ವರ್ಮಾ 'ಸತ್ಯ-2' ಟ್ರೇಲರ್ ನಲ್ಲೇನಿದೆ?
ರಾಮ್ ಗೋಪಾಲ್ ವರ್ಮಾ ಭೂಗತ ಜಗತ್ತಿನ ಬಗ್ಗೆ ಸಂಶೋಧನಾ ಮತ್ತು ಅಭಿವೃದ್ಧಿ ನಡೆಸುವವರಿಗೆ ಅಧಿಕೃತ ವಕ್ತಾರ ಎನ್ನಬಹುದು. ಸತ್ಯ ಎಂಬ ಚಿತ್ರದ ಮೂಲಕ ಇಡೀ ಹಿಂದಿ ಚಿತ್ರರಂಗಕ್ಕೆ ರಕ್ತದ ವಾಸನೆ, ಭೂಗತ ಜಗತ್ತಿನ ಭಯಂಕರ ಸತ್ಯಗಳು, ದೈನಂದಿನ ಬದುಕಿನ ತಲ್ಲಣಗಳ ಪರಿಚಯ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕ.
ಈಗ ಸತ್ಯ ಚಿತ್ರದ ಮುಂದುವರೆದ ಭಾಗವನ್ನು ವರ್ಮಾ ಹೊರ ತರುತ್ತಿದ್ದಾರೆ. ಸತ್ಯ 2 ಟ್ರೇಲರ್ ಈಗಾಗಲೇ ತೆಲುಗು, ತಮಿಳಿನಲ್ಲಿ ಬಿಡುಗಡೆಯಾಗಿತ್ತು. ಈಗ ಹಿಂದಿಯಲ್ಲಿ ರಿಲೀಸ್ ಆಗಿದೆ. ಎಂದಿನಂತೆ ಹೊಸಬರಿಗೆ ವರ್ಮಾ ಮಣೆ ಹಾಕಿದ್ದಾರೆ. ಪುನೀತ್ ಸಿಂಗ್ ಹಿಂದಿ ಆವೃತ್ತಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನಲ್ಲಿ ಶರ್ವಾನಂದ್ ನಟಿಸುತ್ತಿದ್ದಾರೆ.

ಟ್ರೇಲರ್ ನಲ್ಲಿ ಹೊಸದೇನಿದೆ ಎಂದು ನೋಡಿದರೆ ಎಂದಿನಂತೆ ಮೊದಲ ದೃಶ್ಯದಲ್ಲೇ ಗಮನ ಸೆಳೆಯುವುದು ವರ್ಮಾ ಅವರ ತಂಡದ ಕೆಮೆರಾ ಕೈಚಳಕ ಹಾಗೂ ಹಿನ್ನೆಲೆ ಸಂಗೀತ.
ದಾವೂದ್ ಇಬ್ರಾಹಿಂ ನಿವೃತ್ತಿ ಹೊಂದಿದ್ದಾನೆ. ಛೋಟಾ ಶಕೀಲ್ ನಿಷ್ಕ್ರಿಯನಾಗಿದ್ದಾನೆ. ಹೀಗಾಗಿ ಭೂಗತ ಜಗತ್ತು, ರೌಡಿಸಂ ಇನ್ನಿಲ್ಲ ಎಂದು ಅನೇಕ ಜನ ತಿಳಿದಿದ್ದಾರೆ. ಆದರೆ, ಮನುಷ್ಯರಲ್ಲಿ ಆಸೆ, ಆಕಾಂಕ್ಷೆ ಇರುವ ತನಕ ಭೂಗತ ಜಗತ್ತು ಮರೆಯಾಗುವುದಿಲ್ಲ. ಭೂಗತ ಜಗತ್ತಿನ ಸ್ವರೂಪ ಬದಲಾಗಬಹುದು ಅಷ್ಟೇ ಎಂದು ಟ್ರೇಲರ್ ನಲ್ಲಿ ಹೇಳಲಾಗಿದೆ.
ಚರ್ಚ್ ಗೇಟ್ ರೈಲ್ವೆ ಸ್ಟೇಷನ್ ಬಳಿ ನಾಯಕನ ಪಾತ್ರಧಾರಿ ಸತ್ಯ ಬರುವ ದೃಶ್ಯ. ಡಾನ್ ಒಬ್ಬರನ್ನು ಭೇಟಿ ಮಾಡುವ ದೃಶ್ಯವಿದೆ. ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹಾಗೂ ಅಬು ಸಲೇಂ ಅವರು ಮಾಡಿದ ತಪ್ಪೆಂದರೆ ಅವರ ಕಂಪನಿಗೆ ಒಂದು ಹೆಸರು ನೀಡಿದ್ದು,ಜನ ಎಂದಿಗೂ ಕಾಣದೆ ಇರುವ ಶಕ್ತಿಗೆ ಹೆದರುವುದು ಜಾಸ್ತಿ
ಸತ್ಯ ಈ ಚಿತ್ರದಲ್ಲಿ ಮುಂಬೈನ ಮೂರು ಪ್ರಭಾವಿ ವ್ಯಕ್ತಿಗಳನ್ನು ಕೊಲ್ಲಲು ಸಂಚು ಹೂಡುತ್ತಾನೆ. ಶ್ರೀಮಂತ ಉದ್ಯಮಿ, ಪೊಲೀಸ್ ಆಯುಕ್ತ ಹಾಗೂ ಮಾಧ್ಯಮ ಚಾನೆಲ್ ಒಡೆಯ ಅವನ ಟಾರ್ಗೆಟ್.
<center><iframe width="100%" height="360" src="//www.youtube.com/embed/Ycl6CkZYms0" frameborder="0" allowfullscreen></iframe></center>
ಎಂದಿನಂತೆ ಈ ಕೊಲೆ ಸಂಚಿನ ನಡುವೆ ಪ್ರೇಮಕಥೆ ಇರುತ್ತದೆ. ಪ್ರೇಮಕಥೆಗೆ ಎಷ್ಟು ಮಹತ್ವ ಇದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಭೂಗತ ಜಗತ್ತಿನ ಹೊಸ ಆವಿಷ್ಕಾರ ಅಥವಾ ಮರುಹುಟ್ಟು ಕಾಣಬಹುದು ಎಂದಿರುವ ವರ್ಮಾಗೂ ಈಗ ಮರು ಹುಟ್ಟು ಬೇಕಿದೆ, ಸಾಲು ಸಾಲು ಫ್ಲಾಪ್ ಚಿತ್ರಗಳ ನಂತರ ವರ್ಮಾ ಅವರ ಬಹು ಯಶಸ್ವಿ ಚಿತ್ರ ಸತ್ಯ ದ ಮುಂದಿನ ಭಾಗ ಮತ್ತೊಮ್ಮೆ ಜಯ ತಂದು ಕೊಡುವುದೇ ಕಾದುನೋಡಬೇಕಿದೆ.


Click it and Unblock the Notifications










