Aryan Khan Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ನಿಧನ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದೇಶದಾದ್ಯಂತ ಅತಿಯಾಗಿ ಚರ್ಚಿತವಾಗಿತ್ತು. ಆರಂಭದಲ್ಲಿ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಎಂದಾಗಿದ್ದ ಈ ಪ್ರಕರಣದಲ್ಲಿ ತನಿಖೆ ಚುರುಕುಗೊಂಡಂತೆ ಹಲವು ಆಯಾಮಗಳು ಹೊರಗೆ ಬಂದವು.
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗಲೇ ಪ್ರಮುಖ ತಿರುವು ತೆಗೆದುಕೊಂಡಿತ್ತು. ಈ ತಿರುವಿಗೆ ಕಾರಣವಾಗಿದ್ದು ಪ್ರಭಾಕರ್ ಸೈಲ್ ಎಂಬ ಸಾಕ್ಷಿ. ಆದರೆ ಈ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ನಿನ್ನೆ ರಾತ್ರಿ ಹಠಾತ್ತನೆ ನಿಧನವಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಎಂದು ಹೇಳಲಾಗಿದೆ.
ಚೆಂಬೂರಿನ ಮಹಲ್ ಪ್ರದೇಶದಲ್ಲಿ ಪ್ರಭಾಕರ್ ಸೈಲ್ ವಾಸವಿದ್ದರು, ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ ಒಳಗಾದರು ಎನ್ನಲಾಗುತ್ತಿದೆ. ಅವರ ಮೃತದೇಹವನ್ನು ಇಂದೆ 11 ಗಂಟೆಗೆ ಅಂತಿಕ ಪ್ರಿಯೆಗೆ ಒಳಪಡಿಸಲಾಗುತ್ತದೆ.
Recommended Video


ಆರ್ಯನ್ ಖಾನ್ ಪ್ರಕರಣದಲ್ಲಿ ಪ್ರಭಾಕರ್ ಸೈಲ್ ಪ್ರಮುಖ ಸಾಕ್ಷಿಯಾಗಿದ್ದರು. ಆರ್ಯನ್ ಖಾನ್ ಬಂಧನ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ಖಾಸಗಿ ಡಿಟೆಕ್ಟಿವ್' ಎಂದು ಹೇಳಿಕೊಂಡಿದ್ದ ಕಿರಣ್ ಗೋಸಾವಿಯ ಡ್ರೈವರ್ ಆಗಿದ್ದ ಪ್ರಭಾಕರ್ ಸೈಲ್, ಆರ್ಯನ್ ಖಾನ್ ಅನ್ನು ಅಕ್ಟೋಬರ್ 02 ರಂದು ವಶಪಡಿಸಿಕೊಂಡ ಬಳಿಕ ಕಿರಣ್ ಗೋಸಾವಿ, ಶಾರುಖ್ ಖಾನ್ರ ಮ್ಯಾನೇಜರ್ ಬಳಿ ಕೋಟ್ಯಂತರ ರುಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗಿ ಹಾಗೂ ಶಾರುಖ್ ಖಾನ್ರ ಮ್ಯಾನೇಜರ್ನಿಂದ ಹಣ ಪಡೆದಿದ್ದಾಗಿ ಸಹ ಹೇಳಿದ್ದರು. ಹಣ ತುಂಬಿದ್ದ ಬ್ಯಾಗನ್ನು ತಾವೇ ಕೊಂಡು ಬಂದು ಮತ್ತೊಬ್ಬ ವ್ಯಕ್ತಿಗೆ ನೀಡಿದ್ದಾಗಿ ಹೇಳಿದ್ದರು.
ಅಲ್ಲದೆ ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನ (ಅಕ್ಟೋಬರ್ 02) ರಂದು ಸಾಕ್ಷಿಯಾಗಿ ಪ್ರಭಾಖರ್ ಸೈಲ್ ಸಹಿ ಮಾಡಿದ್ದರು. ಆದರೆ ಅಂದು ತಾನು ಸ್ಥಳದಲ್ಲಿ ಹಾಜರಿರಲಿಲ್ಲವೆಂದು ಅದರ ಮಾರನೇಯ ದಿನ ಕಿರಣ್ ಗೋಸಾವಿ ಕರೆ ಮಾಡಿದ ಬಳಿಕ ಮುಂಬೈಗೆ ಬಂದೆನೆಂದು ಹೇಳಿದ್ದರು. ಪ್ರಭಾಕರ್ ಸೈಲ್ ಹೇಳಿಕೆಯಿಂದ, ಆರ್ಯನ್ ಖಾನ್ ಅನ್ನು ಬಂಧಿಸಿದ್ದ ಎನ್ಸಿಬಿ ಮೇಲೆ ಅನುಮಾನ ಬರುವಂತೆ ಮಾಡಿದ್ದವು.
ಪ್ರಭಾಕರ್ ಸೈಲ್ ಹೇಳಿಕೆಯಿಂದ ಎನ್ಸಿಬಿ ವಿರುದ್ಧ ಅನುಮಾನ ಎದ್ದ ಕಾರಣ ಎನ್ಸಿಬಿಯ ಸಮೀರ್ ವಾಂಖೆಡೆಯನ್ನು ವರ್ಗಾವಣೆ ಮಾಡಿ ಪ್ರಕರಣವನ್ನು ಎನ್ಸಿಬಿಯ ವಿಶೇಷ ತನಿಖಾ ದಳಕ್ಕೆ ವಹಿಸಲಾಯಿತು. ಇದೀಗ ನ್ಯಾಯಾಲಯದ ವಿಚಾರಣೆಯಲ್ಲಿ ಆರ್ಯನ್ ಖಾನ್ ಡ್ರಗ್ಸ್ ಸೇವಿಸಿರಲಿಲ್ಲವೆಂದು, ಆರ್ಯನ್ ಬಳಿ ಡ್ರಗ್ಸ್ ದೊರೆತಿಲ್ಲವೆಂದು ಸಾಬೀತಾಗಿದೆ.


Click it and Unblock the Notifications











