ಶಾರುಖ್ ಖಾನ್ಗೆ ಬೆಂಕಿ ಇಟ್ಟು ಕೊಲ್ಲುವೆ: ಪರಮಹಂಸ ಆಚಾರ್ಯ ಸ್ವಾಮೀಜಿ
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ವಿವಾದ ದಿನೇ-ದಿನೇ ಹೆಚ್ಚು ಮಾಡಲಾಗುತ್ತಿದೆ. ತೀರ ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾದ ವಿವಾದಕ್ಕೆ ಈಗ ಪ್ರತಿಭಟನೆ, ಕೊಲೆ ಬೆದರಿಕೆಗಳು ಸೇರಿಕೊಂಡಿವೆ.
'ಪಠಾಣ್' ಸಿನಿಮಾದ 'ಬೇಷರಮ್' ಹಾಡು ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದ್ದು ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಈ ಹಿಂದೆಯೂ ಹಲವು ಸಿನಿಮಾಗಳಲ್ಲಿ ನಟಿಯರು ಕೇಸರಿ ಬಣ್ಣದ ತುಂಡುಡುಗೆಗಳನ್ನು ತೊಟ್ಟು ಗ್ಲಾಮರಸ್ ಆಗಿ ನರ್ತಿಸಿದ್ದಿದೆ. ಆದರೆ ಶಾರುಖ್ ಖಾನ್ ಸಿನಿಮಾ ಎಂಬ ಕಾರಣಕ್ಕೆ ವಿವಾದಕ್ಕೆ ಆಯ್ದುಕೊಳ್ಳಲಾಗಿದೆ ಎಂಬ ವಾದವೂ ಇದೆ.
ಈ ಕುರಿತು ಈಗಾಗಲೇ ಕೆಲವು ಕಡೆ ಪ್ರತಿಭಟನೆಗಳು ನಡೆದು, ಶಾರುಖ್ ಖಾನ್ರ ಪೋಸ್ಟರ್ಗಳನ್ನು, ಪ್ರತಿಕೃತಿಗಳನ್ನು ದಹಿಸಲಾಗಿದೆ. ಇದೀಗ ಸ್ವಾಮೀಜಿಯೊಬ್ಬರು ಶಾರುಖ್ ಖಾನ್ ರನ್ನು ಜೀವಂತ ಸುಡುವುದಾಗಿ ಬೆದರಿಕೆ ಹಾಕಿದ್ದಾರೆ.

ಅಯೋಧ್ಯೆಯ ತಾಪಸಿ ಜಿ ಟಿ ಚವನ್ನಿ ದೇವಾಲಯದ ಪ್ರಧಾನ ಪೂಜಾರಿಯಾಗಿರುವ ಪರಮಹಂಸ ಆಚಾರ್ಯ ಎಂಬಾತ ಶಾರುಖ್ ಖಾನ್ಗೆ ನೇರ ಬೆದರಿಕೆ ಹಾಕಿದ್ದು, ಶಾರುಖ್ ಖಾನ್ ಸಿಕ್ಕರೆ ಅವನನ್ನು ಜೀವಂತವಾಗಿ ಸುಡುತ್ತೇನೆ ಎಂದಿದ್ದಾರೆ.
'ಆ ಸಿನಿಮಾದ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅಪಮಾನ ಮಾಡಲಾಗಿದೆ. ಸನಾತನ ಧರ್ಮೀಯರು ಸತತವಾಗಿ ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಶಾರುಖ್ ಖಾನ್ನ ಪೋಸ್ಟರ್ಗಳನ್ನು ಸುಟ್ಟಿದ್ದೇವೆ, ನಾನೆಂದಾದರೂ ಈ 'ಫಿಲಂ ಜಿಹಾದಿ' ಶಾರುಖ್ ಖಾನ್ ಅನ್ನು ಭೇಟಿಯಾದರೆ ಆತನನ್ನು ಜೀವಂತ ಸುಡುತ್ತೇನೆ'' ಎಂದಿದ್ದಾರೆ.
ಅಷ್ಟಕ್ಕೆ ನಿಲ್ಲದ ಸ್ವಾಮೀಜಿ, ''ಪಠಾಣ್' ಸಿನಿಮಾವನ್ನು ಎಲ್ಲರೂ ಬಾಯ್ಕಾಟ್ ಮಾಡಬೇಕು, 'ಪಠಾಣ್' ಸಿನಿಮಾ ಬಿಡುಗಡೆ ಆದ ಚಿತ್ರಮಂದಿರಗಳಿಗೆ ಬೆಂಕಿ ಇಡುತ್ತೇನೆ'' ಎಂದಿದ್ದಾರೆ.
'ಪಠಾಣ್' ಸಿನಿಮಾದ ವಿರುದ್ಧ, ಶಾರುಖ್ ಖಾನ್ ವಿರುದ್ಧ ಮುಂಬೈನಲ್ಲಿ ವಿಎಚ್ಪಿ ದೂರು ನೀಡಿದೆ. ಸಿನಿಮಾವನ್ನು ಹಿಂದು ವಿರೋಧಿ ಎಂದು ಕರೆಯಲಾಗಿದೆ.


Click it and Unblock the Notifications











