ದಕ್ಷಿಣ ಭಾರತ ಸಿನಿಮಾಗಳಿಗೆ ಹೋಲಿಸಿದರೆ ಬಾಲಿವುಡ್ ದುರ್ಬಲ ಎಂದ ಬಿ-ಟೌನ್ ನಿರ್ದೇಶಕ
ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ ಎಂಬ ಮಿಥ್ಯೆ ಕಳೆದ ಮೂರು ವರ್ಷಗಳಲ್ಲಿ ಕಳಚಿ ಬಿದ್ದಿದೆ.
ದಕ್ಷಿಣ ಭಾರತದ ಸಿನಿಮಾ ಸುನಾಮಿ ಮುಂದೆ ಬಾಲಿವುಡ್ ತತ್ತರಿಸಿದೆ. ಅಕ್ಷಯ್ ಕುಮಾರ್, ಆಮಿರ್ ಖಾನ್ ಅಂಥಹಾ ಸ್ಟಾರ್ ನಟರು ಸಹ ಮಂಡಿ ಊರಿದ್ದಾರೆ.
ಕೇವಲ ಮಹಾರಾಷ್ಟ್ರ ಮಾತ್ರವಲ್ಲ ಹಿಂದಿ ಭಾಷಿಕ ಉತ್ತರ ಪ್ರದೇಶ, ಬಿಹಾರ, ಗುಜರಾತ್, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಸಹ ಹಿಂದಿ ಸಿನಿಮಾಗಳನ್ನು ದಕ್ಷಿಣ ಭಾರತದ ಸಿನಿಮಾಗಳು ಬಗ್ಗು ಬಡಿದು ಮಾರುಕಟ್ಟೆ ಆಕ್ರಮಿಸಿವೆ.
ಬಾಲಿವುಡ್ನ ಹಲವರು ದಕ್ಷಿಣ ಭಾರತ ಸಿನಿಮಾಗಳ ಈ ಏಳ್ಗೆಯನ್ನು ಅಸೂಯೆಯ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಆದರೆ ಕೆಲವು ಬಾಲಿವುಡ್ಡಿಗರು ಮಾತ್ರ ಬಾಲಿವುಡ್ನ ವಿಫಲತೆಯನ್ನು ಒಪ್ಪಿಕೊಂಡಿದ್ದಾರೆ ಅದರಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಒಬ್ಬರು.
ದಕ್ಷಿಣ ಭಾರತದ ಹಲವು ನಿರ್ದೇಶಕರೊಟ್ಟಿಗೆ ಆತ್ಮೀಯ ಬಂಧ ಹೊಂದಿರುವ ಅನುರಾಗ್ ಕಶ್ಯಪ್, ದಕ್ಷಿಣದ ಚಿತ್ರರಂಗದ ಮುಂದೆ ಬಾಲಿವುಡ್ ಕಳಪೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಬಾಲಿವುಡ್ನ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ದಾರೆ.

'ಎಲ್ಲ ತಂತ್ರಜ್ಞಾನ ಸುಲಭಕ್ಕೆ ಲಭ್ಯವಾಗುವಂತಾಗಿದೆ'
ನಾವು ಹಾಲಿವುಡ್ ಅನ್ನು ಹೇಗೆ ನೋಡುತ್ತೇವೆಯೋ ಹಾಗೆ ಈಗ ಬಾಲಿವುಡ್ ಅನ್ನು ನೋಡುವಂತಾಗಿದೆ. ಇಂಗ್ಲಿಷ್ ಭಾಷೆ ಹೆಚ್ಚು ಸಾರ್ವತ್ರಿಕ ಹಾಗೆಯೇ ಹಿಂದಿ ಸಹ ಹೆಚ್ಚು ಸಾರ್ವತ್ರಿಕವಾಗಿದೆ ಭಾವಿಸಲಾಗಿದೆ ಆದರೆ ಅದು ಸುಳ್ಳು. ಈಗ ಕ್ಯಾಮೆರಾಗಳು ಸುಲಭಕ್ಕೆ ಎಲ್ಲರಿಗೂ ಲಭ್ಯವಾಗುತ್ತಿವೆ. ಕ್ಯಾಮೆರಾ ರೆಸ್ಯೂಲಷನ್ಗಳಂತೂ 4k ನಿಂದ 6k ಗೆ ಹೋಗಿದೆ. ಇನ್ನೂ ಅದೆಲ್ಲೆಲ್ಲಿಗೆ ಹೋಗುತ್ತದೆಯೋ ದೇವರಿಗೇ ಗೊತ್ತು. ನೀವು ಸ್ಥಳೀಯ ನಟರನ್ನು ಹಾಕಿಕೊಂಡು ಸಿನಿಮಾ ಮಾಡಬಹುದು, ಚಲನಚಿತ್ರಗಳನ್ನು ಮಾಡಲು ನಿಮಗೆ ಹೆಚ್ಚು ಜನರ ಅಗತ್ಯವೂ ಇರುವುದಿಲ್ಲ. ಕೇಂದ್ರದಲ್ಲಿ ಗಟ್ಟಿ ಶಕ್ತಿಯೊಂದು ಇಲ್ಲದಾಗ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿಯೂ ಸಹ ಹಾಗೆಯೇ ಆಗುತ್ತಿದೆ'' ಎಂದಿದ್ದಾರೆ ಅನುರಾಗ್ ಕಶ್ಯಪ್.

ಬಾಲಿವುಡ್ ನೆಲದೊಂದಿಗೆ ನಂಟು ಹೊಂದಿಲ್ಲ
ನನ್ನನ್ನು ಕೇಳಿದರೆ, ಇಂದಿನ ಸಮಯದಲ್ಲಿ ನೀವು ಎಲ್ಲಿಂದ ಬೇಕಾದರೂ ಸಿನಿಮಾಗಳನ್ನು ನಿರ್ಮಿಸಬಹುದು ಮತ್ತು ಆ ಸಿನಿಮಾಗಳನ್ನು ಎಲ್ಲಿಗೆ ಬೇಕಾದರೂ ತಲುಪಿಸಬಹುದು. ಮತ್ತು ಅಂಥಹಾ ರಿಮೋಟ್ ಪ್ರದೇಶದಿಂದಲೇ ಗಟ್ಟಿಯಾದ ಸಿನಿಮಾಗಳು ಬರುತ್ತವೆ. ಬಾಲಿವುಡ್ ಎಂದಿಗೂ ಮೂಲ ಸಂಸ್ಕೃತಿಯ ಕತೆಗಳನ್ನಾಗಲಿ, ನೆಲದ ನಂಟು ಹೊಂದಿದ ಕತೆಗಳನ್ನಾಗಲಿ ಹೇಳಿಲ್ಲ, ಬಾಲಿವುಡ್ ಯಾವಾಗಲೂ ಮಾಸ್ ಪ್ರೇಕ್ಷಕರಿಗಾಗಿ ಸಿನಿಮಾ ಮಾಡುತ್ತಿದೆ. ಚೆನ್ನಾಗಿ ಬೇರೂರಿರುವ ನಿರ್ಮಾಪಕರು ಇಲ್ಲಿದ್ದಾರೆಯೇ ಹೊರತು ಉದ್ಯಮವಾಗಿ, ಅದು ಎಂದಿಗೂ ಬೇರೂರಲಿಲ್ಲ'' ಎಂದಿದ್ದಾರೆ ಅನುರಾಗ್ ಕಶ್ಯಪ್.

ಬಾಲಿವುಡ್ ಮಾದರಿಯ ವಿರುದ್ಧ ನಿಂತಿರುವ ಅನುರಾಗ್
ಅನುರಾಗ್ ಕಶ್ಯಪ್, ಬಾಲಿವುಡ್ ನಿರ್ದೇಶಕರಾದರೂ ಎಂದಿಗೂ ಬಾಲಿವುಡ್ನ ಸಂಪ್ರದಾಯಗಳನ್ನು ಪಾಲಿಸಿದ ನಿರ್ದೇಶಕರಲ್ಲ. ಬಾಲಿವುಡ್ನ ಬಹುತೇಕ ನಿರ್ದೇಶಕರು ಒಂದು ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದರೆ, ಅನುರಾಗ್ ಕಶ್ಯಪ್ ಅದಕ್ಕೆ ವಿರುದ್ಧವಾದ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. 'ಗ್ಯಾಂಗ್ಸ್ ಆಫ್ ವಾಸೆಪುರ್', 'ಬ್ಲ್ಯಾಕ್ ಫ್ರೈಡೆ', 'ನೋ ಸ್ಮೋಕಿಂಗ್', 'ದೇವ್ ಡಿ' ಮಾದರಿಯ ಪೂರ್ಣ ಭಿನ್ನವಾದ ಹಾಗೂ ನಿಜಕ್ಕೆ ಹತ್ತಿರವಾದ ಸಿನಿಮಾಗಳನ್ನು ಅನುರಾಗ್ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ.

ಬಿದ್ದ ಬಾಲಿವುಡ್, ಗೆದ್ದ ದಕ್ಷಿಣ ಭಾರತ ಚಿತ್ರರಂಗ
ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ಯುದ್ಧದಲ್ಲಿ ದಕ್ಷಿಣ ಭಾರತದ ಚಿತ್ರರಂಗ ಸ್ಪಷ್ಟ ವಿಜಯ ಸಾಧಿಸಿದೆ. ಕೋವಿಡ್ ಎರಡನೇ ಅಲೆಯ ಬಳಿಕ 'ಪುಷ್ಪ 2' ಸಿನಿಮಾದಿಂದ ಆರಂಭಿಸಿ, 'RRR', 'ಕೆಜಿಎಫ್ 2', '777 ಚಾರ್ಲಿ', ಇದೀಗ 'ಕಾಂತಾರ' ಸಿನಿಮಾಗಳು ಬಾಲಿವುಡ್ ಅನ್ನು ಅಲ್ಲಾಡಿಸಿವೆ. ಕಳೆದ ಕೆಲ ವರ್ಷಗಳಲ್ಲಿ ಬಿಡುಗಡೆ ಆದ ಬಾಲಿವುಡ್ನ ಬಹುತೇಕ ಸಿನಿಮಾಗಳು ಫ್ಲಾಪ್ ಆಗಿವೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಆಮಿರ್ ಖಾನ್, ಸಲ್ಮಾನ್ ಖಾನ್ ಸಿನಿಮಾಗಳು ಸಹ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ನೆಲ ಕಚ್ಚಿವೆ.


Click it and Unblock the Notifications










