪ್ರಕಾಶ್ ರಾವ್. [ಈ ಮುಂಚೆ ಸುಳಿವು ಕೊಟ್ಟಿದ್ದರು]
ಅಯ್ಯ 2 ಚಿತ್ರದ ಪಾತ್ರವೊಂದಕ್ಕೆ ಅನುಪಮ್ ಖೇರ್ ಅವರೇ ಬೇಕು ಎಂದು ಪಟ್ಟು ಹಿಡಿದು ಮುಂಬೈನಿಂದ ಬೆಂಗಳೂರಿಗೆ ಅನುಪಮ್ ರನ್ನು ಕರೆಸಿಕೊಳ್ಳುತ್ತಿದ್ದಾರೆ ನಮ್ಮ ಓಂ. ಅಯ್ಯ 2 ಹೆಸರಿ ಕೇಳಿದಾಕ್ಷಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಿಟ್ ಚಿತ್ರ ಅಯ್ಯ ನೆನಪಾಗುತ್ತದೆ ನಿಜ. ಆದರೆ, ಅಯ್ಯ 2 ನಲ್ಲಿ ಪ್ರಧಾನ ಪಾತ್ರದಲ್ಲಿ ಚಿರಂಜೀವಿ ಸರ್ಜಾ, ಐಶ್ವರ್ಯ ದೇವನ್ ಕಾಣಿಸಿಕೊಳ್ಳುತ್ತಿದ್ದಾರೆ.

ಅಯ್ಯ 2 ಪಕ್ಕಾ ಮಾಸ್ ಮನರಂಜನೆ ಚಿತ್ರ. ಅನುಪಮ್ ಖೇರ್ ಅವರಿಗೆ ಈಗಾಗಲೇ ಕಥೆ ಹೇಳಿ ಒಪ್ಪಿಸಲಾಗಿದೆ. ಅಯ್ಯ 2 ನಲ್ಲಿ ಸಚಿವನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಶೂಟಿಂಗ್ ಶೀಘ್ರದಲ್ಲೇ ಆರಂಭಿಸುತ್ತೇವೆ ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
ಬಾಲಿವುಡ್ ನ ಸಾಹಸ ನಿರ್ದೇಶಕ ವಿಜಯನ್ ಅವರು ಅಯ್ಯ 2 ಗಾಗಿ ವಿಶೇಷ ಸ್ಟಂಟ್ ಗಳನ್ನು ರೂಪಿಸುತ್ತಿದ್ದಾರಂತೆ. ಚಿರಂಜೀವಿ ಸರ್ಜಾ ದಿನನಿತ್ಯ ಹೆಚ್ಚಿನ ಪರಿಶ್ರಮ ವಹಿಸಿ ಫೈಟಿಂಗ್ ತರಬೇತಿ ಪಡೆಯುತ್ತಿದ್ದಾರಂತೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಚಿರು ತಮ್ಮ ಎಂದಿನ ಪ್ಲೇ ಬಾಯ್ ಇಮೇಜ್ ಕೂಡಾ ಚಿತ್ರದಲ್ಲಿ ಇಣುಕುವಂತೆ ಮಾಡಿದ್ದಾರೆ ಎಂಬ ಸುದ್ದಿಯಿದೆ. ದಂಡಂ ದಶಗುಣಂ ರೀತಿಯಲ್ಲಿ ಮುಖಗಂಟಿಕ್ಕಿಕೊಳ್ಳುವ ಪೊಲೀಸ್ ಅಲ್ಲವಂತೆ, ಜಾಲಿ ಮೂಡ್ ನಲ್ಲಿರೋ ದುಷ್ಟ ಶಿಕ್ಷಕ ಪೊಲೀಸ್ ಕಾಪ್ ಎಂದು ಓಂ ಹೇಳಿಕೊಂಡಿದ್ದಾರೆ. ಓಂ ಅವರ ಚಿತ್ರ ಎಂದ ಮೇಲೆ ಪರಿಪೂರ್ಣ ಮನರಂಜನೆಗೇನೂ ಮೋಸ ಇರುವುದಿಲ್ಲ ಎಂಬ ಮಾತಿದೆ. ಯಾವುದಕ್ಕೂ ಕಾದು ನೋಡೋಣ.


Click it and Unblock the Notifications











