ಭಂಡಾರ ಆಸ್ಪತ್ರೆ ದುರಂತ: ತನಿಖೆ ಆಗಲೇ ಬೇಕು ಎಂದ ನಟ ರಿತೇಶ್ ದೇಶ್ ಮುಖ್
ಮಹಾರಾಷ್ಟ್ರದ ಭಂಡಾರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ನವಜಾತ ಕಂದಮ್ಮಗಳು ಮೃತಪಟ್ಟಿದ್ದಾರೆ. ಕರಳುಹಿಂಡುವ ಈ ದುರಂತ ಘಟನೆಗೆ ಇಡೀ ದೇಶವೇ ಮರುಗಿದೆ.
ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ 17 ಜನ ಮಕ್ಕಳಲ್ಲಿ ಏಳು ಶಿಶುಗಳನ್ನು ಆಸ್ಪತ್ರೆ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ ಇನ್ನೂ 10 ಮಕ್ಕಳು ಸುಟ್ಟು ಗಾಯ ಮತ್ತು ಹೊಗೆಯಿಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.
ಈ ಘಟನೆ ಬಗ್ಗೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಬೇಸರ ವ್ಯಕ್ತಪಡಿಸಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿತೇಶ್, 'ಈ ಘಟನೆ ನೋಡಿ ನನ್ನ ಹೃದಯ ಛಿದ್ರವಾಗಿದೆ. ತುಂಬಾ ಬೇಸರದ ಸಂಗತಿ. ಯಾವ ತಂದೆ ತಾಯಿಗೂ ಈ ರೀತಿ ಆಗಬಾರದು. ಮಗುವನ್ನು ಕಳೆದುಕೊಂಡ ಕುಟುಂಬದವರಿಗೆ ನನ್ನ ಸಂತಾಪ. ದುಃಖ ಭರಿಸುವ ಶಕ್ತಿ ದೇವರು ನೀಡಲಿ' ಎಂದಿದ್ದಾರೆ.

ಇನ್ನು ಟ್ವೀಟ್ ಮಾಡಿ, 'ಈ ಬಗ್ಗೆ ತನಿಖೆ ಆಗಲೇ ಬೇಕು. ನಿರ್ಲಕ್ಷ್ಯದಿಂದ ಆಗಿದ್ದರೆ ಅಂಥವರಿಗೆ ಶಿಕ್ಷೆ ಆಗಲೇ ಬೇಕು' ಎಂದು ರಿತೇಶ್ ಹೇಳಿದ್ದಾರೆ. ದುರಂತ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ 48 ಗಂಟೆಗಳೊಳಗೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣ ಆಯೋಗ ಸೂಚಿಸಿದೆ.
ಸರ್ಕ್ಯೂಟ್ ನಿಂದ ಈ ಬೆಂಕಿ ಹೊತ್ತುಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶನಿವಾರ ನಸುಕಿನ ಅವಧಿಯಲ್ಲಿ ವಾರ್ಡ್ ನಿಂದ ಹೊಗೆ ಬರುವುತ್ತಿರುವುದನ್ನು ನರ್ಸ್ ಒಬ್ಬರು ಗಮನಿಸಿದರು. ಕೂಡಲೇ ಅಲ್ಲಿಗೆ ದೌಡಾಯಿಸಿದ ಆಸ್ಪತ್ರೆ ಸಿಬ್ಬಂದಿ ಮಕ್ಕಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದರು. ಆದರೆ ವೇಗವಾಗಿ ಆವರಿಸಿದ ಬೆಂಕಿಗೆ ಹತ್ತು ಮಕ್ಕಳು ಆಹುತಿಯಾಗಿದ್ದಾರೆ. ಏಳು ಮಕ್ಕಳನ್ನು ಉಳಿಸಲಾಗಿದೆ' ಎಂದು ಭಂಡಾರ ಜಿಲ್ಲಾ ಜನರಲ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಮೋದ್ ಖಂಡಟೆ ತಿಳಿಸಿದ್ದಾರೆ.


Click it and Unblock the Notifications










