ಮುಂಬೈ ಭೂಗತ ಜಗತ್ತಿಗೆ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಎಂಟ್ರಿ
'ದಾವೂದ್ ಇಬ್ರಾಹಿಂ ನಿವೃತ್ತಿ ಹೊಂದಿದ್ದಾನೆ. ಛೋಟಾ ಶಕೀಲ್ ನಿಷ್ಕ್ರಿಯನಾಗಿದ್ದಾನೆ. ಹೀಗಾಗಿ ಭೂಗತ ಜಗತ್ತು, ರೌಡಿಸಂ ಇನ್ನಿಲ್ಲ ಎಂದು ಅನೇಕ ಜನ ತಿಳಿದಿದ್ದಾರೆ. ಆದರೆ, ಮನುಷ್ಯರಲ್ಲಿ ಆಸೆ, ಆಕಾಂಕ್ಷೆ ಇರುವ ತನಕ ಭೂಗತ ಜಗತ್ತು ಮರೆಯಾಗುವುದಿಲ್ಲ. ಭೂಗತ ಜಗತ್ತಿನ ಸ್ವರೂಪ ಬದಲಾಗಬಹುದು ಅಷ್ಟೇ' ಎಂದು ಏಳು ವರ್ಷ ಹಿಂದೆ ಹೇಳಿದ್ದ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಭೂಗತ ಜಗತ್ತಿನತ್ತ ಹೊರಳಿದ್ದಾರೆ.
ಸತ್ಯ, ಕಂಪನಿ ಹಾಗೂ ಡಿ ಚಿತ್ರಗಳ ನಂತರ ಸತ್ಯ 2 ಮೂಲಕ ಮತ್ತೊಮ್ಮೆ ಮುಂಬೈನ ಭೂಗತ ಜಗತ್ತಿನ ಗಲ್ಲಿ ಗಲ್ಲಿಗಳಲ್ಲಿ ಪ್ರೇಕ್ಷಕರನ್ನು ಅಡ್ಡಾಡುವಂತೆ ಮಾಡಿದ್ದರು. ಹಿಂದಿ ಚಿತ್ರರಂಗಕ್ಕೆ ರಕ್ತದ ವಾಸನೆ, ಭೂಗತ ಜಗತ್ತಿನ ಭಯಂಕರ ಸತ್ಯಗಳು, ದೈನಂದಿನ ಬದುಕಿನ ತಲ್ಲಣಗಳ ಪರಿಚಯ ಮಾಡಿಕೊಟ್ಟ ನಿರ್ಮಾಪಕ, ನಿರ್ದೇಶಕ ವರ್ಮಾ ಈಗ ಮೊಬೈಲಿಗೂ ಲಗ್ಗೆ ಇಡುತ್ತಿದ್ದು, ಹೊಸ ವೆಬ್ ಸೀರಿಸ್ ಗೆ ಕೈ ಹಾಕಿದ್ದಾರೆ.

ಮನೋಜ್ ಬಾಜಪೇಯಿ, ಜೆಡಿ ಚಕ್ರವರ್ತಿಗೆ ಒಳ್ಳೆ ಬ್ರೇಕ್ ಕೊಟ್ಟ ವರ್ಮಾ ಚಿತ್ರಗಳಲ್ಲಿ ಚಿತ್ರದ ಹೈಲೇಟ್ ಎನಿಸುವ ಛಾಯಾಗ್ರಹಣ, ಸಾಹಸ ದೃಶ್ಯಗಳು ವೆಬ್ ಸೀರಿಸ್ ನಲ್ಲೂ ಮುಂದುವರೆಯುವ ನಿರೀಕ್ಷೆಯಿದೆ.
ಈ ಹಿಂದೆ, ಕಡಪ, ಗನ್ಸ್ ಅಂಡ್ ಥೈಯ್ಸ್'ಎಂಬ ವೆಬ್ ಸರಣಿ ಘೋಷಿಸಿದ್ದರು. ಮುಂಬೈ ನಗರದಲ್ಲಿ ನಡೆಯುತ್ತಿದ್ದ ನಗ್ನ ಕಥೆಗಳನ್ನ ಯಾವುದೇ ಮುಲಾಜಿಲ್ಲದೇ ಈ ವೆಬ್ ಸೀರಿಸ್ ನಲ್ಲಿ ವರ್ಮ ತೋರಿಸಲು ಹೊರಟ್ಟಿದ್ದರು. ಬೆತ್ತಲಾದ ನಟಿ, ಚಿಕ್ಕ ಹುಡುಗನ ಮುಖದ ಮೇಲೆ ರಕ್ತ, ನಡುಬೀದಿಯಲ್ಲಿ ಕೊಲೆ, ಪೊಲೀಸರ ಅಕ್ರಮ, ವೇಶ್ಯವಾಟಿಕೆ, ಅಂಡರ್ ವರ್ಲ್ಡ್ ಹೀಗೆ ಯಾವುದನ್ನ ಬಿಡದೆ ನಿಷ್ಪಕ್ಷಪಾತವಾಗಿ ತೆರೆ ಮೇಲೆ ತರಲು ಮುಂದಾಗಿ ಸೆನ್ಸಾರ್ ಇಲ್ಲದ ಟೀಸರ್ ಬಿಟ್ಟಿದ್ದರು.
ಈಗ ಮುಂಬೈ ಅಂಡರ್ ವರ್ಲ್ಡ್ ನ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರ ಕೃತ್ಯಗಳ ಒಳನೋಟವನ್ನು ನೀಡಲು ಆರ್ ಜಿವಿ ಮುಂದಾಗಿದ್ದಾರೆ ಎಂಬ ಸುದ್ದಿಯಿದೆ.
1980ರ ದಶಕದಿಂದ 1993 ಮುಂಬೈ ಸರಣಿ ಸ್ಫೋಟದ ತನಕ ಕಥೆ ಸಾಗಲಿದ್ದು, ಈ ವೆಬ್ ಸರಣಿಗಾಗಿ ಸಾಕಷ್ಟು ಸಂಶೋಧನೆ ನಡೆಸಿರುವುದಾಗಿ ವರ್ಮಾ ಹೇಳಿಕೊಂಡಿದ್ದಾರೆ. 2002ರಲ್ಲಿ ತೆರೆ ಕಂಡ ಕಂಪನಿ ಹೆಸರಿನ ಸಿನಿಮಾ ಕೂಡಾ ದಾವೂದ್ ಕಥೆಯನ್ನು ಹೊಂದಿತ್ತು. ಅಜಯ್ ದೇವಗನ್, ವಿವೇಕ್ ಒಬೆರಾಯ್, ಊರ್ಮಿಳಾ ನಟಿಸಿದ್ದರು. 2020ರಲ್ಲಿ ಮಿಥುನ್ ಚಕ್ರವರ್ತಿ, ಫ್ಲೋರಾ ಸೈನಿ ಮುಂತಾದವರು ನಟಿಸಿರುವ ಗೆಹರ್ ಹೆಸರಿನ ಹಾರರ್ ಚಿತ್ರವನ್ನು ವರ್ಮಾ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications










