ಚಿತ್ರಗಳಲ್ಲಿ: ಆಕಾಲಿಕ ಸಾವನ್ನಪ್ಪಿದ ತಾರೆಯರ ನೆನಪು
ಥಳಕು ಬಳಕಿನ ಲೋಕವಾದ ಬಾಲಿವುಡ್ ನಲ್ಲಿ ಅಕಾಲಿಕ ಮರಣಕ್ಕೀಡಾದ ತಾರೆಯರ ಪಟ್ಟಿಗೆ ಜಿಯಾ ಖಾನ್ ಹೊಸದಾಗಿ ಸೇರ್ಪಡೆಗೊಂಡಿದ್ದಾಳೆ. ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪಿದ ದುರಂತ ನಾಯಕ, ನಾಯಕಿಯರ ಪಟ್ಟಿ ಬೆಳೆಯುತ್ತಿರುವುದು ದುರದೃಷ್ಟಕರ
ತಾರೆಯರದ್ದು ಬರೀ ಐಷಾರಾಮಿ ಜೀವನ ಎಂದುಕೊಂಡರೆ ತಪ್ಪಾಗುತ್ತದೆ. ಹಲವಾರು ಸಿನಿಮಾ ನಟ, ನಟೀಯರ ಖಾಸಗಿ ಬದುಕು ಸಿನಿಮಾ ಚಿತ್ರಕಥೆಗಳಿಗಿಂತ ಹೆಚ್ಚಿನ ತಿರುವು ಪಡೆದಿರುತ್ತದೆ.
ನೋವುಗಳನ್ನು ನುಂಗಿಕೊಂಡು ತೆರೆಯ ಮೇಲೆ ಎಲ್ಲರನ್ನು ನಗಿಸುವ 'ಜೀನಾ ಯಹಾ ಮರ್ನಾ ಯಹಾ ಇಸ್ಕೆ ಸಿವಾ ಜಾನಾ ಕಹಾ' ಜೋಕರ್ ಪಾತ್ರಧಾರಿ ಶೋ ಮ್ಯಾನ್ ರಾಜ್ ಕಪೂರ್ ಹೇಳಿದಂತೆ ಬಾಳಲು ಸಾಧ್ಯವಾಗದವರು ಸಣ್ಣ ವಯಸ್ಸಿನಲ್ಲೇ ತಮ್ಮ ಜೀವನ ಪಯಣ ಅಂತ್ಯಕಾಣಿಸಿದ್ದಾರೆ.
ಪರ್ವೀನ್ ಬಾಬಿ, ಜಿಯಾ ಖಾನ್, ದಿವ್ಯಾ ಭಾರತಿ, ಸ್ಮಿತಾ ಪಾಟೀಲ್, ಸಂಜೀವ್ ಕುಮಾರ್, ಮಧುಬಾಲಾ, ಗುರುದತ್ ಸೇರಿದಂತೆ ಅನೇಕ ತಾರೆಗಳ ಚಿತ್ರಗಳು ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಾವು ಎದುರಾದಾಗ ತನ್ನವರಿಲ್ಲದೆ ಕೊರಗಿ ಮೃತಪಟ್ಟ ತಾರೆಯರು ಕೂಡಾ ಈ ಸರಣಿಯಲ್ಲಿದ್ದಾರೆ. ದುರಂತ ಅಂತ್ಯ ಕಂಡ ಆಕಾಲಿಕ ಸಾವಿಗೆ ಶರಣೆಂದ ತಾರೆಯರನ್ನು ಮತ್ತೊಮ್ಮೆ ನೋಡಿ.

ಜಿಯಾ ಖಾನ್ (1988-2013)
ಮುಂಬೈನ ಜುಹು ಪ್ರದೇಶದಲ್ಲಿರುವ ತನ್ನ ಸಾಗರ್ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ. ಬಾಲಿವುಡ್ ವೃತ್ತಿ ಬದುಕಿನಲ್ಲಿ ಏರಿಳಿತ, ಗೆಳೆಯರಿಂದಾದ ನೋವು ಕಾರಣ ಎಂಬ ಶಂಕೆ, ನಿಶ್ಯಬ್ದ್, ಹೌಸ್ ಫುಲ್, ಗಜನಿ ಈಕೆ ನಟಿಸಿದ ಚಿತ್ರಗಳು

ದಿವ್ಯಾ ಭಾರತಿ (1974-1993)
ದಿವ್ಯ ಓಂ ಪ್ರಕಾಶ್ ಭಾರತಿ 25.02.1974 ರಲ್ಲಿ ಮುಂಬೈನಲ್ಲಿ ಜನಿಸಿದರು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ 22 ಚಿತ್ರಗಳಲ್ಲಿ ನಟಿಸಿದ್ದ ಈಕೆ ಸಾಜಿದ್ ನಾಡಿಯಾವಾಲ ಅವರನ್ನು ಮದುವೆಯಾಗಿದ್ದರು.
ಬೊಬ್ಬಿಲಿ ರಾಜ, ರೌಡಿ ಅಲ್ಲಡು, ಶೋಲಾ ಔರ್ ಶಬ್ನಂ ಮುಂತಾದ ಯಶಸ್ವಿ ಚಿತ್ರದಲ್ಲಿ ನಟಿಸಿದ್ದ ದಿವ್ಯ ಭಾರತಿ 05.04.1993ರಲ್ಲಿ (19ನೇ ವಯಸ್ಸಿನಲ್ಲಿ) ಸಾವನ್ನಪ್ಪಿದರು. ಈಕೆಯ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವುದು ಈಗಿನವರೆಗೂ ಸ್ಪಷ್ಟವಾಗಿಲ್ಲ.

ಸ್ಮಿತಾ ಪಾಟೀಲ್ (1955-1986)
ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಪ್ರತಿಭಾನ್ವಿತ ನಟಿ ಸ್ಮಿತಾ ಪಾಟೀಲ್ ಜನಿಸಿದ್ದು 17.10.1955ರಲ್ಲಿ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪ್ರಶಸ್ತಿ ಗಳಿಸಿದ್ದ ಸ್ಮಿತಾ 13.12.1986ರಲ್ಲಿ (31ನೇ ವಯಸ್ಸಿನಲ್ಲಿ) ನಿಧನರಾದರು. ನಿಶಾಂತ್, ಆಕ್ರೋಶ್, ನಮಕ್ ಹಲಾಲ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಈಕೆ ಹಿಂದಿ ನಟ ರಾಜ್ ಬಬ್ಬರ್ ಅವರನ್ನು ಮದುವೆಯಾಗಿದ್ದರು.

ಪರ್ವೀನ್ ಬಾಬಿ (1949-2005)
70 ರ ದಶಕದಲ್ಲಿ ಹಿಂದಿ ಚಿತ್ರರಂಗಕ್ಕೆ ಗ್ಲಾಮರಸ್ ಟಚ್ ನೀಡಿದ ಪರ್ವೀನ್ ಬಾಬಿ ಅವರು ದೀವಾರ್, ನಮಕ್ ಹಲಾಲ್, ಅಮರ್ ಅಕ್ಬರ್ ಅಂಟೋನಿ ಹಾಗೂ ಶಾನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಪರ್ವೀನ್ ಬಾಬಿ ಸಾವಿನ ನಿಗೂಢತೆ ಇನ್ನೂ ಬಗೆಹರಿದಿಲ್ಲ. ಈಕೆ ಕೂಡಾ ಜುಹು ಪ್ರದೇಶದಲ್ಲೇ ಸಾವನ್ನಪ್ಪಿದ್ದರು. ಸಾಯುವ ವೇಳೆ ಜತೆಗಾರರಿಲ್ಲದೆ ಏಕಾಂಗಿಯಾಗಿದ್ದರು ಎಂಬುದು ಗಮನಾರ್ಹ

ಮಧು ಬಾಲಾ (1933-1969 )
ಭಾರತೀಯ ಸಿನಿಮಾದ 'ಅನಾರ್ಕಲಿ' ಎಂದೇ ಹೆಸರಾಗಿದ್ದ ಅಪ್ರತಿಮ ಸುಂದರಿ, ಮುಮ್ತಾಜ್ ಜಹಾನ್ ಆಲಿಯಾಸ್ ಮಧುಬಾಲ.
14.02.1933ರಲ್ಲಿ ದೆಹಲಿಯಲ್ಲಿ ಜನಿಸಿದ ಈಕೆ ತನ್ನ 36ನೇ ವಯಸ್ಸಿನಲ್ಲಿ ಅಂದರೆ 23.02.1969ರಲ್ಲಿ (33ನೇ ವಯಸ್ಸಿನಲ್ಲಿ) ಇಹಲೋಕ ತ್ಯಜಿಸಿದರು. ಬಸಂತಿ, ಮೊಗಲ್-ಇ-ಆಜಾಂ, ಚಲ್ತಿಕಾ ನಾಮ್ ಗಾಡಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಮಧುಬಾಲ ಕಿಶೋರ್ ಕುಮಾರ್ ಅವರನ್ನು ವರಿಸಿದ್ದರು.
ಗುರುದತ್ (1925-1964)
ಗುರುದತ್ ಶಿವಶಂಕರ್ ಪಡುಕೋಣೆ 09.07.1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಚಿತ್ರರಂಗ ಕಂಡ ಓರ್ವ ಅಮೋಘ ನಟ, ನಿರ್ದೇಶಕ ಹಾಗೂ ನಿರ್ಮಾಪಕ
ಹಿನ್ನೆಲೆ ಗಾಯಕಿಯಾಗಿದ್ದ ಗೀತಾ ರಾಯ್ ಅವರನ್ನು ಗುರುದತ್ ಲಗ್ನವಾಗಿದ್ದರು. ಮದ್ಯವ್ಯಸನಿಯಾಗಿದ್ದ ಗುರುದತ್ 10.10.1964ರಲ್ಲಿ (38ನೇ ವಯಸ್ಸಿನಲ್ಲಿ) ಸಾವನ್ನಪ್ಪಿದರು. ಇವರ ಸಾವು ಆತ್ಮಹತ್ಯೆ ಅನುಮಾನವೂ ಇದೆ
ಪ್ಯಾಸಾ, ಸುಹಾಗನ್, ಸಾಹಿಬ್ ಬೀಬಿ ಔರ್ ಗುಲಾಮ್, ಚೌದ್ವೀ ಕಾ ಚಾಂದ್ ಇವರಿಗೆ ಹೆಸರು ತಂದುಕೊಟ್ಟ ಚಿತ್ರಗಳು

ನಿರ್ಮಲ್ ಪಾಂಡೆ (1962-2010)
48ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ನಿರ್ಮಲ್ ಪಾಂಡೆ ಅವರು ಬ್ಯಾಂಡಿಟ್ ಕ್ವೀನ್ ಚಿತ್ರದಲ್ಲಿನ ತಮ್ಮ ನಟನೆಯಿಂದ ಜನಪ್ರಿಯತೆ ಗಳಿಸಿದ್ದರು.

ಮೀನಾ ಕುಮಾರಿ (1932-1972)
ಮೇಹಜಬೀನ್ ಆಲಿಯಾಸ್ ಮೀನಾ ಕುಮಾರಿ.01.08.1932ರಲ್ಲಿ ಮುಂಬೈನಲ್ಲಿ ಜನಿಸಿದರು.
ಮೀನಾ ಕುಮಾರಿ ಪರಿಣೀತಾ, ಬೈಜು ಭಾವ್ರಾ, ಚಾರ್ ದಿಲ್ ಚಾರ್ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಕೀಜಾ ಮುಂತಾದ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಜನಪ್ರಿಯರಾಗಿದ್ದರು. ಕುಡಿತಕ್ಕೆ ಶರಣಾಗಿದ್ದ ಮೀನಾ ಕುಮಾರಿ 31.03.1972 (39ನೇ ವಯಸ್ಸಿನಲ್ಲಿ) ದುರಂತ ಸಾವನ್ನಪ್ಪಿದರು.
ಗೀತಾ ಬಾಲಿ (1930-1965)
ಹರಿಕೀರ್ತನ್ ಕೌರ್ ಆಲಿಯಾಸ್ ಗೀತಾ ಬಾಲಿ ಜನಿಸಿದ್ದು ಪಂಜಾಬಿನ ಅಮೃತಸರದಲ್ಲಿ. ಬದ್ನಾಮಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಬಂದ ಈಕೆ ಕಪೂರ್ ಮನೆತನದ ನಟ ಶಮ್ಮಿ ಕಪೂರ್ ಅವರನ್ನು ಮದುವೆಯಾದರು.
21.01.1965 (35ನೇ ವಯಸ್ಸಿನಲ್ಲಿ) ಸಾವನ್ನಪ್ಪಿದ ಈಕೆಯ ಖ್ಯಾತ ಸಿನಿಮಾಗಳೆಂದರೆ ಬಾಜಿ, ಭಗವಾನ್ ದಾದಾ, ಜಾಲ್.
ತರುಣಿ ಸಚದೇವ್ (1998-2012)
ನೇಪಾಳದಲ್ಲಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ತರುಣಿ ಸಚದೇವ್ ರಸ್ನಾ ಗರ್ಲ್ ಆಗಿ ಜನಪ್ರಿಯತೆ ಗಳಿಸಿದ್ದಳು.

ಪ್ರಿಯ ರಾಜವಂಶ್ (1937-2000)
ವೀರಾ ಸುಂದರ್ ಸಿಂಗ್ ಅಲಿಯಾಸ್ ಪ್ರಿಯಾ ರಾಜ್ ವಂಶ್ ಅವರು ಹೀರಾ ರಾಂಜಾ(1970), ಹಸ್ತೆ ಜಖಂ(1973) ಚಿತ್ರಗಳಲ್ಲಿ ನಟಿಸಿದರು. ಚೇತನ್ ಆನಂದ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದರು.
ಚೇತನ್ ಆನಂದ್ ಮರಣ ನಂತರ ಪುತ್ರರೊಂದಿಗೆ ಮುಂಬೈನಲ್ಲಿ ವಾಸವಾಗಿದ್ದರು. ಮಾರ್ಚ್ 27, 2000ರಂದು ಜುಹುವಿನಲ್ಲಿರುವ ಚೇತನ್ ಆನಂದ್ ಅವರ ರಿಯ ಪಾರ್ಕ್ ಬಂಗಲೆಯಲ್ಲಿ ಈಕೆ ಕೊಲೆಯಾದರು. ಸಾವಿಗೆ ಆಸ್ತಿ ವಿವಾದವೇ ಕಾರಣ ಎನ್ನಲಾಗಿತ್ತು.


Click it and Unblock the Notifications











